ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮುಂಬರುವ ಜ.6ಮತ್ತು 7ರಂದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಹಾಸನ ಸಾಹಿತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಸಾಹಿತ್ಯೋತ್ಸವದ ಅಧ್ಯಕ್ಷತೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರರು ವಹಿಸಲಿದ್ದು, ನಾಡಿನ ಹಿರಿಯ ಸಾಹಿತಿ ಹಂ.ಪ ನಾಗರಾಜಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಕವಿ ಬಿ.ಆರ್. ಲಕ್ಷ್ಮಣರಾವ್, ಲೇಖಕ ಗಿರೀಶ್ ರಾವ್ ಹತ್ವಾರ್ ಅವರು ಕಾರ್ಯಕ್ರಮದ ಸಂಚಾಲಕರಾಗಿದ್ದು, ಸಾಹಿತ್ಯೋತ್ಸವದ ಅಧ್ಯಕ್ಷರಾಗಿ ಎಚ್.ಬಿ. ಮದನಗೌಡ, ಕಾರ್ಯದರ್ಶಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಎರಡು ದಿನಗಳ ಕಾಲ ನಡೆಯುವ ಸಾಹಿತ್ಯೋತ್ಸವದಲ್ಲಿ ಒಟ್ಟು ಎಂಟು ಮಹತ್ವದ ಗೋಷ್ಠಿಗಳು ನಡೆಯಲಿದ್ದು, ಟಿ.ಎನ್.ಸೀತಾರಾಂ, ರಾಘವೇಂದ್ರ ಪಾಟೀಲ, ವಿ.ಮನೋಹರ್, ಮಂಡ್ಯ ರಮೇಶ್, ಶ್ರೀನಿವಾಸ ಪ್ರಭು ಸೇರಿದಂತೆ 50ಕ್ಕೂ ಹೆಚ್ಚು ನಾಡಿನ ಚಿರ ಪರಿಚಿತ ಸಾಹಿತಿಗಳು, ಸಾಧಕರು, ನಟರು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದು, ಪ್ರಸಿದ್ಧ ಲೇಖಕಿ ಬಾನು ಮುಷ್ಕಾಕ್ ಸಮಾರೋಪದಲ್ಲಿ ಭಾಗಿಯಾಗಲಿದ್ದಾರೆ. ಹಾಸನ ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಲ್ಕ ರಹಿತ ನೊಂದಣಿಗೆ ಅವಕಾಶವಿದ್ದು, ಹೊರ ಜಿಲ್ಲೆಗಳ ಸಾಹಿತ್ಯಾಸಕ್ತರು ನೋಂದಾಯಿಸಿಕೊಳ್ಳಲು 250 ರು.ಗಳ ಶುಲ್ಕ ನಿಗಧಿ ಪಡಿಸಲಾಗಿದೆ. (ವಸತಿ ವ್ಯವಸ್ಥೆ ನೀಡಲಾಗುವುದು). ನೋಂದಣಿಗೆ ಜ.3ರಂದು ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದರು.ಸಾಹಿತ್ಯೋತ್ಸವದಲ್ಲಿ ಭಾಗಿಯಾಗುವ ಸರ್ಕಾರಿ ನೌಕರರು ಹಾಗೂ ಶಿಕ್ಷಕರಿಗೆ ಓಓಡಿ ಸೌಲಭ್ಯ ಕೊಡುವ ಬಗ್ಗೆ ಅವರನ್ನ ಭೇಟಿ ಮಾಡಿ ಪ್ರಯತ್ನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬಿ.ಆರ್ ಬೊಮ್ಮೇಗೌಡ, ಗೌರವ ಕಾರ್ಯದರ್ಶಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಸನ ದೂರವಾಣಿ ಸಂಖ್ಯೆ: 9108847480, 7411477149 ಗೆ ಸಂಪರ್ಕಿಸಬಹುದಾಗಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಾನು ಮುಷ್ಕಾಕ್ ವಹಿಸಲಿದ್ದು, ರಾಘವೇಂದ್ರ ಪಾಟೀಲ ಸಮಾರೋಪ ನುಡಿಗಳನ್ನಾಡಲಿದ್ದು, ಮುಖ್ಯ ಅತಿಥಿಗಳಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮೊದಲಾದವರು ಭಾಗಿಯಾಗಲಿದ್ದಾರೆ ಎಂದರು.ಎರಡು ದಿನಗಳ ಸಾಹಿತ್ಯೋತ್ಸವದಲ್ಲಿ ನಾಡಿನ 50ಕ್ಕೂ ಹೆಚ್ಚು ಚಿರಪರಿಚಿತ ಸಾಹಿತಿಗಳು, ಸಾಧಕರು, ನಟರು ಭಾಗಿಯಾಗಲಿದ್ದಾರೆ ಎಂದರು. ಜಿಲ್ಲೆಯ ಪ್ರತಿಯೊಬ್ಬ ಸಾಹಿತ್ಯ ಮನಸುಗಳೂ ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ್ನನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಸಹಕಾರ್ಯದರ್ಶಿ ನಾಗೇಶ್, ಸಮಿತಿ ಸದಸ್ಯರಾದ ಹೆತ್ತೂರು ನಾಗರಾಜ್ ಇತರರು ಉಪಸ್ಥಿತರಿದ್ದರು.