ಮಲಯಾಳಂ ಚಿತ್ರರಂಗದ ಲೈಂಗಿಕ ಹಗರಣ : ‘ಪೊಲೀಸರು ಆರೋಪಗಳನ್ನು ಪ್ರಾಮಾಣಿಕವಾಗಿ ತನಿಖೆ ಮಾಡಬೇಕು - ಮಮ್ಮುಟ್ಟಿ

| Published : Sep 02 2024, 02:10 AM IST / Updated: Sep 02 2024, 07:24 AM IST

Actor Mammoottys Bazooka upcoming film release update
ಮಲಯಾಳಂ ಚಿತ್ರರಂಗದ ಲೈಂಗಿಕ ಹಗರಣ : ‘ಪೊಲೀಸರು ಆರೋಪಗಳನ್ನು ಪ್ರಾಮಾಣಿಕವಾಗಿ ತನಿಖೆ ಮಾಡಬೇಕು - ಮಮ್ಮುಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಲಯಾಳಂ ಚಿತ್ರರಂಗದಲ್ಲಿ ನಡೆದ ಲೈಂಗಿಕ ಹಗರಣದ ಬಗ್ಗೆ ನಟ ಮಮ್ಮುಟ್ಟಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ, ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು ಮತ್ತು ನ್ಯಾಯಾಲಯವು ಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದ್ದಾರೆ.  

ತಿರುವನಂತಪುರ: ಮಲಯಾಳಂ ಚಿತ್ರರಂಗದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ ಲೈಂಗಿಕ ಹಗರಣದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಖ್ಯಾತ ನಟ ಮಮ್ಮುಟ್ಟಿ, ‘ಪೊಲೀಸರು ಆರೋಪಗಳನ್ನು ಪ್ರಾಮಾಣಿಕವಾಗಿ ತನಿಖೆ ಮಾಡಬೇಕು ಹಾಗೂ ನ್ಯಾಯಾಲಯವು ಶಿಕ್ಷೆಯನ್ನು ನಿರ್ಧರಿಸಲಿ’ ಎಂದಿದ್ದಾರೆ. ಅಲ್ಲದೆ, ಮಲಯಾಳ ಚಿತ್ರರಂಗವನ್ನು ನಿಯಂತ್ರಿಸುವ ಕೆಲ ವ್ಯಕ್ತಿಗಳ ಶಕ್ತಿ ಕೇಂದ್ರ (ಪವರ್‌ ಸೆಂಟರ್‌) ಇದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

ಈ ಬಗ್ಗೆ ಭಾನುವಾರ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಮಮ್ಮುಟ್ಟಿ, ‘ಸಿನಿಮಾವು ಸಮಾಜದ ಪ್ರತಿಬಿಂಬವಾಗಿದೆ ಮತ್ತು ಸಮಾಜದಲ್ಲಿನ ಒಳ್ಳೆಯದು ಮತ್ತು ಕೆಟ್ಟದ್ದು ಚಿತ್ರರಂಗದಲ್ಲಿಯೂ ಇದೆ. ಈ ಬಗ್ಗೆ ನ್ಯಾ। ಹೇಮಾ ಸಮಿತಿಯು ಬೆಳಕು ಚೆಲ್ಲಿದೆ ಹಾಗೂ ಇಂಥ ಘಟನೆ ಪುನರಾವರ್ತನೆ ಆಗಬಾರದು ಎಂದು ಪರಿಹಾರ ಕ್ರಮಗಳ ಶಿಫಾರಸು ಮಾಡಿದೆ. ಈ ಶಿಫಾರಸುಗಳು ಮತ್ತು ಪರಿಹಾರಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ. ಚಿತ್ರರಂಗದ ಎಲ್ಲಾ ಸಂಘಗಳು ಕೈಜೋಡಿಸಿ ಅವುಗಳನ್ನು ಕಾರ್ಯಗತಗೊಳಿಸಲು ಇದು ಸಮಯವಾಗಿದೆ’ ಎಂದಿದ್ದಾರೆ.

‘ನ್ಯಾ। ಹೇಮಾ ಸಮಿತಿ ವರದಿಯ ಪೂರ್ಣರೂಪ ನ್ಯಾಯಾಲಯದ ಮುಂದಿದೆ. ದೂರುಗಳ ಬಗ್ಗೆ ಪೊಲೀಸ್ ತನಿಖೆ ನಡೆದಿದೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಲಿ ಮತ್ತು ನ್ಯಾಯಾಲಯ ಶಿಕ್ಷೆಯನ್ನು ನಿರ್ಧರಿಸಲಿ’ ಎಂದಿದ್ದಾರೆ.

ಇದೇ ವೇಳೆ, ಚಿತ್ರರಂಗದಲ್ಲಿ ಯಾವುದೇ ‘ಶಕ್ತಿಕೇಂದ್ರ’ ಇಲ್ಲ ಎಂದಿರುವ ಅವರು, ‘ಕಲಾವಿದರ ಸಂಘದ ಮುಖ್ಯಸ್ಥರು ಮೊದಲು ಪ್ರತಿಕ್ರಿಯಿಸಬೇಕು ಎಂದು ಸುಮ್ಮನಿದ್ದೆ. ಈಗ ಅವರು (ಮೋಹನ್ ಲಾಲ್) ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ನಂತರ ಸದಸ್ಯನಾಗಿ ನಾನು ಹೇಳಿಕೆ ನೀಡುತ್ತಿದ್ದೇನೆ’ ಎಂದು ಅವರು ತಮ್ಮ ಈವರೆಗಿನ ಮೌನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮಲಯಾಳಂ ಸಿನಿರಂಗದ ಸೆಕ್ಸ್‌ ಹಗರಣ ಬಗ್ಗೆ ಗೊತ್ತಿಲ್ಲ: ರಜನೀ!

ಚೆನ್ನೈ: ಕೇರಳದ ಮಲಯಾಳಂ ಚಿತ್ರರಂಗದಲ್ಲಿ ಸೆಕ್ಸ್‌ ಹಗರಣ ನಡೆದಿದೆ ಎಂದು ವರದಿ ಕೊಟ್ಟಿದ್ದ ನ್ಯಾ। ಹೇಮಾ ಸಮಿತಿ ಬಗ್ಗೆ ನಟ ರಜನೀಕಾಂತ್‌ ಪ್ರತಿಕ್ರಿಯಿಸಿದ್ದು, ಸಮಿತಿ ವರದಿ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ಹೇಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಜನಿ, ‘ಹೇಮ ಸಮಿತಿ ವರದಿಯೆಂದರೆ ಏನು? ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕ್ಷಮಿಸಿ ಎಂದು ಪ್ರತಿಕ್ರಿಯಿಸಿದ್ದಾರೆ.

ಜಯಸೂರ್ಯಗೆ ಹೆದರಲ್ಲ: ಸೋನಿಯಾ

ತಿರುವನಂತಪುರ: ಮಲಯಾಳಂ ಚಿತ್ರರಂಗದಲ್ಲಿ ವಿವಾದ ಸೃಷ್ಟಿಸಿರುವ ಲೈಂಗಿಕ ಕಿರುಕುಳ ಹಗರಣ ಚಿತ್ರರಂಗದವರ ನಡುವೆ ವಾಕ್ಸಮರಕ್ಕೂ ಕಾರಣವಾಗುತ್ತಿದೆ. ನಟ ಜಯಸೂರ್ಯ ಮೇಲೆ ನಟಿ ಸೋನಿಯಾ ಮಲ್ಹಾರ್‌ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಆದರೆ ಜಯಸೂರ್ಯ, ಆರೋಪ ಅಲ್ಲಗೆಳೆದಿದ್ದು, ನಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಆದರೆ ಜಯಸೂರ್ಯ ಎಚ್ಚರಿಕೆಗೆ ನಟಿ ತಿರುಗೇಟು ನೀಡಿದ್ದು ‘ಆರೋಪ ಸುಳ್ಳು ಎಂದು ಹೇಳಿ ಕಾನೂನು ಕ್ರಮದ ಬೆದರಿಕೆ ಹಾಕಿದ್ದಾರೆ. ಇಂಥ ಬೆದರಿಕೆಗೆ ಅಂಜಿ ನಾನು ಹಿಂದೆ ಸರಿಯುವುದಿಲ್ಲ’ ಎಂದಿದ್ದಾರೆ.

ಕೇರಳ: ‘ ಅಮ್ಮಾ’ ಕಚೇರಿ ಮೇಲೆ ಎಸ್‌ಐಟಿ ದಾಳಿ, ದಾಖಲೆಗಳ ಪರಿಶೀಲನೆ

ಎರ್ನಾಕುಲಂ: ಮಲಯಾಳಂ ಸಿನಿರಂಗದಲ್ಲಿ ಸಾಲು ಸಾಲು ಲೈಂಗಿಕ ಹಗರಣ ಆರೋಪ ಕೇಳಿ ಬರುತ್ತಿರುವ ನಡುವೆಯೇ, ಪ್ರಕರಣದ ತನಿಖೆಗೆ ರಚನೆಯಾಗಿದ್ದ ಎಸ್‌ಐಟಿ ಕೊಚ್ಚಿಯಲ್ಲಿರುವ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮಾ)ದ ಕಚೇರಿ ಮೇಲೆ ದಾಳಿ ನಡೆಸಿದೆ. ಅಮ್ಮಾ ಕಚೇರಿಯಲ್ಲಿ ಪೊಲೀಸರು ಎರಡನೇ ಬಾರಿ ಶೋಧ ನಡೆಸಿದ್ದು, ಸಂಘದ ಸದಸ್ಯರ ನೋಂದಣಿ, ಕಾರ್ಯಕಾರಿ ಸಮಿತಿ ಚುನಾವಣೆಗೆ ಸಂಬಂಧಿಸಿದ ದಾಖಲೆಗಳ ಪರೀಶಿಲನೆ ನಡೆಸಿದ್ದಾರೆ. ‘ಅಮ್ಮಾ’ ಮಾಜಿ ಕಾರ್ಯದರ್ಶಿ ನಟ ಎಡವೇಲು ಬಾಬು ವಿರುದ್ಧದ ನಟಿಯೊಬ್ಬರು ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು. ಸಂಘದ ಸದಸ್ಯತ್ವ ಪಡೆದ ಬಳಿಕ ನಟ ಕಿರುಕುಳ ನೀಡಿದ್ದಾನೆ ಎಂದು ದೂರಿದ್ದರು. ಈ ಪ್ರಕರಣದ ತನಿಖೆಗೆ ರಚನೆಯಾಗಿದ್ದ ಎಸ್‌ಐಟಿ ಕಚೇರಿ ಶೋಧಿಸಿದೆ.