ಸಾರಾಂಶ
ಸೈಬರ್ ಅಪರಾಧಗಳಲ್ಲಿ ಹ್ಯಾಕಿಂಗ್ ಕ್ರ್ಯಾಕಿಂಗ್, ಈ ಬಾಂಬಿಂಗ್, ಡಿಡ್ಲಿಂಗ್, ನಕಲಿ ಒಟಿಪಿಗಳು ಮತ್ತು ಸಾಮಾಜಿಕ ಜಾಲತಾಣಗಳ ಅಸುರಕ್ಷಿತ ಪಾಸವರ್ಡಗಳನ್ನು ಪತ್ತೆ ಹಚ್ಚಿ ಮಾಡಿ ಖಾಸಗಿ ಮಾಹಿತಿಗಳನ್ನು ಕಳವು ಮಾಡಿ ಬ್ಲ್ಯಾಕ್ಮೇಲ್ ಮಾಡಿ ಹಣ ಮತ್ತು ಮಾನಹರಣ ಮಾಡಿ ಜೀವನ ಸರ್ವನಾಶ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಇಂದು ದೇಶದಲ್ಲಿ ಕಣ್ಣಿಗೆ ಕಾಣದ ಹಾಗೆ ಮೋಸ ಮಾಡುವ ವ್ಯವಸ್ಥಿತ ಸೈಬರ ಅಪರಾಧಗಳು ಹೆಚ್ಚುತ್ತಿವೆ. ಆದ್ದರಿಂದ ಸೈಬರ್ ವಂಚನೆಗಳ ಬಗ್ಗೆ ಜಾಗೃತಿ ಅತ್ಯಗತ್ಯ ಎಂದು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆ ಸಿಪಿಐ ರಮೇಶ ಅವಜಿ ಹೇಳಿದರು.ಶುಕ್ರವಾರ ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಪತ್ರಿಕ್ಯೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಹಮ್ಮಿಕೊಂಡ ಸೈಬರ್ ಅಪರಾಧಗಳ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅತಿ ಹೆಚ್ಚು ಜನರು ಸಾಮಾಜಿಕ ಜಾಲತಾಣಗಳ ಅಜಾಗರೂಕತೆ ಬಳಕೆಯಿಂದ ಹ್ಯಾಕರಗಳಿಗೆ ಸುಲಭ ತುತ್ತಾಗುತ್ತಿದ್ದಾರೆ ಎಂದರು.
ಸೈಬರ್ ಅಪರಾಧಗಳಲ್ಲಿ ಹ್ಯಾಕಿಂಗ್ ಕ್ರ್ಯಾಕಿಂಗ್, ಈ ಬಾಂಬಿಂಗ್, ಡಿಡ್ಲಿಂಗ್, ನಕಲಿ ಒಟಿಪಿಗಳು ಮತ್ತು ಸಾಮಾಜಿಕ ಜಾಲತಾಣಗಳ ಅಸುರಕ್ಷಿತ ಪಾಸವರ್ಡಗಳನ್ನು ಪತ್ತೆ ಹಚ್ಚಿ ಮಾಡಿ ಖಾಸಗಿ ಮಾಹಿತಿಗಳನ್ನು ಕಳವು ಮಾಡಿ ಬ್ಲ್ಯಾಕ್ಮೇಲ್ ಮಾಡಿ ಹಣ ಮತ್ತು ಮಾನಹರಣ ಮಾಡಿ ಜೀವನ ಸರ್ವನಾಶ ಮಾಡುತ್ತಿದ್ದಾರೆ. ಆದ್ದರಿಂದ ಸುರಕ್ಷಿತ ಪಾಸವರ್ಡಗಳು ಮತ್ತು ಅನಾಮಧೇಯ ಕರೆಗಳಿಗೆ ಓಟಿಪಿ ಮತ್ತು ಬ್ಯಾಂಕಿನ ವಿವರಗಳನ್ನು ನೀಡಬಾರದು. ಸಂಶಯ ಬಂದಲಿ ತಕ್ಷಣ 1930 ದೂರವಾಣಿಗೆ ಕರೆ ಮಾಡಿ ಪ್ರಕರಣ ದಾಖಲಿಸಬೇಕು, ಇದರಿಂದ ತಕ್ಷಣ ಪೊಲೀಸ್ ಇಲಾಖೆ ಕ್ರಮಕೈಗೊಂಡು ವಂಚಕರನ್ನು ಶಿಕ್ಷೆಗೆ ಗುರಿಪಡಿಸಲು ಸಹಾಯವಾಗುತ್ತದೆ ಎಂದು ಹೇಳಿದರು.ಚಿಕ್ಕೋಡಿ ಪೊಲೀಸ್ ಠಾಣೆಯ ಪಿಎಸ್ಐ ಸಚಿನ ದಾಸರಡ್ಡಿ ಮಾತನಾಡಿ, ನಿತ್ಯ ಲೋನ್ ಆ್ಯಪ್ ಮತ್ತು ಷೇರು ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಆಸೆ ಹುಟ್ಟಿಸಿ ಕೋಟ್ಯಂತರ ರೂ. ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ಕಾರಣ ವಿದ್ಯಾರ್ಥಿಗಳು ಜಾಗೃತರಾಗಿ ಅಸುರಕ್ಷಿತ ಜಾಲತಾಣಗಳಲ್ಲಿ ವಿಕ್ಷಿಸುವುದನ್ನು ತಪ್ಪಿಸಬೇಕು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡುವುದರಿಂದ ಮೋಸಕ್ಕೆ ಒಳಗಾಗುವುದನ್ನು ತಪ್ಪಿಸಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಸೈಬರ್ ತಜ್ಞ ಆನಂದ ಮಾಳಿ ಮತ್ತು ಅಮಿತ ಮಾಳಿ ಪಿಪಿಟಿ ಮೂಲಕ ವಿವಿಧ ರೀತಿಯ ಸೈಬರ್ ಅಪರಾಧಗಳು ಮತ್ತು ಅವುಗಳಿಂದ ಪಾರಾಗುವು ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು. ಅಧ್ಯಕ್ಷತೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ. ಕುಲಕರ್ಣಿ ವಹಿಸಿದ್ದರು. ಚಿಕ್ಕೋಡಿ ಪೊಲೀಸ್ ಠಾಣೆ ಸಿಪಿಐ ಎನ್.ಸಿ. ಕಾಡದೇವರ, ಐ.ಕ್ಯೂ.ಎ.ಸಿ. ಸಂಯೋಜರು ವಿನಾಯಕ ಮಂಜಲಾಪೂರ, ಸಿ.ಇ.ಎನ್. ಪೊಲೀಸ್ ಠಾಣೆ ಬೆಳಗಾವಿ ಸಿಬ್ಬಂದಿ, ಡಾ.ಲಕ್ಷ್ಮೀಕಾಂತ ನಾಯಕ ಟಿ.ಓ., ಸದಾಶಿವ ಹಾದಿಮನಿ, ವಿಶಾಲ ಖೋತ, ಶಾಂತಿನಾಥ ಬೋಸಗೆ ಸೇರಿದಂತೆ ವಿವಿಧ ವಿಭಾಗ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳು ಇದ್ದರು. ಆಕಾಶ ಮಠಪತಿ ಸ್ವಾಗತಿಸಿದರು. ಪೂರ್ಣಿಮಾ ಬಾಗಿ ಮತ್ತು ಅಕ್ಷತಾ ಉಚಗಾಂವೆ ನಿರೂಪಿಸಿದರು. ವಿದ್ಯಾ ಕೊಗನೊಳ್ಳಿ ವಂದಿಸಿದರು.