ಪುನೀತ್ ಜನ್ಮದಿನ ಅಂಗವಾಗಿ ಬೈಕ್ ರಾಲಿ

| Published : Mar 18 2025, 12:30 AM IST

ಸಾರಾಂಶ

ಡಾ. ಪುನೀತ್ ರಾಜ್‌ಕುಮಾರ್ ಅವರ 50 ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಸಾಲಗಾಮೆಯಲ್ಲಿ ಸೋಮವಾರ ಡಿ.ಪಿ ಚಂದ್ರಶೇಖರ್ (ಜೆಸಿಬಿ) ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೈಕ್ ರ್ಯಾಲಿ ನಡೆಯಿತು. ಪುನೀತ್ ಕೇವಲ ನಟರಾಗಿ ಮಾತ್ರವಲ್ಲದೆ ಎಲೆಮರೆ ಕಾಯಿಯಂತೆ ಜನಸೇವೆಯಲ್ಲಿ ತೊಡಗುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅವರ ಸೇವಾ ಮನೋಭಾನೆ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದರು. ಅವರ ಹಾದಿಯಲ್ಲೇ ಹಲವರು ಜನಸೇವೆಯಲ್ಲಿ ತೊಡಗಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಡಾ. ಪುನೀತ್ ರಾಜ್‌ಕುಮಾರ್ ಅವರ 50 ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಸಾಲಗಾಮೆಯಲ್ಲಿ ಸೋಮವಾರ ಡಿ.ಪಿ ಚಂದ್ರಶೇಖರ್ (ಜೆಸಿಬಿ) ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೈಕ್ ರ್ಯಾಲಿ ನಡೆಯಿತು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರು ಜೀವಿತಾವಧಿಯಲ್ಲಿ ಮಾಡಿದ ಅಪಾರ ಸೇವೆಯಿಂದಲೇ ಇಂದಿಗೂ ಜನರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ ಎಂದು ಹೇಳಿದರು.

ಪುನೀತ್ ಕೇವಲ ನಟರಾಗಿ ಮಾತ್ರವಲ್ಲದೆ ಎಲೆಮರೆ ಕಾಯಿಯಂತೆ ಜನಸೇವೆಯಲ್ಲಿ ತೊಡಗುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅವರ ಸೇವಾ ಮನೋಭಾನೆ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದರು. ಅವರ ಹಾದಿಯಲ್ಲೇ ಹಲವರು ಜನಸೇವೆಯಲ್ಲಿ ತೊಡಗಿದ್ದಾರೆ. ಈ ಪೈಕಿ ಜೆಸಿಬಿ ಚಂದ್ರು ಕೂಡ ಒಬ್ಬರು, ಜನರ ಆರೋಗ್ಯದ ಹಿತ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಜನರು ಇದರ ಸದುಪಯೋಗ ಪಡಿಸಿಕೊಂಡು ದೊಡ್ಡ ಮನೆ ಹುಡುಗ ಎಂದೇ ಖ್ಯಾತಿ ಗಳಿಸಿರುವ ಪುನೀತ್ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯೋಣ ಎಂದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಡಿ.ಪಿ. ಚಂದ್ರಶೇಖರ್ (ಜೆಸಿಬಿ) ಮಾತನಾಡಿ, ಪುನೀತ್ ರಾಜ್‌ಕುಮಾರ್ ಜಾತ್ಯತೀತ ನಾಯಕ. ಅವರ ಸೇವಾ ಮನೋಭಾವನೆ ದಾರಿಯಲ್ಲಿ ನಡೆಯುವ ಸಲುವಾಗಿ ಈ ಶಿಬಿರ ಆಯೋಜಿಸಲಾಗಿದೆ ವಿವಿಧ ಆಸ್ಪತ್ರೆಗಳಿಂದ ನುರಿತ ವೈದ್ಯರ ತಂಡ ಆಗಮಿಸಿ ಆರೋಗ್ಯ ತಪಾಸಣೆಯಲ್ಲಿ ತೊಡಗಿದೆ. ಅಲ್ಲದೆ ರಕ್ತದಾನ, ನೇತ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಹಾಸನ ನಗರದ ಎನ್.ಆರ್‌ ವೃತ್ತದ ಬಳಿ ಇರುವ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಬೈಕ್ ರಾಲಿ ಮೂಲಕ ಸಲಗಾಮೆ ತಲುಪಿದೆ. ಇಷ್ಟೇ ಅಲ್ಲದೆ ಇಂದು ರಾತ್ರಿ ಕಾಮಿಡಿ ಕಿಲಾಡಿಗಳು ಹಾಗೂ ಸ.ರಿ.ಗ.ಮ.ಪ ಖ್ಯಾತಿಯ ಹಲವು ನಟರು ಹಾಗೂ ಗಾಯಕರು ಆಗಮಿಸಿ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿ ಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ವೇಳೆ ಡಿಪಿ ಚಂದ್ರಶೇಖರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಪ್ರದೀಪ್, ಮುಖಂಡರಾದ ಸಂತೋಷ್, ದರ್ಶನ್ , ದಿನೇಶ್, ಅಪ್ಪು, ಚಿರಂತ್ , ಅಭಿಲಾಶ್, ಜೀವನ್, ರಮ್ಯಾ ಚಂದ್ರಶೇಖರ್ , ಇತರರು ಉಪಸ್ಥಿತರಿದ್ದರು.