ಸಾರಾಂಶ
ಒಡಿಶಾದ ಆಡಳಿತಾರೂಢ ಬಿಜು ಜನತಾದಳ (ಬಿಜೆಡಿ)ವನ್ನು 15 ವರ್ಷಗಳ ಬಳಿಕ ಮತ್ತೆ ಎನ್ಡಿಎ ತೆಕ್ಕೆಗೆ ಸೇರಿಸಿಕೊಳ್ಳಲು ಬಿಜೆಪಿ ಆರಂಭಿಸಿದ್ದ ಮಾತುಕತೆಯಲ್ಲಿ ದಿಢೀರ್ ತೊಡಕು ಕಾಣಿಸಿಕೊಂಡಿದೆ.
ನವದೆಹಲಿ: ಒಡಿಶಾದ ಆಡಳಿತಾರೂಢ ಬಿಜು ಜನತಾದಳ (ಬಿಜೆಡಿ)ವನ್ನು 15 ವರ್ಷಗಳ ಬಳಿಕ ಮತ್ತೆ ಎನ್ಡಿಎ ತೆಕ್ಕೆಗೆ ಸೇರಿಸಿಕೊಳ್ಳಲು ಬಿಜೆಪಿ ಆರಂಭಿಸಿದ್ದ ಮಾತುಕತೆಯಲ್ಲಿ ದಿಢೀರ್ ತೊಡಕು ಕಾಣಿಸಿಕೊಂಡಿದೆ. ಹೀಗಾಗಿ ಮೈತ್ರಿ ಮಾತುಕತೆ ಬಿಟ್ಟು ಮುಂಬರುವ ಒಡಿಶಾ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲು ಉಭಯ ಪಕ್ಷಗಳು ಗಂಭೀರ ಚಿಂತನೆಯಲ್ಲಿ ತೊಡಗಿವೆ.
ಲೋಕಸಭೆ ಚುನಾವಣೆ ಜತೆಗೇ ಒಡಿಶಾದಲ್ಲಿ ವಿಧಾನಸಭೆ ಕೂಡ ನಡೆಯಲಿದೆ. 2009ರಲ್ಲಿ ಎನ್ಡಿಎ ಕೂಟ ತೊರೆದು ಹೋಗಿದ್ದ ಬಿಜೆಡಿಯನ್ನು ಮತ್ತೆ ಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಮಾತುಕತೆ ಆರಂಭಿಸಿತ್ತು. ದೆಹಲಿಯಲ್ಲಿ ಈ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರ ಜತೆ ಸಮಾಲೋಚನೆ ಆರಂಭವಾಗಿದ್ದವು. ಆದರೆ ಪುರಿ ಹಾಗೂ ಭುವನೇಶ್ವರ ಕ್ಷೇತ್ರದಲ್ಲಿ ಯಾವ ಪಕ್ಷ ಸ್ಪರ್ಧಿಸಬೇಕು ಎಂಬ ವಿಚಾರ ಕಗ್ಗಂಟಾಗಿ ಮಾತುಕತೆಯೇ ಸ್ಥಗಿತಗೊಂಡಿದೆ.ಇದರ ಬೆನ್ನಲ್ಲೇ ಭುವನೇಶ್ವರಕ್ಕೆ ಮರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಅವರು ಯಾವುದೇ ಮೈತ್ರಿ ಮಾತುಕತೆಯೇ ನಡೆದಿಲ್ಲ. ವಿಧಾನಸಭೆ ಹಾಗೂ ಲೋಕಸಭೆ ಎರಡರಲ್ಲೂ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.