ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಆಂತರಿಕ ಭಿನ್ನಮತ : ರಾಧಾಮೋಹನ್‌ ಸಭೆಯ ಬಳಿಕ ಬಿವೈವಿ ಪರ ಹೆಚ್ಚಿದ ಬೆಂಬಲ

| N/A | Published : Jan 28 2025, 01:45 AM IST / Updated: Jan 28 2025, 04:44 AM IST

BY vijayendraa

ಸಾರಾಂಶ

ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಆಂತರಿಕ ಭಿನ್ನಮತ ಮುಂದುವರೆದಿದ್ದು, ಇದರ ಮಧ್ಯೆಯೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಇದೀಗ ನಿಧಾನವಾಗಿ ಹಲವರು ದನಿ ಎತ್ತಲು ಪ್ರಾರಂಭಿಸಿದ್ದಾರೆ.

  ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಆಂತರಿಕ ಭಿನ್ನಮತ ಮುಂದುವರೆದಿದ್ದು, ಇದರ ಮಧ್ಯೆಯೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಇದೀಗ ನಿಧಾನವಾಗಿ ಹಲವರು ದನಿ ಎತ್ತಲು ಪ್ರಾರಂಭಿಸಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿ ರಾಧಾ‌ಮೋಹನ್ ದಾಸ್ ಅಗರವಾಲ್ ಅವರು ಸರಣಿ ಸಭೆ ನಡೆಸಿದ ಬಳಿಕವೂ ಪಕ್ಷದಲ್ಲಿನ ತಿಕ್ಕಾಟವೇನೂ ನಿಂತಿಲ್ಲ. ಆದರೆ, ಸಭೆ ಬಳಿಕ ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳದೆ ತಟಸ್ಥರಾಗಿದ್ದ ಕೆಲವರು ವಿಜಯೇಂದ್ರ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡ ನಾಯಕರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ವಿಜಯೇಂದ್ರ ಪರವಾಗಿ ರೇಣುಕಾಚಾರ್ಯರಂತಹ ಮಾಜಿ ಸಚಿವರು, ಶಾಸಕರು ಮಾತ್ರ ಬ್ಯಾಟಿಂಗ್ ಮಾಡುತ್ತಿದ್ದರು. ಇದೀಗ ಶಾಸಕರೂ ವಿಜಯೇಂದ್ರ ಪರ ದನಿ ಎತ್ತತೊಡಗಿದ್ದಾರೆ. ಇದರಿಂದ ವಿಜಯೇಂದ್ರ ಬಲ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ.

ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂಬುದಾಗಿ ಉಮಾನಾಥ್ ಕೋಟ್ಯಾನ್‌ ಹೇಳಿದ್ದರೆ, ಎಸ್‌.ಆರ್‌.ವಿಶ್ವನಾಥ್ ಅವರು ಪಕ್ಷದಿಂದ ಹೋಗುವವರೆಲ್ಲ ಹೋಗಲಿ, ಪಕ್ಷದಲ್ಲಿ ಕಡ್ಡಿ ಆಡಿಸುತ್ತಿರುವವರ ವಿರುದ್ಧ ಬೆಂಗಳೂರು ಶಾಸಕರೆಲ್ಲ ತಿರುಗಿ ಬೀಳುವುದಾಗಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಈ ಶಾಸಕರ ಹೇಳಿಕೆ ಯತ್ನಾಳ ಬಣಕ್ಕೆ ತಿರುಗೇಟು ನೀಡಿದಂತಾಗಿದೆ.