ಮಕ್ಕಳ ಸುರಕ್ಷತೆಗೆ ಪೂರಕವಾದ ಪರಿಸರ ನಿರ್ಮಿಸಿ

| Published : Mar 16 2024, 01:49 AM IST

ಮಕ್ಕಳ ಸುರಕ್ಷತೆಗೆ ಪೂರಕವಾದ ಪರಿಸರ ನಿರ್ಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಾಚಾರ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಪೋಕ್ಸೋ ಪ್ರಕರಣಗಳು, ಬಹುತೇಕ ತಮ್ಮ ಸುತ್ತಮುತ್ತಲಿನ ಸಂಬಂಧಿಕರು, ಪರಿಚಯಸ್ತರಿಂದಲೇ ಜರುಗುತ್ತಿರುವುದು ಬೇಸರದ ಸಂಗತಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರತಿ ತಂದೆ ತಾಯಿ ಮತ್ತು ಪೋಷಕರು ತಮ್ಮ ಮಕ್ಕಳ ಬೆಳವಣಿಗೆ ಬಗ್ಗೆ ಗಮನ ಹರಿಸಬೇಕು. ಅವರೊಂದಿಗೆ ಗೆಳೆಯರಾಗಿ ಬೆರೆತು ಹೆಚ್ಚಿನ ಸಮಯ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸಲಹೆ ನೀಡಿದರು. ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಪೋಕ್ಸೋ ಪ್ರಕರಣಗಳು, ಬಹುತೇಕ ತಮ್ಮ ಸುತ್ತಮುತ್ತಲಿನ ಸಂಬಂಧಿಕರು, ಪರಿಚಯಸ್ತರಿಂದಲೇ ಜರುಗುತ್ತಿರುವುದು ಬೇಸರದ ಸಂಗತಿ ಎಂದರು.

ಮಕ್ಕಳಿಗೆ ಪ್ರಾಪಂಚಿಕ ಜ್ಞಾನ ನೀಡಿ

ತಂದೆ ತಾಯಿಗಳು ಮಕ್ಕಳಿಗೆ ಪ್ರಾಪಂಚಿಕ ಜ್ಞಾನವನ್ನು ತಿಳಿಸಬೇಕು. ಪ್ರಾಪ್ತ ವಯಸ್ಸಿನಲ್ಲಾಗುವ ಬದಲಾವಣೆಗಳು, ಕುತೂಹಲಗಳ ಬಗ್ಗೆ ತಿಳಿಸಿಕೊಟ್ಟು ಮಕ್ಕಳ ಸುರಕ್ಷತೆಗೆ ಪೂರಕವಾದ ವಿಚಾರಗಳನ್ನು ತಿಳಿಸಿಕೊಡಬೇಕು. ಅವರೊಂದಿಗೆ ಹೆಚ್ಚಿನ ಸಮಯ ಕಳೆದು ಮಕ್ಕಳಿಗೆ ಅತ್ಯಗತ್ಯವಾಗಿ ಬೇಕಿರುವ ಶಿಕ್ಷಣ, ಪೌಷ್ಟಿಕ ಆಹಾರ ನೀಡಿಕೆ ಮತ್ತು ಉತ್ತಮ ಬೆಳವಣಿಗೆಗೆ ಪೂರಕವಾದ ಪರಿಸರವನ್ನು ಸೃಷ್ಠಿಸಬೇಕು ಎಂದರು.

2024ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 108 ಮಹಿಳೆಯರ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 84 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಬಾಕಿ ಪ್ರಕರಣಗಳ ಪತ್ತೆ ಕ್ರಮವಹಿಸಲಾಗುತ್ತಿದೆ. ಈ ವರ್ಷದಲ್ಲಿ 5 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಅವುಗಳ ಹಾಗೂ ಇತರ ಪ್ರಕರಣಗಳ ಬಗ್ಗೆ ಸಂಪೂರ್ಣ ವರದಿಯನ್ನು ತೆಗೆದುಕೊಳ್ಳಲಾಗಿದ್ದು, ಸೂಕ್ತ ಕ್ರಮವಹಿಸುವುದಾಗಿ ತಿಳಿಸಿದರು.

ಸಖೀ ಒನ್ ಸ್ಟಾಪ್‌ಗೆ ಮಾಹಿತಿ ನೀಡಿ

ಮಹಿಳೆಯರು ಮತ್ತು ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ, ಶೋಷಣೆ ನಡೆಯುತ್ತಿರುವುದು ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಗಮನಕ್ಕೆ ಬಂದರೆ ಕೂಡಲೆ ಜಿಲ್ಲಾ ಮಟ್ಟದಲ್ಲಿರುವ ಸಖೀ ಒನ್ ಸ್ಟಾಪ್ ಸೆಂಟರ್ ಗೆ, ತಾಲೂಕು ಮಟ್ಟದಲ್ಲಿರುವ ಸಾಂತ್ವಾನ ಕೇಂದ್ರಗಳಿಗೆ ಅಥವಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಇತರ ಸಕ್ಷಮ ಪ್ರಾಧಿಕಾರ ಇಲಾಖೆಗಳಿಗೆ ಮಾಹಿತಿ ನೀಡಿ ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿ ತೋರಬೇಕು ಎಂದು ಮನವಿ ಮಾಡಿದರು.

ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಕೇವಲ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಮೂಡಿಸುವುದರ ಜೊತೆಗೆ ಖಾಸಗಿ ಶಾಲಾ ಕಾಲೇಜುಗಳನ್ನು ಒಳ್ಳಗೊಳ್ಳುವಂತಾಗಬೇಕು. ಪೋಲೀಸ್ ಇಲಾಖೆ ನಿಯಮಿತವಾಗಿ ಸುತ್ತವಳಿಗಳನ್ನು ಮಾಡಬೇಕು .ಯಾವುದೇ ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಿಸಲು ಹಿಂದೇಟು ಹಾಕಬಾರದು. ಪೋಕ್ಸೋ ಪ್ರಕರಣ ಹಿಂದೆ ಎಷ್ಟೇ ಬಲಿಷ್ಠ ವ್ಯಕ್ತಿಗಳು ಇದ್ದರೂ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಸೂಚನೆಗಳನ್ನು ನೀಡಿದರು. ಜಿಲ್ಲೆಯಲ್ಲೂ ಪ್ರತ್ಯೇಕ ಪಡೆ ರಚಿಸಿ

ಬಾಲ್ಯವಿವಾಹ ತಡೆಗಟ್ಟುವ ಸಮಿತಿಗಳು ಗ್ರಾಮ ಪಂಚಾಯಿತಿ, ಹೋಬಳಿ, ತಾಲ್ಲೂಕು ಜಿಲ್ಲಾ ಹಂತದಲ್ಲಿ ಚುರುಕಾಗಿ,ನಿರಂತರವಾಗಿ ಕಾರ್ಯನಿರ್ವಹಿಸಬೇಕು. ಮಹಿಳೆಯರು ತಮ್ಮ ಮಕ್ಕಳ ರಕ್ಷಣೆಗಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಓಬವ್ವ ಪಡೆ, ಮೈಸೂರಿನಲ್ಲಿ ಚಾಮುಂಡಿ ಪಡೆ, ತುಮಕೂರಿನಲ್ಲಿ ಕಲ್ಪತರು ಪಡೆಗಳು ಬಹಳ ಜಾಗೃತವಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಪ್ರತ್ಯೇಕ ಪಡೆ ನಿರ್ಮಿಸಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಪ್ರಕಾಶ್.ಜಿ.ಟಿ. ನಿಟ್ಟಾಲಿ, ಹೆಚ್ಚುವರಿ ಎಸ್ಪಿ ಆರ್.ಐ. ಖಾಸಿಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್, ಉಪನಿರ್ದೇಶಕ ವೆಂಕಟೇಶರೆಡ್ಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.