ಸಾರಾಂಶ
ನವದೆಹಲಿ: ಮಾಸಿಕ 2 ಲಕ್ಷ ರು. ವೇತನದ ಹುದ್ದೆಯ ಆಫರ್ ನೀಡಿ ಭಾರತೀಯರನ್ನು ರಷ್ಯಾ ಯುದ್ಧಕ್ಕೆ ದೂಡಿದ್ದ ಕೆಲ ಮಧ್ಯವರ್ತಿಗಳು, ನೂರಾರು ಭಾರತೀಯ ವಿದ್ಯಾರ್ಥಿಗಳಿಗೂ ನಾನಾ ರೀತಿಯ ಆಮಿಷ ಒಡ್ಡಿ ರಷ್ಯಾಕ್ಕೆ ಕರೆದೊಯ್ದು ಬಳಿಕ ಯುದ್ಧಕ್ಕೆ ನೂಕಿದ್ದಾರೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಭಾರತೀಯರನ್ನು ಹೀಗೆ ಉದ್ಯೋಗದ ಹೆಸರಲ್ಲಿ ರಷ್ಯಾಕ್ಕೆ ಕರೆದೊಯ್ಯುತ್ತಿರುವ ಪ್ರಕರಣದ ಹಿಂದೆ ಮಾನವ ಕಳ್ಳಸಾಗಣಿಕೆ ಕೈವಾಡದ ಹಿನ್ನೆಲೆಯಲ್ಲಿ ಸಿಬಿಐ ಗುರುವಾರ ದೇಶದ ಹಲವು ನಗರಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಪತ್ತೆಯಾದ ಮಾಹಿತಿ ಅದು ಎಫ್ಐಆರ್ ದಾಖಲಿಸಿದ್ದು, ಅದರಲ್ಲೂ ವಿದ್ಯಾರ್ಥಿಗಳನ್ನೂ ವಂಚಿಸಿದ ಮಾಹಿತಿ ಇದೆ.
ವಂಚನೆ ಹೇಗೆ?:
ವಿದೇಶಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಯೋಜಿಸುತ್ತಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದ ಮಧ್ಯವರ್ತಿಗಳ ಗುಂಪು, ಅವರಿಗೆ ರಷ್ಯಾ ವಿಶ್ವವಿದ್ಯಾಲಯಗಳಲ್ಲಿ ಉಚಿತ ಪ್ರವೇಶ, ಶುಲ್ಕದಲ್ಲಿ ರಿಯಾಯಿತಿ, ಸುಲಭವಾಗಿ ವೀಸಾ ವಿಸ್ತರಣೆ, ವಿದ್ಯಾಭ್ಯಾಸದ ವೇಳೆಯೇ ಉದ್ಯೋಗದ ಆಫರ್ಗಳನ್ನು ನೀಡುತ್ತಿತ್ತು.
ಇದನ್ನು ನಂಬಿ ರಷ್ಯಾಕ್ಕೆ ಹೋದ ಬಳಿಕ ಅವರ ಪಾಸ್ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಅಲ್ಲಿಯ ನಕಲಿ ವಿಶ್ವವಿದ್ಯಾಲಯಗಳ ಅಧಿಕಾರಿಗಳು ಇಲ್ಲವೇ ರಷ್ಯಾ ಸೇನೆ ಪರ ಕಾರ್ಯನಿರ್ವಹಿಸುವ ವ್ಯಾಗ್ನರ್ ಸೇನೆ ತಂಡಕ್ಕೆ ನೀಡಲಾಗುತ್ತಿತ್ತು.
ಅವರು ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ಬಲವಂತವಾಗಿ ಯುದ್ಧಕ್ಕೆ ದೂಡುತ್ತಿದ್ದರು. ಹೀಗೆ ಹೋದವರ ಪೈಕಿ ಬಹಳಷ್ಟು ಜನರು ಗಾಯಗೊಂಡಿದ್ದಾರೆ ಎಂದು ಸಿಬಿಐ ತನ್ನ ದೂರಿನಲ್ಲಿ ದಾಖಲಿಸಿದೆ.