4 ರಾಜ್ಯ, 700 ಕಿ.ಮೀ ಉದ್ದ, 65 ಲಕ್ಷ ಹೆಕ್ಟೇರ್‌ನಲ್ಲಿ ಹಸಿರು ಗೋಡೆ

| Published : Jun 04 2025, 01:46 AM IST

ಸಾರಾಂಶ

ಗುಜರಾತ್‌ನಿಂದ ದೆಹಲಿವರೆಗಿನ 700 ಕಿ.ಮೀ ಅರಾವಳಿ ಪರ್ವತ ಸಾಲಿನಲ್ಲಿ ನಶಿಸಿರುವ ಅರಣ್ಯ ಪ್ರದೇಶವನ್ನು ಪುನಶ್ಚೇತನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜೂ.5ರ ಪರಿಸರ ದಿನದಂದು ವಿಶೇಷ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಯೋಜನೆಗೆ ನಾಳೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಗುಜರಾತ್‌ನಿಂದ ದೆಹಲಿವರೆಗಿನ 700 ಕಿ.ಮೀ ಅರಾವಳಿ ಪರ್ವತ ಸಾಲಿನಲ್ಲಿ ನಶಿಸಿರುವ ಅರಣ್ಯ ಪ್ರದೇಶವನ್ನು ಪುನಶ್ಚೇತನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜೂ.5ರ ಪರಿಸರ ದಿನದಂದು ವಿಶೇಷ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಅರಾವಳಿಯು ಗುಜರಾತ್‌ನಿಂದ ದೆಹಲಿವರೆಗೆ 700 ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಬಹುಪಾಲು ಅರಣ್ಯ ಗಣಿಗಾರಿಕೆ, ಮಾನವ ಒತ್ತುವರಿಯ ಕಾರಣ ನಾಶವಾಗಿದೆ. ಹೀಗಾಗಿ ಈ ಯೋಜನೆ ಮೂಲಕ 64.5 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ 5 ಕಿ.ಮೀ. ಅಗಲ ಹಸಿರು ಬೆಲ್ಟ್ ಸ್ಥಾಪಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಈ ಮೂಲಕ 2030ರ ವೇಳೆಗೆ 2.6 ಕೋಟಿ ಹೆಕ್ಟೇರ್‌ ಭೂಮಿಯನ್ನು ಪುನಶ್ಚೇತನಗೊಳಿಸುವ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ. ಜೂ.5ರಂದು ದೆಹಲಿಯ ಅರಾವಳಿ ಶ್ರೇಣಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ.

ಅರಾವಳಿ ಪರ್ವತ ಶ್ರೇಣಿಗಳು, ಹಲವು ನದಿಗಳ ಉಗಮ ಸ್ಥಾನವಾಗಿದ್ದು, ಹಲವು ಅಪರೂಪದ ಪ್ರಾಣಿ, ಸಸ್ಯ ಪ್ರಭೇದದ ಆವಾಸ ಸ್ಥಾನವಾಗಿದೆ. ಜೊತೆಗೆ ದೆಹಲಿ, ಜೈಪುರ, ಗುರುಗ್ರಾಮದಂಥ ಮಹಾನಗರಗಳು ಮರುಭೂಮಿಯಾಗುವುದನ್ನು ತಡೆಯುತ್ತಿವೆ.