ಸಾರಾಂಶ
ನವದೆಹಲಿ: ‘ಸುಶಿಕ್ಷಿತರಾಗಿರುವ ನೀವು ಜೀವನಾಂಶವನ್ನೇಕೆ ಅವಲಂಬಿಸುತ್ತೀರಾ? ನೀವೇ ಯಾಕೆ ದುಡಿಯಬಾರದು’ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾ। ಬಿ.ಆರ್. ಗವಾಯಿ ಅವರು, ವಿಚ್ಛೇದಿತ ಮಹಿಳೆಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇವಲ ಒಂದೂವರೆ ವರ್ಷದ ದಾಂಪತ್ಯದ ಬಳಿಕ ವಿಚ್ಛೇದನ ಪಡೆದಿದ್ದ ಮಹಿಳೆಯೊಬ್ಬರು, ಪತಿಯಿಂದ 12 ಕೋಟಿ ರು. ಜೀವನಾಂಶ, ಮುಂಬೈನಲ್ಲೊಂದು ಮನೆ ಮತ್ತು ಬಿಎಂಡಬ್ಲ್ಯು ಕಾರ್ಗೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ। ಗವಾಯಿ, ‘ನೀವು ಎಂಬಿಎ ಪದವೀಧರೆ ಮತ್ತು ಅನುಭವಿ ಐಟಿ ಉದ್ಯೋಗಿ. ಹೀಗಿರುವಾಗ ಖುದ್ದಾಗಿ ಸಂಪಾದಿಸಬೇಕೇ ಹೊರತು, ಹಣವನ್ನು ಕೇಳಬಾರದು. 18 ತಿಂಗಳ ದಾಂಪತ್ಯಕ್ಕೆ ಪ್ರತಿಯಾಗಿ ನಿಮಗೆ ಪ್ರತಿ ತಿಂಗಳು 1 ಕೋಟಿ ರು. ಕೊಡಬೇಕೇ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆ ಮಹಿಳೆಯ ಹೆಸರಲ್ಲಿ ಮುಂಬೈನಲ್ಲಿ ಈಗಾಗಲೇ ಫ್ಲ್ಯಾಟ್ ಇರುವುದನ್ನು ಗಮನಿಸಿದ ಅವರು, ‘ಒಂದೋ ಆ ಮನೆಯನ್ನು ಇಟ್ಟುಕೊಂಡು ಸುಮ್ಮನಿದ್ದುಬಿಡಿ. ಇಲ್ಲವೇ, 4 ಕೋಟಿ ರು. ಪರಿಹಾರ ಪಡೆದು, ಬೆಂಗಳೂರು, ಪುಣೆ, ಹೈದರಾಬಾದ್ನಂತಹ ನಗರಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳಿ. ಅಲ್ಲಿ ಐಟಿ ಉದ್ಯೋಗಿಗಳಿಗೆ ಭಾರೀ ಬೇಡಿಕೆಯಿದೆ’ ಎಂದು ಸೂಚಿಸಿದ್ದಾರೆ.