ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಶ್ರೀನಿವಾಸಪುರದಲ್ಲಿನ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಅತ್ಯಂತ ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಮುಂದಾಗಿರುವುದಾಗಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜ್ ಹೇಳಿದರು.ಕಳೆದ ೧೦ ವರ್ಷಗಳಿಂದ ಕಾರ್ಖಾನೆ ಆಡಳಿತ ಮಂಡಳಿಗೆ ಚುನಾವಣೆ ನಡೆಸುವಂತೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣವೀಗ ಅಂತ್ಯಗೊಂಡು ಚುನಾವಣೆ ನಡೆಸುವಂತೆ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನೂತನ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಸಂಬಂಧ ಚುನಾವಣೆ ಪ್ರಕ್ರಿಯೆಗಳು ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ತಮ್ಮ ಬೆಂಬಲಿಗರೊಂದಿಗೆ ಕಾರ್ಖಾನೆ ಆಡಳಿತ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.ವ್ಯವಸ್ಥಾಪಕ ನಿರ್ದೇಶಕ ಕಾಂತರಾಜ್ ಮಾತನಾಡಿ, ೩೦೫೦೦ ಷೇರುದಾರ ಸದಸ್ಯರಿದ್ದು, ಮತದಾರರ ಪರಿಷ್ಕರಣೆಯನ್ನು ವಿಭಾಗಮಟ್ಟದ ಅಧಿಕಾರಿ ಸೇರಿ ಇತರೆ ೭ ಮಂದಿ ಅಧಿಕಾರಿಗಳ ತಂಡದಿಂದ ನಡೆಸಿ ಮಾದರಿ ಮತದಾರರ ಪಟ್ಟಿಯನ್ನು ಪ್ರಕಟಿಸಿ, ಯಾವುದಾದರೂ ನ್ಯೂನತೆ ಕಂಡುಬಂದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಒಂದೆರಡು ಆಕ್ಷೇಪಣೆ ಬಂದಿದ್ದು ಬಿಟ್ಟರೆ ಮತ್ಯಾವ ದೂರುಗಳ ಬರಲಿಲ್ಲ. ಚುನಾವಣೆ ನಡೆಸುವ ಸಂಬಂಧ ಮಾರ್ಚ್ ತಿಂಗಳಲ್ಲಿ ದಿನಾಂಕ ನಿಗದಿ ಮಾಡುವ ಸಲುವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ಶಾಲಾ ಕೊಠಡಿಗಳ ಅವಶ್ಯಕತೆಗಾಗಿ ಚನ್ನರಾಯಪಟ್ಟಣ, ಹಾಸನ, ಕೆ.ಆರ್. ಪೇಟೆ, ಹೊಳೆನರಸೀಪುರ, ಅರಕಲಗೂಡು ಬಿಇಒಗಳಿಗೆ ಪತ್ರ ಬರೆಯಲಾಗಿತ್ತು. ಅವರು, ೧೦ ಮತ್ತು ೧೨ನೇ ತರಗತಿ ಪರೀಕ್ಷೆಗಳು ಇರುವುದರಿಂದ ಮಾರ್ಚ್ ಅಂತ್ಯದವರೆಗೂ ಕೊಠಡಿಗಳು ಲಭ್ಯವಿರುವುದಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಏಪ್ರಿಲ್ ೫ ಅಥವಾ ೧೨ರ ದಿನಾಂಕ ನಿಗದಿಗೆ ಅಧಿಸೂಚನೆ ಹೊರಡಿಸಿ ಎಸಿಯವರು ಕೊಟ್ಟ ದಿನದಂದು ಚುನಾವಣೆ ನಡೆಸಲಾಗುವುದು ಎಂದರು.ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಮಾರ್ಚ್ ೧೮ಕ್ಕೆ ಚುನಾವಣೆ ನಿಗದಿ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ದಿನಾಂಕ ಗೊತ್ತುಪಡಿಸಿಕೊಳ್ಳುವ ವಿಚಾರಕ್ಕೆ ಕಾರ್ಖಾನೆ ಆಡಳಿತ ಕಚೇರಿಗೆ ಭೇಟಿ ನೀಡಿ, ಎಂ.ಡಿ.ಯವರಿಂದ ಮಾಹಿತಿ ಪಡೆಯಲಾಗಿದೆ. ಮತದಾರ ಮಾದರಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಇದುವರೆಗೂ ಪಾರದರ್ಶಕವಾಗಿ ಮಾಡಿದ್ದಾರೆ. ಮುಂದೆಯೂ ನಿಯಮಾನುಸಾರ, ಕಾನೂನು ಪ್ರಕಾರ ನಡೆಯಬೇಕು ಎಂಬುದು ನಮ್ಮ ಆಶಯ. ಹಿಂದೆಲ್ಲ ಚುನಾವಣೆ ವಿಚಾರದಲ್ಲಿ ಸಾಕಷ್ಟು ಗಲಾಟೆ, ಗದ್ದಲಗಳು ನಡೆದಿವೆ. ಆದು ಮರುಕಳಿಸಬಾರದು ಎಂಬುದು ನಮ್ಮ ಉದ್ದೇಶ. ೧೫ ವರ್ಷ ಹಿಂದೆ ಚುನಾವಣೆ ನಡೆದಿದ್ದು, ಅವಧಿ ಮುಗಿದಿದ್ದರೂ ಚುನಾವಣೆ ನಡೆಸದ ಬಗೆ ಆಡಳಿತ ಮಂಡಳಿ ಕೋರ್ಟ್ನಿಂದ ತಡೆಯಾಜ್ಞೆ ತಂದು ಅಧಿಕಾರದಲ್ಲಿದ್ದರು, ಇದೀಗ ನಾವು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಇದೀಗ ಚುನಾವಣೆ ನಡೆಸುವಂತೆ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಇದೀಗ ಚುನಾವಣೆ ನಡೆಯುತ್ತಿದೆ. ಮತದಾರ ತೀರ್ಪು ಅಂತಿಮ, ಜೆಡಿಎಸ್ನವರೂ, ನಾವೋ ಅವರು ಕೊಟ್ಟ ತೀರ್ಮಾನದಂತೆ ಅಧಿಕಾರ ಒಟ್ಟಿನಲ್ಲಿ ಚುನಾವಣೆ ಕಾನೂನು ಪ್ರಕಾರವಾಗಬೇಕು ಎಂಬುದು ನಮ್ಮ ಆಶಯವೆಂದರು. ಈ ವೇಳೆ ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಸಾಸಲುಪುರ ಶಿವರಾರಂ, ಸಿ.ಟಿ. ಅಶೋಕ್ ಕುಮಾರ್, ತಮ್ಮಯ್ಯ, ಗನ್ನಿ ಗಿರೀಶ್, ಪ್ರವೀಣ್, ರಘು, ಕಬ್ಬಾಳು ಮಹೇಶ್, ಮೋಹನ್ ಇನ್ನಿತರರು ಉಪಸ್ಥಿತರಿದ್ದರು.