ಸಾರಾಂಶ
ಚೆನ್ನೈ: ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ತಮ್ಮ ಅಂಡಿಯ ಮುಂದೆ ತಮಿಳು ನಾಮಫಲಕಗಳನ್ನು ಅಳವಡಿಸಬೇಕು ಎಂದು ಮುಖ್ಯಮಂತ್ರಿ ಎಮ್.ಕೆ ಸ್ಟಾಲಿನ್ ಮಂಗಳವಾರ ಕರೆ ನೀಡಿದ್ದಾರೆ. ವರ್ತಕರ ಕಲ್ಯಾಣ ಮಂಡಳಿಯ ಸದಸ್ಯರ ಸಭೆಯಲ್ಲಿ ಅವರು ಈ ಮನವಿ ಮಾಡಿದ್ದಾರೆ.
‘ಇತ್ತೀಚೆಗೆ ನನ್ನನ್ನು ಬೇಟಿಯಾದ ವರ್ತಕರ ಮಂಡಳಿಯ ಅಧ್ಯಕ್ಷ ಎ.ಎಮ್.ವಿಕ್ರಮರಾಜ ಹಾಗೂ ಇತರೆ ಪದಾಧಿಕಾರಿಗಳು ತಮಿಳುನಾಡಿನ ಎಲ್ಲಾ ಅಂಗಡಿಗಳಿಗೆ ತಮಿಳು ಭಾಷೆಯ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇಂತಹ ನಿರ್ಣಯಗಳನ್ನು ಸ್ವಯಂಪ್ರೇರಿತರಾಗಿ ತೆಗೆದುಕೊಳ್ಳಬೇಕೇ ಹೊರತು ಸರ್ಕಾರ ಹೇಳಿ ಮಾಡಿಸುವಂತಿರಬಾರದು’ ಎಂದು ಸ್ಟಾಲಿನ್ ಹೇಳಿದ್ದಾರೆ.
ಮಂಡಳದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳ ಕುರಿತು ಮಾತನಾಡಿದ ಅವರು, ‘ಈ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ 8,883 ವರ್ತಕರು ವಿವಿಧ ರೀತಿಯ ಆರ್ಥಿಕ ನೆರವು ಪಡೆದಿದ್ದು, 3.29 ಕೋಟಿ ರೂ. ನೆರವು ನೀಡಲಾಗಿದೆ. ಇಂತಹ ಕಾರ್ಯಗಳು ಮುಂದುವರೆಯಲಿವೆ’ ಎಂದು ಹೇಳಿದರು.
ಇತ್ತೀಚೆಗೆ ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಅಳವಡಿಸುವುದನ್ನು ಕರ್ನಾಟಕ ಸರ್ಕಾರ ಕಡ್ಡಾಯ ಮಾಡಿತ್ತು. ಅದಕ್ಕೆ ಕೆಲವೆಡೆ ವಿರೋಧ ವ್ಯಕ್ತವಾಗಿತ್ತು ಎಂಬುದು ಗಮನಾರ್ಹ.