ಸಾರಾಂಶ
ನವದೆಹಲಿ : ಮಹಿಳೆಯರನ್ನು ಗುರಿಯಾಗಿಸಿ ಎಸಗುವ ಅಪರಾಧಗಳನ್ನು ರಾಜ್ಯ ಸರ್ಕಾರಗಳು ತ್ವರಿತವಾಗಿ ಬಗೆಹರಿಸಬೇಕು ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸ್ತ್ರೀಯರ ಮೇಲೆ ದೌರ್ಜನ್ಯ ಎಸಗುವವರಲ್ಲಿ ನಡುಕ ಹುಟ್ಟಿಸುವಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಕೋಲ್ಕತಾದಲ್ಲಿ ಇತ್ತೀಚೆಗೆ ವೈದ್ಯೆಯೊಬ್ಬರ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪರೋಕ್ಷವಾಗಿ ಪ್ರಸ್ತಾಪಿದ ಅವರು, ‘ಮಹಿಳೆಯರ ವಿರುದ್ಧದ ಅಪರಾಧಗಳನ್ನು ತ್ವರಿತವಾಗಿ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಸ್ತ್ರೀಯರ ಮೇಲೆ ದೌಜನ್ಯ ಎಸಗುವವರಿಗೆ ನಡುಕ ಹುಟ್ಟಿಸಬೇಕು. ನಾನಿಂದು ಕೆಂಪುಕೋಟೆಯ ಮೇಲೆ ನಿಂತು ನೋವು ವ್ಯಕ್ತಪಡಿಸುತ್ತಿದ್ದೇನೆ. ನಮ್ಮ ತಾಯಿ, ಅಕ್ಕ-ತಂಗಿಯರು ಹಾಗೂ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಿದೆ. ಈ ವಿಷಯದಲ್ಲಿ ಜನಸಾಮಾನ್ಯರಲ್ಲಿ ಆಕ್ರೋಶ ಮನೆಮಾಡಿದೆ. ನನಗದು ತಿಳಿಯುತ್ತದೆ’ ಎಂದು ಹೇಳಿದರು.
‘ಇಂತಹ ಕೃತ್ಯ ಎಸಗುವವರಿಗೆ ತಾವು ಗಲ್ಲಿಗೇರುತ್ತೇವೆ ಎಂಬುದು ಗೊತ್ತಾಗಬೇಕು. ಅವರ ವಿರುದ್ಧ ಯಾವುದೇ ವಿಳಂಬ ಮಾಡದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಬಾಂಗ್ಲಾ ಹಿಂದೂಗಳ ಸುರಕ್ಷತೆ ಬಗ್ಗೆ ಭಾರತಕ್ಕೆ ಕಳವಳ: ಮೋದಿ
ನವದೆಹಲಿ‘ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಹಿಂದೂಗಳು ಹಾಗೂ ಇತರ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಭಾರತದ 140 ಕೋಟಿ ಜನರು ಕಳವಳಗೊಂಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಅಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಆಶಿಸಿದ್ದಾರೆ.ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಬಾಂಗ್ಲಾ ವಿಷಯ ಪ್ರಸ್ತಾಪಿಸಿದ ಅವರು, ‘ಭಾರತವು ಬಾಂಗ್ಲಾದೇಶದ ಅಭಿವೃದ್ಧಿಯ ಪ್ರಯಾಣಕ್ಕೆ ಯಾವತ್ತೂ ಶುಭ ಹಾರೈಸುತ್ತದೆ. ಶಾಂತಿಗೆ ನಾವು ಸದಾ ಬದ್ಧರಾಗಿದ್ದೇವೆ. ಬಾಂಗ್ಲಾದೇಶದಲ್ಲಿ ನಡೆದಿರುವುದನ್ನು ನೆರೆ ದೇಶದವನಾಗಿ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಸುರಕ್ಷತೆಯ ಬಗ್ಗೆ 140 ಕೋಟಿ ಭಾರತೀಯರಿಗೆ ಕಳವಳವಿದೆ. ಭಾರತ ಯಾವತ್ತೂ ತನ್ನ ನೆರೆಯ ದೇಶ ಶಾಂತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಲಿ ಎಂದು ಬಯಸುತ್ತದೆ’ ಎಂದು ಹೇಳಿದರು.
ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ಬಳಿಕ ಆ ದೇಶದಲ್ಲಿ ಹಿಂದೂಗಳ ಮೇಲೆ ತೀವ್ರ ಹಿಂಸಾಚಾರ ಎಸಗಲಾಗುತ್ತಿದೆ.