ವೋಟ್‌ ಬ್ಯಾಂಕ್‌ ರಾಜಕೀಯದಿಂದ ನಮ್ಮ ಎನ್‌ಡಿಎ ಸರ್ಕಾರ ಬಲುದೂರ : ಪ್ರಧಾನಿ ನರೇಂದ್ರ ಮೋದಿ

| Published : Nov 17 2024, 01:18 AM IST / Updated: Nov 17 2024, 05:17 AM IST

ಸಾರಾಂಶ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಮತ ಬ್ಯಾಂಕ್‌ ರಾಜಕಾರಣದಿಂದ ಸಾವಿರಾರು ಮೈಲು ದೂರದಲ್ಲಿದೆ. ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ ಅಭಿವೃದ್ಧಿ’ ಎಂಬ ಮಂತ್ರದೊಂದಿಗೆ ನಮ್ಮ ಸರ್ಕಾರ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

  ನವದೆಹಲಿ : ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಮತ ಬ್ಯಾಂಕ್‌ ರಾಜಕಾರಣದಿಂದ ಸಾವಿರಾರು ಮೈಲು ದೂರದಲ್ಲಿದೆ. ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ ಅಭಿವೃದ್ಧಿ’ ಎಂಬ ಮಂತ್ರದೊಂದಿಗೆ ನಮ್ಮ ಸರ್ಕಾರ ನಡೆಯುತ್ತಿದೆ. ನವ ಭಾರತವನ್ನು ನಿರ್ಮಾಣ ಮಾಡಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ‘ಹಿಂದುಸ್ತಾನ್‌ ಟೈಮ್ಸ್‌’ ಆಂಗ್ಲಪತ್ರಿಕೆ ಆಯೋಜಿಸಿದ್ದ ನಾಯಕತ್ವ ಶೃಂಗದಲ್ಲಿ ಶನಿವಾರ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಮೋದಿ ಅವರು, ಹಿಂದಿನ ಸರ್ಕಾರಗಳು ಮತ ಬ್ಯಾಂಕ್‌ ರಾಜಕಾರಣ ಮಾಡಿದ್ದರಿಂದ ಆದ ಅತಿದೊಡ್ಡ ತೊಂದರೆ ಏನೆಂದರೆ, ಅಸಮತೋಲನದ ಅಸಮಾನತೆಗೆ ದೇಶದಲ್ಲಿ ಅವಕಾಶ ಹೆಚ್ಚುತ್ತಾ ಹೋಯಿತು ಎಂದು ಹೇಳಿದರು.

90ರ ದಶಕದಲ್ಲಿ ಭಾರತ 10 ವರ್ಷದಲ್ಲಿ ಐದು ಚುನಾವಣೆಗಳನ್ನು ಎದುರಿಸುವಂತಾಗಿತ್ತು. ದೇಶದಲ್ಲಿ ಅಷ್ಟೊಂದು ಅಸ್ಥಿರತೆ ಇತ್ತು. ನಮ್ಮ ದೇಶದ ಕತೆ ಇಷ್ಟೆ, ಹೀಗೇ ನಡೆಯುತ್ತದೆ ಎಂದು ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಿದ್ದ ತಜ್ಞರು ಹೇಳುತ್ತಿದ್ದರು. ಆದರೆ ದೇಶದ ನಾಗರಿಕರು ಅಂತಹ ಪರಿಣತರ ಎಣಿಕೆಯನ್ನು ಮತ್ತೊಮ್ಮೆ ಸುಳ್ಳಾಗಿಸಿದರು. ವಿಶ್ವಾದ್ಯಂತ ಸರ್ಕಾರಗಳು ಪ್ರತಿ ಚುನಾವಣೆಗೂ ಬದಲಾಗುತ್ತಿದ್ದರೆ ಭಾರತದಲ್ಲಿ ಮಾತ್ರ ನಮ್ಮ ಸರ್ಕಾರವನ್ನು ಸತತ ಮೂರು ಬಾರಿ ಆಯ್ಕೆ ಮಾಡಿದರು ಎಂದು ತಿಳಿಸಿದರು.

ಈ ಹಿಂದೆ ಸರ್ಕಾರಗಳನ್ನು ಚುನಾವಣೆ ಗೆಲ್ಲುವ ಉದ್ದೇಶದಿಂದ ಮಾತ್ರ ನಡೆಸಲಾಗುತ್ತಿತ್ತು. ಯೋಜನೆಗಳನ್ನು ಘೋಷಣೆ ಮಾಡಿ ಮತ ಬ್ಯಾಂಕ್‌ ಸೃಷ್ಟಿ ಮಾಡಿಕೊಳ್ಳಲಾಗುತ್ತಿತ್ತು. ಅಭಿವೃದ್ಧಿ ಮಂಡಳಿಗಳನ್ನು ನೇಮಿಸಲಾಯಿತಾದರೂ ಅವು ಕಾಣಲಿಲ್ಲ. ಇಂತಹ ಅಸಮತೋಲನದ ಪರಿಸ್ಥಿತಿಯಿಂದಾಗಿ ಸರ್ಕಾರದ ಮೇಲಿದ್ದ ಸಾರ್ವಜನಿಕ ವಿಶ್ವಾಸಕ್ಕೆ ಕುಂದುಂಟಾಯಿತು. ಆ ವಿಶ್ವಾಸವನ್ನು ನಾವೀಗ ಮರುಸ್ಥಾಪಿಸಿದ್ದೇವೆ. ಈ ಸಾಮಾಜಿಕ ಜಾಲತಾಣದ ಯುಗದಲ್ಲೂ ಸುಳ್ಳು ಮಾಹಿತಿ, ತಪ್ಪು ಮಾಹಿತಿಯ ಕಾಲದಲ್ಲೂ ಜನರು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿರಿಸಿದ್ದಾರೆ ಎಂದು ಮೋದಿ ಹೇಳಿದರು.

ಮೋದಿ 3 ದೇಶಗಳ ವಿದೇಶ ಯಾತ್ರೆ ಶುರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ ವಿದೇಶ ಯಾತ್ರೆ ಶನಿವಾರ ಆರಂಭವಾಗಿದೆ. ನೈಜೀರಿಯಾದಿಂದ ಅವರ ಪ್ರವಾಸ ಆರಂಭವಾಗಿದ್ದು, ಬ್ರೆಜಿಲ್‌ ಮತ್ತು ಗಯಾನಾ ದೇಶಗಳಿಗೆ ನಂತರ ಭೇಟಿ ನೀಡಲಿದ್ದಾರೆ.ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ನ.16- 17 ರಂದು ನೈಜೀರಿಯಾಕ್ಕೆ ಭೇಟಿ ನೀಡಲಿದ್ದಾರೆ. ಇದು 17 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರ ನೈಜೀರಿಯಾ ಭೇಟಿ ಆಗಿದೆ

ಇದಾದ ಬಳಿಕ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು 18, 19ರಂದು ಬ್ರೆಜಿಲ್‌ಗೆ ಭೇಟಿ ನೀಡಲಿದ್ದಾರೆ. ನಂತರ 21ರ ವರೆಗೆ ಗಯಾನಾಕ್ಕೂ ಭೇಟಿ ನೀಡಲಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ, ಜಿ20 ಶೃಂಗದಲ್ಲಿ ಅರ್ಥಪೂರ್ಣ ಮಾತುಕತೆಗೆ ಎದುರು ನೋಡುತ್ತಿರುವೆ ಎಂದಿದ್ದಾರೆ. ಶೃಂಗದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ಪಾಲ್ಗೊಳ್ಳಲಿದ್ದಾರೆ.