ಸಾರಾಂಶ
ಚಾರ್ಧಾಮಗಳಲ್ಲಿ ಒಂದಾದ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಕೇದಾರನಾಥ: ಚಾರ್ಧಾಮಗಳಲ್ಲಿ ಒಂದಾದ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ನೂಕುನುಗ್ಗಲಿನ ಸ್ಥಿತಿ ಉಂಟಾಗಿದ್ದು, ಭಕ್ತರು ಸಿಲುಕಿ ಪರದಾಡಿದ ಘಟನೆ ಶನಿವಾರ ನಡೆದಿದೆ.
ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಕೇದಾರನಾಥ ದೇಗುಲಕ್ಕೆ 40 ಕಿ.ಮೀ. ಸಮೀಪದ ಸೀತಾಪುರದಲ್ಲಿ ಕಾಲ್ನಡಿಗೆಯಲ್ಲಿ ಬಂದ ಸಾವಿರಾರು ಭಕ್ತರು ಮಾರ್ಗಮಧ್ಯೆ ಸಿಲುಕಿದ್ದಾರೆ. ಈ ಜನದಟ್ಟಣೆಯಲ್ಲಿ ವಾಹನಗಳೂ ಸಿಲುಕಿಕಿಕೊಂಡಿವೆ. ‘ಜನ ದಟ್ಟಣೆಯನ್ನು ನಿಯಂತ್ರಿಸಲು ಉತ್ತರಾಖಂಡ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಕಂಡುಕೊಂಡಿಲ್ಲ’ ಎಂದು ಭಕ್ತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಈ ನಡುವೆ ಕೆಲವರು, ಈಗ ಕೇದಾರನಾಥಕ್ಕೆ ಹೋಗಲು ಪ್ರಶಸ್ತ ಸಮಯವಲ್ಲ ಎಂದು ಟ್ವೀಟರ್ನಲ್ಲಿ ಮನವಿ ಮಾಡಿದ್ದಾರೆ.
ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಜೂ. 6ರ ವರೆಗೂ ಇದ್ದ ಚಾರ್ ಧಾಮ್ ಯಾತ್ರೆಯ ಆಫ್ಲೈನ್ ನೋಂದಣಿಯನ್ನು ಮೇ 31ಕ್ಕೆ ಇಳಿಸಿದೆ.