ಸಾರಾಂಶ
ನವದೆಹಲಿ: ಕೆಲವು ನಿರ್ದಿಷ್ಟ ಸಂಘಟನೆಗಳ ಜೊತೆ (ಆರೆಸ್ಸೆಸ್) ನಂಟು ಹೊಂದಿರುವ ವ್ಯಕ್ತಿಗಳನ್ನೇ ವಿಶ್ವವಿದ್ಯಾಲಯದಲ್ಲಿ ಮಹತ್ವದ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ವಿವಿಧ ವಿವಿಗಳ ಉಪಕುಲಪತಿಗಳು, ಶಿಕ್ಷಣ ತಜ್ಞರು ಕಟುವಾಗಿ ವಿರೋಧಿಸಿದ್ದಾರೆ.
ಈ ಕುರಿತು ಬಹಿರಂಗ ಪತ್ರವೊಂದನ್ನು ಬರೆದಿರುವ 181 ಶಿಕ್ಷಣ ತಜ್ಞರು, ‘ವಿವಿಗಳಿಗೆ ಉಪಕುಲಪತಿಗಳ ನೇಮಕದ ವೇಳೆ ಕಠಿಣ ನಿಯಮ ಪಾಲಿಸಲಾಗುತ್ತದೆ ಮತ್ತು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಅಭ್ಯರ್ಥಿಯ ಶಿಕ್ಷಣದ ಗುಣಮಟ್ಟ, ಅವರ ಸಮಗ್ರತೆ, ಶೈಕ್ಷಣಿಕ ವಿದ್ವತ್ ಪರಿಶೀಲಿಸಲಾಗುತ್ತದೆ.’ ಎಂದು ರಾಹುಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇಂಥ ಕ್ರಮಗಳ ಪರಿಣಾಮವೇ ಇದು ದೇಶದ ವಿವಿಗಳು ಜಾಗತಿಕ ರ್ಯಾಂಕಿಂಗ್ನಲ್ಲಿ ಮೇಲಿನ ಸ್ಥಾನಕ್ಕೆ ಏರುತ್ತಿವೆ, ವಿವಿಗಳಲ್ಲಿ ಉತ್ತಮ ಸಂಶೋಧನೆ ನಡೆಯುತ್ತಿದೆ. ಆದರೂ ಇಂಥ ಹೇಳಿಕೆ ನೀಡಿರುವ ರಾಹುಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಪತ್ರಕ್ಕೆ ಜೆಎನ್ಯು ವಿಸಿ ಶಾಂತಿಶ್ರೀ ಪಂಡಿತ್, ದೆಹಲಿ ವಿವಿ ವಿಸಿ ವಿ.ಸಿ.ಯೋಗೇಶ್, ಎಐಸಿಟಿಇ ಅಧ್ಯಕ್ಷ ಟಿ.ಜಿ. ಸೀತಾರಾಂ ಸೇರಿ ಹಲವು ಸಹಿ ಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಹಿಂದುತ್ವ ಸಂಘಟನೆಯಾದ ಆರ್ಎಸ್ಎಸ್ನೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳನ್ನು ವಿವಿಗಳಲ್ಲಿ ಮಹತ್ವದ ಹುದ್ದೆಗೆ ನೇಮಕ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.