ಸಾರಾಂಶ
ಯುವ ಜನತೆ ದೇಶದ ಭವಿಷ್ಯ. ಆದ್ದರಿಂದ ಯುವಕರು ಸಂವಿಧಾನದ ಅರಿವು ಹೊಂದಬೇಕು. ದೇಶದ ಏಕತೆಗೆ ಎಲ್ಲರೂ ಶ್ರಮಿಸಬೇಕು.
ಕನ್ನಡಪ್ರಭ ವಾರ್ತೆ ಗೋಕಾಕ
ಧರ್ಮ ಗ್ರಂಥಗಳಷ್ಟೇ ಸಂವಿಧಾನ ಮುಖ್ಯ. ಆದ್ದರಿಂದ ಎಲ್ಲ ಮನೆಗಳಲ್ಲಿ ಸಂವಿಧಾನ ಗ್ರಂಥವಿರಲಿ ಎಂದು ಲಕ್ಷ್ಮೀ ಎಜ್ಯುಕೇಶನ ಟ್ರಸ್ಟನ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದರು.ಅವರು ಸೋಮವಾರ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಪೌರಾಡಳಿತ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರದಲ್ಲಿ ಶ್ರೀ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ಪ್ರೌಢ ಶಾಲಾ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ದ ಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯುವ ಜನತೆ ದೇಶದ ಭವಿಷ್ಯ. ಆದ್ದರಿಂದ ಯುವಕರು ಸಂವಿಧಾನದ ಅರಿವು ಹೊಂದಬೇಕು. ದೇಶದ ಏಕತೆಗೆ ಎಲ್ಲರೂ ಶ್ರಮಿಸಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ ಪ್ರಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಪ್ರಾಮುಖ್ಯತೆ ಮತ್ತು ಜಾಥಾದ ಉದ್ದೇಶದ ಬಗ್ಗೆ ತಿಳಿಸಿದರು. ತಹಸೀಲ್ದಾರ ಡಾ.ಮೋಹನ ಭಸ್ಮೆ ಸಂವಿಧಾನ ಪ್ರಸ್ತಾವಣೆಯನ್ನು ಎಲ್ಲರಿಗೆ ಓದಿಸಿ ಸಂವಿಧಾನ ಜಾಗೃತಿ ಜಾಥಾದ ಬಗ್ಗೆ ಮಾತನಾಡಿದರು. ಈ ವೇಳೆ ಶಾಸಕ ಕಚೇರಿ ಸಹಾಯಕ ಸುರೇಶ ಸನದಿ, ತಾಲೂಕು ಮಟ್ಟದ ಅಧಿಕಾರಿಗಳು, ದಸಸಂ ಮುಖಂಡರು, ಅಂಗನವಾಡಿ & ಆಶಾ ಕಾರ್ಯಕರ್ತರು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳು, ಎಲ್.ಇ.ಟಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದರು.