ಕನ್ನಡಪ್ರಭ ವಾರ್ತೆ ಪಾವಗಡ

ಕಳೆದ ಮೂರು ದಶಕಗಳ ಹಿಂದೆ ಇದೇ ಶಾಲೆಯ ತರಗತಿ ಕೋಣೆಗಳಲ್ಲಿ ನಮ್ಮ ಮುಂದೆ ಕುಳಿತು ಅಕ್ಷರ ಕಲಿಯುತ್ತಿದ್ದ ಮಕ್ಕಳನ್ನು ಇಂದು ಸಮಾಜದ ವಿವಿಧ ಉನ್ನತ ಹುದ್ದೆಹೊಂದಿ, ಜವಾಬ್ದಾರಿಯುತ ಪ್ರಜೆಗಳಾಗಿರುವುದೇ ನಮಗೆ ಸಿಗುವ ಅತಿ ದೊಡ್ಡ ಗುರುದಕ್ಷಿಣೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್‌ ಭಾವುಕರಾಗಿ ನುಡಿದರು.ಪೊನ್ನಸಮುದ್ರ ಗ್ರಾಮದ ವಿನಾಯಕ ವಿದ್ಯಾಪೀಠ ಪ್ರೌಢಶಾಲೆಯ ಆವರಣದಲ್ಲಿ ನಡೆದ 1995-96 ಹಾಗೂ 1998-99 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಷ್ಟು ವರ್ಷಗಳ ದೀರ್ಘ ಬಿಡುವಿನ ನಂತರವೂ ನಮ್ಮನ್ನು ನೆನಪಿನಲ್ಲಿಟ್ಟುಕೊಂಡು, ಕರೆದು ಗೌರವಿಸಿರುವುದು ನಮ್ಮ ಜೀವನದ ಅತ್ಯಂತ ಧನ್ಯತೆಯ ಕ್ಷಣ. ಅಂದಿನ 90ರ ದಶಕದ ಬ್ಯಾಚ್‌ನ ವಿದ್ಯಾರ್ಥಿಗಳಲ್ಲಿ ಇದ್ದ ಶಿಸ್ತು, ಗುರು-ಹಿರಿಯರ ಮೇಲಿದ್ದ ಭಕ್ತಿ ಹಾಗೂ ಕಲಿಯುವ ಹಂಬಲ ಅದ್ಭುತವಾಗಿತ್ತು. ಅದೇ ಸಂಸ್ಕಾರ ಮತ್ತು ಮೌಲ್ಯಗಳನ್ನು ನಿಮ್ಮ ಮುಂದಿನ ಪೀಳಿಗೆಗೂ ದಾಟಿಸಿ ಎಂದು ತಿಳಿಸಿದರು.ತುಮಕೂರಿನ ತ್ರಿವರ್ಣ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಪಿ.ಗೋಪಾಲ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣವೇ ಅತ್ಯಂತ ಪ್ರಮುಖವಾಗಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಂಡು ಉನ್ನತ ಸಾಧನೆ ಮಾಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆಯಿರುತ್ತದೆ.ಸೌಲಭ್ಯ ಹಾಗೂ ಮಾರ್ಗದರ್ಶನ ಕೊರತೆಯಿಂದ ಹಲವರು ಹಿಂದುಳಿಯುವಂತಾಗುತ್ತದೆ.ಇಂತಹ ವಿದ್ಯಾರ್ಥಿಗಳಿಗೆ ಆಸರೆಯಾಗಲು ನಮ್ಮ ಫೌಂಡೇಶನ್ ಸದಾ ಸಿದ್ಧವಿದೆ ಎಂದು ಹೇಳಿದರು. ಕಾರ್ಯದರ್ಶಿ ಕೆ.ಎನ್‌.ಮೋಹನ್ ಕುಮಾರ್ ಮಾತನಾಡಿ ಮಾತನಾಡಿ, ಫೌಂಡೇಶನ್ ವತಿಯಿಂದ ನೀಡಲಾಗಿರುವ ಈ ನೋಟ್‌ಬುಕ್‌ಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಮುನ್ನಡೆಯಬೇಕು ಎಂದು ತಿಳಿಸಿದರು.

ಇದೇ ವೇಳೆ ಹಳೆಯ ವಿದ್ಯಾರ್ಥಿಗಳು ತಮಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಅಂದಿನ ನಿವೃತ್ತ ಮುಖ್ಯ ಶಿಕ್ಷಕರಾದ ಮಂಜುನಾಥ್, ನಿವೃತ್ತ ಶಿಕ್ಷಕರುಗಳಾದ ಎಮ್. ರಾಮಪ್ಪ, ಗಂಗಾಧರಪ್ಪ, ಅಂತರಗಂಗೆ ಶಂಕರಪ್ಪ ಹಾಗೂ ರಾಮಚಂದ್ರ ನಾಯಕ್,ಹಾಲಿ ಮುಖ್ಯ ಶಿಕ್ಷಕರಾದ ಭೋಜ ನಾಯಕ್ ರವರನ್ನು ಸನ್ಮಾನಿಸಿ ಗೌರವ ಸಮರ್ಪಿಸಿದರು.ಇದೇ ವೇಳೆ ತ್ರಿವರ್ಣ ಫೌಂಡೇಶನ್‌ ವತಿಯಿಂದ ಪ್ರಸ್ತುತ ಓದುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಸಾಕಾಗುವಷ್ಟು ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.