ಸಾರಾಂಶ
ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಬೆಳಗ್ಗೆ ಮೋದಿ ಅವರು ಮೊದಲು ಕಾಶಿಯ ಕೊತ್ವಾಲ್ ಕಾಲಭೈರವನ ಆಶೀರ್ವಾದ ಪಡೆದು ನಂತರ 11.40ರ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
‘ಈ ದಿನ ಅಭಿಜಿತ್ ಮುಹೂರ್ತ, ಆನಂದ ಯೋಗ, ಸರ್ವಾರ್ಥಸಿದ್ಧಿ ಯೋಗದ ಜೊತೆಗೆ ಭೌಮ ಪುಷ್ಯ ನಕ್ಷತ್ರದ ಕಾಕತಾಳೀಯ ಸಂಗಮವಾಗಿದೆ. ಇದು ಉತ್ತಮ ಮುಹೂರ್ತದ ದಿನ’ ಎಂದು ಅಯೋಧ್ಯೆ ರಾಮಮಂದಿರ ಶಂಕುಸ್ಥಾಪನೆಗೆ ಶುಭ ಮುಹೂರ್ತ ನೀಡಿದ್ದ ಪಂಡಿತ್ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಹೇಳಿದ್ದಾರೆ.
ಈ ನಡುವೆ, ಖುದ್ದು ಗಣೇಶ್ವರ ಶಾಸ್ತ್ರಿಗಳು, ಕಾಶಿ ಸಂಗೀತ ಘರಾಣೆಯ ಸೋಮಾ ಘೋಷ್ ಮತ್ತು ಮೋದಿ ಈ ಹಿಂದೆ ವಾರಾಣಸಿಗೆ ಬಂದಾಗ ಚಹಾ ಸೇವಿಸಿದ್ದ ‘ಪಪ್ಪು ಚಾಯ್ ಕಿ ಆಢಿ’ ಎಂಬ ಚಹಾ ಅಂಗಡಿ ಮಾಲೀಕ ವಿಶ್ವನಾಥ್ ಸಿಂಗ್ ಪಪ್ಪು ಅವರು ಮೋದಿ ನಾಮಪತ್ರಕ್ಕೆ ಸೂಚಕರಾಗಬಹುದು ಎಂದು ಮೂಲಗಳು ಹೇಳಿವೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ಸೇರಿ ಹಲವರು ಮೋದಿಗೆ ನಾಮಪತ್ರ ಸಲ್ಲಿಕೆ ವೇಳೆ ಸಾಥ್ ನೀಡಲಿದ್ದಾರೆ,
ವಾರಾಣಸಿಯಲ್ಲಿ ಜೂ.1ರಂದು ಕಡೆಯ ಹಂತದಲ್ಲಿ ಮತದಾನ ನಡೆಯಲಿದ್ದು, ಜೂ.4ರಂದು ಫಲಿತಾಂಶ ಹೊರಬರಲಿದೆ.
ಮೋದಿ ಅವರು 2014 ಮತ್ತು 2019ರಲ್ಲಿ 2 ಬಾರಿ ಇಲ್ಲಿಂದ ಗೆದ್ದು 3ನೇ ಅವಧಿಯ ಮೇಲೆ ಕಣ್ಣಿಟ್ಟಿದ್ದಾರೆ, ಇಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಅಜಯ್ ರಾಯ್ ಸತತ 3ನೇ ಬಾರಿ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ.