ಸಾರಾಂಶ
ದ್ವೇಷ ರಾಜಕೀಯ ತಿರಸ್ಕರಿಸಿ ಎಂದು ಜನತೆಗೆ ಸೋನಿಯಾ ಮನವಿ ಮಾಡಿದ್ದು, ಸುಳ್ಳು-ದ್ವೇಷ ಹರಡುವ ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿ ಉಜ್ವಲ, ಸಮಾನತೆ ಇರುವ ಭವಿಷ್ಯಕ್ಕಾಗಿ ‘ಕೈ’ ಬಲಪಡಿಸಿ ಎಂದು ಕೋರಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ಅಧಿನಾಯಕಿ ಉಜ್ವಲ ಮತ್ತು ಸಮಾನತೆಯುಳ್ಳ ಭವಿಷ್ಯ ಕಾಣಲು ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಚಲಾಯಿಸುವಂತೆ ಹಾಗೂ ಸುಳ್ಳು-ದ್ವೇಷ ಹರಡುವ ಬಿಜೆಪಿ ಸೋಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ನೀಡಿರುವ ಅವರು, ‘ಭಾರತದಲ್ಲಿ ನಿರುದ್ಯೋಗ, ಮಹಿಳಾ ದೌರ್ಜನ್ಯ ಮತ್ತು ದಲಿತರ ತಾರತಮ್ಯ ತಾರಕಕ್ಕೇರಿದೆ. ಇವುಗಳನ್ನು ಹೋಗಲಾಡಿಸಿ ಉಜ್ವಲ ಮತ್ತು ಸರ್ವರಿಗೂ ಸಮಾನ ಅವಕಾಶ ನೀಡುವಂತಹ ಸಮಾಜವನ್ನು ರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದ ರಕ್ಷಣೆಯ ಜೊತೆಗೆ ಬಡವರು, ಯುವಜನರು, ಮಹಿಳೆಯರು, ರೈತರು ಮತ್ತು ಕಾರ್ಮಿಕರ ರಕ್ಷಣೆಗೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿ’ ಎಂದು ಕರೆ ನೀಡಿದ್ದಾರೆ.ಬಿಜೆಪಿ ವಿರುದ್ಧ ವಾಗ್ದಾಳಿ: ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘ಬಿಜೆಪಿಯು ಸುಳ್ಳು ಮತ್ತು ದ್ವೇಷವನ್ನು ಬಿತ್ತುತ್ತಿದೆ. ಬಿಜೆಪಿಯು ಕೇವಲ ಅಧಿಕಾರಕೇಂದ್ರಿತವಾಗಿದ್ದು, ಸಮಾಜದಲ್ಲಿ ಸರ್ವರನ್ನೂ ಒಳಗೊಂಡು ಮುನ್ನುಗ್ಗುವ ಸಂಕಲ್ಪವನ್ನು ಮರೆತಿದೆ’ ಎಂದು ವಾಗ್ದಾಳಿ ನಡೆಸಿದರು.