ಸಾರಾಂಶ
ನವದೆಹಲಿ: ರಾಜಕೀಯ ತಜ್ಞರಾದ ಯೋಗೆಂದ್ರ ಯಾದವ್ ಮತ್ತು ಸುಹಾಸ್ ಪಾಲ್ಶಿಕರ್ ಎನ್ಸಿಇಆರ್ಟಿ ಪಠ್ಯ ಪುಸ್ತಕದಲ್ಲಿ ತಮ್ಮ ಹೆಸರನ್ನು ಉಳಿಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎನ್ಸಿಇಆರ್ಟಿ ಮಂಡಳಿಗೆ ಪತ್ರ ಬರೆದಿರುವ ಈ ಇಬ್ಬರು, ‘ತಾವು ಪಠ್ಯ ಪುಸಕ್ತ ಪರಿಷ್ಕರಣೆಯಿಂದ ದೂರವಾದ ಬಳಿಕವೂ ಹೊಸ ಪುಸ್ತಕದಲ್ಲಿ ತಮ್ಮ ಹೆಸರನ್ನು ಬಳಸಲಾಗಿದೆ. ಒಂದು ವೇಳೆ ತಮ್ಮ ಹೆಸರನ್ನು ಹಿಂದಕ್ಕೆ ತೆಗೆದುಕೊಳ್ಳದೇ ಇದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಶಾಸ್ತ್ರ ಪಠ್ಯಪುಸ್ತಕಗಳ ಮುಖ್ಯ ಸಲಹೆಗಾರರಾದ ಯೋಗೆಂದ್ರ ಯಾದವ್ ಮತ್ತು ಸುಹಾಸ್ ಪಾಲ್ಶಿಕರ್, ‘ಪುಸಕ್ತಗಳನ್ನು ವಿರೂಪಗೊಳಿಸಲಾಗಿದ್ದು, ಶೈಕ್ಷಣಿಕ ದೃಷ್ಟಿಯಿಂದ ನಿಷ್ಕ್ರೀಯವಾಗಿದೆ. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ನೀಡುವ ಈ ಪುಸಕ್ತದಲ್ಲಿ ನಮ್ಮ ಹೆಸರು ಇರಬಾರದು. ಹೀಗಾಗಿ ನಮ್ಮ ಹೆಸರನ್ನು ಕೈಬಿಡಬೇಕು’ ಎಂದಿದ್ದಾರೆ.
‘ಹಿಂದೆ ನಮಗೆ ಹೆಮ್ಮೆಯ ವಿಚಾರವಾಗಿದ್ದ ಪಠ್ಯ ಪುಸ್ತಕ ಇದೀಗ ಮುಜುಗರಕ್ಕೆ ಕಾರಣವಾಗುತ್ತಿದೆ. ನಮ್ಮಲ್ಲಿ ಯಾರನ್ನೂ ಸಂಪರ್ಕಿಸದೇ ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ತರಲು ಎನ್ಸಿಇಆರ್ಟಿಗೆ ಕಾನೂನು ಮತ್ತು ನೈತಿಕವಾಗಿ ಹಕ್ಕಿಲ್ಲ. ಇವುಗಳ ಹೊರತಾಗಿ ನಮ್ಮ ಹೆಸರನ್ನು ಪ್ರಕಟಿಸಲಾಗಿದೆ’ ಅಂತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.