ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸಂಸ್ಕಾರ ಅಳವಡಿಸಿಕೊಳ್ಳದ ಜೀವನ ಸೂತ್ರ ಹರಿದ ಗಾಳಿಪಟದಂತೆ ಏನೇ ಸಾಧನೆ ಮಾಡಿದರೂ ಪ್ರಯೋಜನ ಇಲ್ಲವಾಗುತ್ತದೆ, ಯಾವುದೇ ನೌಕರಿ ಪಡೆಯಿರಿ ಇಲ್ಲವೇ ಹಣ ಗಳಿಸಿ, ಓದಿನಲ್ಲಿ ಟಾಪರ್ ಆಗಿರಿ ಸಂಸ್ಕಾರ ಇಲ್ಲದಿದ್ದರೆ ಅವೆಲ್ಲಾ ಶೂನ್ಯ ಎಂದು ಬೆಂಗಳೂರು ಪೂರ್ವ ವಲಯ ಡಿಸಿಪಿ ಡಿ.ದೇವರಾಜ್ ಅಭಿಪ್ರಾಯಪಟ್ಟರು.ನಗರದ ಸಹ್ಯಾದ್ರಿ ಪದವಿಪೂರ್ವ ಕಾಲೇಜಿನಲ್ಲಿ ಶಾರದಾ ಪೂಜೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಿಸ್ತು ಅಳವಡಿಸಿಕೊಳ್ಳಬೇಕು
ಪ್ರತಿಯೊಬ್ಬರೂ ಶಿಸ್ತು ಅಳವಡಿಸಿಕೊಳ್ಳಬೇಕು. ಅದೇ ಜೀವನದ ಮೊದಲ ಯಶಸ್ಸು. ಎಲ್ಲರೂ ಓದಿರುತ್ತಾರೆ, ಕೆಲವರು ಮಾತ್ರ ಮುಂದೆ ಬರುತ್ತಾರೆ. ಶಿಸ್ತುಬದ್ಧ ಜೀವನ ಸಾಗಿಸಿದವರು ಗೆಲ್ಲುತ್ತಾರೆ. ತಮ್ಮ ಕೆಲಸದಲ್ಲಿ ಬದ್ಧತೆ ಇರುವವರಿಗೆ ಅಪ್ಲಿಕೇಶನ್ ಆಫ್ ಮೈಂಡ್ ಇರುತ್ತೆ. ಹೆಚ್ಚಿನವರು ಜೀವನದಲ್ಲಿ ಫೇಲ್ ಆಗುತ್ತಾರೆ. ಕೆಲವೇ ಕೆಲವೇ ಮಂದಿ ಯಶಸ್ಸು ಕಾಣುತ್ತಾರೆ. ಚೆನ್ನಾಗಿ ಇಂಗ್ಲಿಷ್ ಮಾತನಾಡಿದವರು ಬುದ್ಧಿವಂತರಲ್ಲ. ಹೆಚ್ಚು ಅಂಕ ಬಂದಿದೆ ಎಂಬ ಭ್ರಮೆ ಬೇಡ. ನಕಾರಾತ್ಮಕ ಆಲೋಚನೆ ಬೇಡ ಎಂದು ಸಲಹೆ ನೀಡಿದರು.ಕೋಲಾರದಲ್ಲಿ ಸ್ಥಾಪಿಸಿರುವ ಡಿ.ಎಂ.ಆರ್. ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಗ್ರಂಥಾಲಯವಿದ್ದು, ಸದುಪಯೋಗ ಪಡಿಸಿಕೊಳ್ಳಬಹುದು. ಅಲ್ಲಿರುವ ಯೋಜನಾ ಮತ್ತು ಕುರುಕ್ಷೇತ್ರ ಮ್ಯಾಗಜೀನ್ ಓದಿ ಎಂದು ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿದರು. ಐ.ಆರ್.ಎಸ್ ಅಧಿಕಾರಿ ಪಿ.ವಿ.ಬೈರಪ್ಪ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್, ಕಾಲೇಜಿನ ಕಾರ್ಯದರ್ಶಿ ಜಿ.ಎ.ಕುಲಕರ್ಣಿ, ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಬದ್ರಿನಾಥ್ ಇದ್ದರು. ಶಾಂಭವಿ, ವೈಭವಿ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ವಿನಯ್ ಗಂಗಾಪುರ ಸ್ವಾಗತಿಸಿದರು.