ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ರಾಜಕೀಯ ಪಕ್ಷಗಳಿಗೆ ಅನುದಾನದ ಮೂಲವಾಗಿರುವ ಚುನಾವಣಾ ಬಾಂಡ್‌ಗಳನ್ನು ನಿಷೇಧಿಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಅದನ್ನು ಕೃಷ್ಣ ಸುಧಮರ ಸಂಬಂಧಗಳಿಗೆ ಹೋಲಿಸಿದ್ದಾರೆ.

ನವದೆಹಲಿ: ಪ್ರಸ್ತುತ ಕಾಲಘಟ್ಟದಲ್ಲಾಗಿದ್ದರೆ ಸುದಾಮನಿಂದ ಅವಲಕ್ಕಿ ತೆಗೆದುಕೊಂಡ ಕೃಷ್ಣನನ್ನು ಸುಪ್ರೀಂಕೋರ್ಟ್‌ ಭ್ರಷ್ಟಾಚಾರಿ ಎಂದು ಕರೆಯುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಹೊರಹಾಕಲ್ಪಟ್ಟ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರ ಕುರಿತಾದ ಕಾರ್ಯಕ್ರಮವೊಂದರಲ್ಲಿ ಉತ್ತರ ಪ್ರದೇಶದಲ್ಲಿ ಸೋಮವಾರ ಮಾತನಾಡಿದ ಪ್ರಧಾನಿ, ‘ನಿಮಗೆ ನೀಡಲು ನನ್ನ ಬಳಿ ಭಾವನೆಗಳ ಹೊರತಾಗಿ ಬೇರಾವುದೇ ವಸ್ತುಗಳಿಲ್ಲ ಎಂದು ಆಚಾರ್ಯ ಹೇಳಿದರು. 

ಒಂದು ರೀತಿಯಲ್ಲಿ ಆಚಾರ್ಯರು ಏನೂ ಕೊಡದೇ ಇದ್ದದ್ದೇ ಒಳ್ಳೆಯದಾಯಿತು. ಈಗಿನ ಕಾಲಘಟ್ಟದಲ್ಲಿ ಸುದಾಮ ಕೃಷ್ಣನಿಗೆ ಅವಲಕ್ಕಿ ಕೊಟ್ಟಿದ್ದು ವಿಡಿಯೋವಾಗಿ ಹೊರಬಂದಿದ್ದರೆ, ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್‌ ದಾಖಲಾಗುತ್ತಿತ್ತು. 

ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೃಷ್ಣನನ್ನು ಭ್ರಷ್ಟಾಚಾರಿ ಎಂದು ಕರೆಯುತ್ತಿತ್ತು. ಹೀಗಾಗಿ ನೀವು ಭಾವನೆಗಳನ್ನಷ್ಟೇ ಹಂಚಿಕೊಂಡಿದ್ದು ಒಳ್ಳೆಯದಾಯಿತು’ ಎಂದು ಹೇಳಿದರು.