ಅಂತೂ ಎಸ್‌ಪಿ - ಕಾಂಗ್ರೆಸ್‌ ಮೈತ್ರಿ

| Published : Feb 22 2024, 01:50 AM IST / Updated: Feb 22 2024, 08:02 AM IST

Rahul Akilesh

ಸಾರಾಂಶ

ಕಾಂಗ್ರೆಸ್‌ಗೆ 17 ಸ್ಥಾನ ನೀಡಲು ಎಸ್‌ಪಿ ಒಪ್ಪಿಗೆ ನೀಡಿದ್ದು ಪ್ರಿಯಾಂಕಾ ಮಧ್ಯಸ್ಥಿಕೆಯಲ್ಲಿ ಬಿಕ್ಕಟ್ಟು ಅಂತ್ಯಗೊಂಡಿದೆ.

ಲಖನೌ: ಲೋಕಸಭೆ ಚುನಾವಣೆ ಕ್ಷೇತ್ರ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ನಡುವೆ ಉಂಟಾಗಿದ್ದ ಬಿಕ್ಕಟ್ಟು ಶಮನಗೊಂಡಿದೆ. 

ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಈ ಬಿಕ್ಕಟ್ಟು ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕಾಂಗ್ರೆಸ್‌ 17 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದೆ.

ಈ ಕುರಿತಾಗಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಉಭಯ ಪಕ್ಷಗಳ ನಾಯಕರು, ಎರಡು ಪಕ್ಷಗಳ ನಡುವಿನ ಸೀಟು ಹಂಚಿಕೆ ಬಿಕ್ಕಟ್ಟು ಬಗೆಹರಿದಿದೆ ಎಂದು ತಿಳಿಸಿದ್ದಾರೆ. 

ಟಿಎಂಸಿ ಮತ್ತು ಆಪ್‌ ಬಳಿಕ ಸಮಾಜವಾದಿ ಪಕ್ಷದ ಜೊತೆಗೂ ಸಹ ಸೀಟು ಹಂಚಿಕೆಯಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. 

ಇದಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಅವರು ಅಖಿಲೇಶ್‌ ಯಾದವ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಕೆಲವು ಶ್ರಾವಸ್ತಿ, ವಾರಣಾಸಿ ಸೇರಿದಂತೆ ಕೆಲವು ಸೀಟುಗಳನ್ನು ಬಿಟ್ಟುಕೊಡಲು ಅಖಿಲೇಶ್‌ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಅಖಿಲೇಶ್‌ ಯಾದವ್‌ ಅವರು ಮೈತ್ರಿಯನ್ನು ಸಂಕೇತಿಸುವ ಸಲುವಾಗಿ ಆಗ್ರಾದಲ್ಲಿ ನಡೆಯಲಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.