ಸಾರಾಂಶ
ನವದೆಹಲಿ: ಕರ್ನಾಟಕದ 28 ಲೋಕಸಭಾ ಸದಸ್ಯರ ಪೈಕಿ ನಾಲ್ವರು ತಮ್ಮ ಐದು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಲೋಕಸಭೆಯ ಒಂದೂ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಶನಿವಾರವಷ್ಟೇ 17ನೇ ಲೋಕಸಭೆಯ ಕೊನೆಯ ಅಧಿವೇಶನ ಮುಗಿದಿದೆ. ಇದರ ಬೆನ್ನಲ್ಲೇ ಲೋಕಸಭೆಯ ಅಧಿಕೃತ ಅಂಕಿ-ಅಂಶ ಆಧರಿಸಿ ‘ಪಿಆರ್ಎಸ್ ಲೆಜಿಸ್ಲೇಟಿವ್’ ಸಂಸ್ಥೆ ಬಿಡುಗಡೆ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಅದರ ಪ್ರಕಾರ, ರಾಜ್ಯದ ಅನಂತಕುಮಾರ ಹೆಗಡೆ (ಉತ್ತರ ಕನ್ನಡ), ರಮೇಶ ಜಿಗಜಿಣಗಿ (ವಿಜಯಪುರ), ಬಿ.ಎನ್. ಬಚ್ಚೇಗೌಡ (ಚಿಕ್ಕಬಳ್ಳಾಪುರ) ಹಾಗೂ ವಿ. ಶ್ರೀನಿವಾಸ ಪ್ರಸಾದ್ (ಚಾಮರಾಜನಗರ) ಕಳೆದ 5 ವರ್ಷದಲ್ಲಿ ಸದನದಲ್ಲಿ ನಡೆದ ಒಂದೂ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ ಎಂಬ ಮಾಹಿತಿ ಲಭಿಸಿದೆ.
17ನೇ ಲೋಕಸಭೆಯು ಒಟ್ಟು 274 ದಿನಗಳ ಕಾಲ ಕಲಾಪಕ್ಕೆ ಸಾಕ್ಷಿಯಾಗಿದೆ. ಈ ಪೈಕಿ ಇದೇ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ಮೋಹನ್ ಮಾಂಡವಿ ಮತ್ತು ಭಗೀರಥ ಚೌಧರಿ ಒಂದೇ ಒಂದು ದಿನ ಕೂಡಾ ಗೈರಾಗದೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿಶೇಷವೆಂದರೆ ಇಬ್ಬರಿಗೂ ಲೋಕಸಭೆಯಲ್ಲಿ ಅಕ್ಕಪಕ್ಕದ ಸೀಟು ಇದ್ದವು.ಚೌಧರಿ ರಾಜಸ್ಥಾನದ ಅಜ್ಮೇರ್ ಕ್ಷೇತ್ರ ಪ್ರತಿನಿಧಿಸುತ್ತಿದ್ದರೆ, ಮಾಂಡವಿ ಛತ್ತೀಸ್ಗಢದ ಕಂಕೇರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
9 ಸಂಸದರ ‘ಶೂನ್ಯ ಸಾಧನೆ’: ಇನ್ನು 9 ಸದಸ್ಯರು 274 ದಿನಗಳ ಕಲಾಪದಲ್ಲಿ ಒಂದೇ ಒಂದು ಚರ್ಚೆಯಲ್ಲಿ ಕೂಡಾ ಭಾಗಿಲ್ಲವಂತೆ. ಇದರಲ್ಲಿ ನಾಲ್ವರು ಕನ್ನಡಿಗರು.
ಇನ್ನು ಇದೇ ‘ಸಾಧನೆ’ ಮಾಡಿದ ಉಳಿದವರೆಂದರೆ ಬಿಜೆಪಿಯ ಸನ್ನಿ ಡಿಯೋಲ್, ಟಿಎಂಸಿಯ ಶತ್ರುಘ್ನ ಸಿನ್ಹಾ, ದಿವ್ಯೇಂದು ಅಧಿಕಾರಿ, ಬಿಎಸ್ಪಿಯ ಅತುಲ್ ಕುಮಾರ್.
ಇನ್ನು ಉತ್ತರಪ್ರದೇಶ ಹಮೀರ್ಪುರ ಸಂಸದ ಬಿಜೆಪಿಯ ಪಶುಪೇಂದ್ರ ಸಿಂಗ್ ಚಾಂದೇಲ್ 1194 ಚರ್ಚೆಗಳಲ್ಲಿ ಭಾಗವಹಿಸಿ ನಂ.1 ಎನ್ನಿಸಿಕೊಂಡಿದ್ದಾರೆ.
2ನೇ ಸ್ಥಾನದಲ್ಲಿ ಅಂಡಮಾನ್ ಮತ್ತು ನಿಕೋಬಾರ್ನ ಕುಲದೀಪ್ ರೈ ಶರ್ಮಾ (833 ಚರ್ಚೆ) ಇದ್ದಾರೆ.