ಸಾರಾಂಶ
ಸಮಾಜದಲ್ಲಿ ಜನರ ಆರೋಗ್ಯ ಕಾಪಾಡುವ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಮಗೆ ಭಯ ಮೂಡಿಸಿದೆ. ಬೆಳಗಾವಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ವಿದ್ಯಾರ್ಥಿಗಳಿದ್ದಾರೆ. ಆರೀಫ್ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮ ಕೈಗೊಂಡು ವೈದ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಇಲ್ಲಿನ ಸದಾಶಿವ ನಗರದಲ್ಲಿ ಈಚೆಗೆ ಡಾ.ಪ್ರದೀಪ ಗೌಡರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕಾಂಗ್ರೆಸ್ ಮುಖಂಡ ಆರೀಫ್ ದೇಸಾಯಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೋಮವಾರ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬೆಳಗಾವಿ ಸಂಘಟನೆಯ ಪದಾಧಿಕಾರಿಗಳು ಪತ್ರಿಭಟನೆ ನಡೆಸಿ ಡಿಸಿಪಿ ಸ್ನೇಹಾ ಪಿ.ವಿ ಅವರಿಗೆ ಮನವಿ ಸಲ್ಲಿಸಿದರು.ಡಾ. ಪ್ರದೀಪ ಗೌಡರ ಅವರ ಮನೆ ಮುಂದೆ ಕಾರ್ ಪಾರ್ಕಿಂಗ್ ಮಾಡುವ ವೇಳೆ ಆರೀಫ್ ಹಲ್ಲೆ ಮಾಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೂ ಪೊಲೀಸರು ಸ್ಪಂದಿಸಲಿಲ್ಲ. ವೈದ್ಯರ ಮೇಲೆ ಈ ರೀತಿ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಪ್ರಕರಣಗಳು ಪುನರಾವರ್ತನೆ ಆಗುತ್ತದೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಮಾಜದಲ್ಲಿ ಜನರ ಆರೋಗ್ಯ ಕಾಪಾಡುವ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಮಗೆ ಭಯ ಮೂಡಿಸಿದೆ. ಬೆಳಗಾವಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ವಿದ್ಯಾರ್ಥಿಗಳಿದ್ದಾರೆ. ಆರೀಫ್ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮ ಕೈಗೊಂಡು ವೈದ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.ಈ ವೇಳೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬೆಳಗಾವಿ ಸಂಘಟನೆಯ ಅಧ್ಯಕ್ಷ ಡಾ.ಆರ್. ಬಿ. ಅನಗೋಳ, ಡಾ. ಸುಶಾರ್ತ ಕಾಮೋಜಿ, ಡಾ. ಸೋಮಶೇಖರ ಗುರನ್ನವರ, ಡಾ.ಮೀನಾ ಪಾಟೀಲ, ಡಾ. ರೋಪಾಲಿ, ಡಾ.ರವಿ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.