ಹೈದರಾಬಾದ್: ಕೆಲ ಮತದಾರರು ತನಗೆ ಮತ ಹಾಕಿಲ್ಲ ಎಂಬ ಶಂಕೆಯ ಮೇರೆಗೆ, ಚುನಾವಣೆಗೂ ಮುನ್ನ ಹಂಚಿದ್ದ ಕುಕ್ಕರ್ ಅನ್ನು ತೆಲಂಗಾಣದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ವಾಪಸ್ ಕೇಳಿದ ಘಟನೆಯ ಬೆನ್ನಲ್ಲೇ, ಬಿಜೆಪಿ ಅಭ್ಯರ್ಥಿಯೂ ಇಂಥದ್ದೇ ‘ಸಾಧನೆ’ ಮಾಡಿದ ವಿಷಯ ಬೆಳಕಿಗೆ ಬಂದಿದೆ. ತೆಲಂಗಾಣದ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಅಭ್ಯರ್ಥಿಯೊಬ್ಬರ ಪತ್ನಿ ಮನೆಮನೆಗೆ ತೆರಳಿ ‘ನನ್ನ ಪತಿಗೇ ಮತ ಹಾಕಿದ್ದೀರಾ?’ ಎಂದು ದೇವರ ಹೆಸರಲ್ಲಿ ಪ್ರಮಾಣ ಮಾಡಿಸಿ ಕೇಳಿದ್ದಾರೆ. ಪ್ರಮಾಣ ಮಾಡದವರಿಂದ ಪತಿಯು ಮತಕ್ಕಾಗಿ ನೀಡಿದ್ದ 3000 ರು. ಹಣವನ್ನು ಮರುವಸೂಲಿ ಮಾಡಿದ್ದಾಳೆ.'
ಬಿಜೆಪಿ ಅಭ್ಯರ್ಥಿ ಜಡಿ ತಿರುಪತಿ ಸೋತಿದ್ದರು
ಬಿಜೆಪಿ ಅಭ್ಯರ್ಥಿ ಜಡಿ ತಿರುಪತಿ ಎಂಬುವವರು ಇತ್ತೀಚೆಗೆ ಮಂಚೇರಿಯಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಅದರ ಹತಾಶೆಯಲ್ಲಿ ಅವರ ಪತ್ನಿ ರೂಪಾ ಕ್ಷೇತ್ರದ ಪ್ರತೀ ಮನೆಗೆ ತೆರಳಿ, ‘ತಿರುಪತಿ ಅವರಿಗೇ ಮತ ಹಾಕಿದ್ದೇನೆ ಎಂದು ದೇವರ ಹೆಸರಲ್ಲಿ ಪ್ರಮಾಣ ಮಾಡಿ’ ಎಂದು ಕೇಳಿದ್ದಾರೆ. ಹಾಗೆ ಪ್ರಮಾಣ ಮಾಡದವರು ತಮ್ಮ ಪತಿಗೆ ಮತ ನೀಡಿಲ್ಲವೆಂದು ಪರಿಗಣಿಸಿ, ತಾವು ಚುನಾವಣೆಗೂ ಮುನ್ನ ಅವರಿಗೆ ಕೊಟ್ಟಿದ್ದ 3000 ರು.ಅನ್ನು ಹಣವನ್ನು ವಸೂಲಿ ಮಾಡಿದ್ದಾರೆ.
ಇದರ ವಿಡಿಯೋ ವೈರಲ್ ಆಗುತ್ತಿದ್ದು, ಅಧಿಕಾರಕ್ಕೇರಿದವರು ಕೊಟ್ಟ ಭರವಸೆಯನ್ನು ಈಡೇರಿಸದೆ ಇದ್ದರೆ ಮತದಾರರೂ ಹೀಗೇ ಅಧಿಕಾರ ಕಿತ್ತುಕೊಳ್ಳಬಹುದೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಅಶ್ವರಾವ್ಪೇಟೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರಿಬಾಬು ಸೋಲಿನ ಶಂಕೆಯಲ್ಲಿ ಪ್ರಚಾರದ ವೇಳೆ ತಾವು ನೀಡಿದ್ದ ಹಣ ಮತ್ತು ಪ್ರೆಶರ್ ಕುಕ್ಕರ್ ಮರಳಿಸುವಂತೆ 2500 ಮತದಾರಿಗೆ ಸೂಚಿಸಿದ್ದರು. ಅದರೆ ಫಲಿತಾಂಶ ಪ್ರಕಟವಾದಾಗ ಅವರು ಗೆಲುವು ಸಾಧಿಸಿದ್ದರು.
ಆಗಿದ್ದೇನು?
- ಬಿಜೆಪಿ ಅಭ್ಯರ್ಥಿ ಜಡಿ ತಿರುಪತಿ ತೆಲಂಗಾಣದ ಪುರಸಭೆ ಚುನಾವಣೆಯಲ್ಲಿ ಸ್ಪರ್ಧೆ
- ಪ್ರಚಾರದ ವೇಳೆ ಮತದಾರರಿಗೆ 3000 ರು. ಹಂಚಿದ್ದರು. ಆದರೆ ಬಳಿಕ ಸೋಲು
- ಇದರಿಂದ ಪತ್ನಿಗೆ ಹತಾಶೆ. ಮತದಾರರ ಮನೆಗೆ ಹೋಗಿ ಪ್ರಮಾಣ ಮಾಡಿಸಿದಳು
- ಪತಿಗೆ ಮತ ಹಾಕಿಲ್ಲ ಎಂದವರಿಂದ, 3000 ರು. ಮರು ವಸೂಲಿ ಮಾಡಿದಳು!
