ಸಾರಾಂಶ
ಸಾಂಸಾರಿಯಾಗಿ ದೈವ ಕೃಪೆಗೆ ಪಾತ್ರರಾಗಿ ಎಂಬ ಸಂದೇಶ ಕನಕದಾಸರದ್ದು, ಕುಲಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ಎಂದು ಹೇಳುತ್ತಾ ಕುಲದ ನೆಲೆಯಲ್ಲಿ ಜನರನ್ನು ಅಳೆಯಬಾರದು ಎಂಬ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಮಾನತೆಗಾಗಿ ಪ್ರತಿಭಟನೆ ದಾಖಲಿಸಿದ ಕಲಿ ಕನಕದಾಸರು ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಇಂಗ್ಲೀಷ್ ಅಧ್ಯಾಪಕ ಗೋವಿಂದರಾಜು ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಸೋಮವಾರ ನಡೆದ ಸಂತ ಕನಕದಾಸರ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.
ಕೃಷ್ಣನ ದರ್ಶನಕ್ಕೆ ಅವಕಾಶ ನೀಡದಿದ್ದಾಗ ಅನುಯಾಯಿಗಳು, ಕನಕದಾಸರ ಜತೆ ನಿಂತು ಪ್ರತಿಭಟಿಸಿದರು. ಹಾಗಾಗಿ, ಪರಿಹಾರವಾಗಿ ಕಿಂಡಿಯ ಮಾರ್ಗ ಬಂದಿತು. ಇದು ಕನಕರ ಹೋರಾಟಕ್ಕೆ ಸಂದ ಗೆಲುವು. ಅಷ್ಟೇ ಅಲ್ಲ, ಸಮಾನತೆಗಾಗಿ ಮಿಡಿಯುವ ಎಲ್ಲ ಮನಸ್ಸುಗಳ ಜಯ, ಎಂದರು.ಶೈಕ್ಷಣಿಕವಾಗಿ ಮಾತ್ರವಲ್ಲದೇ, ಕ್ಷತ್ರಿಯ ವಿದ್ಯೆಗಳಲ್ಲಿಯೂ ಪಾಂಡಿತ್ಯ ಹೊಂದಿದ್ದ ಕನಕರು, ಸಮ ಸಮಾಜದ ಕನಸು ಹೊಂದಿದ್ದರು. ಅಲ್ಲದೇ, ಸ್ತ್ರೀ ಸ್ವಾತಂತ್ರ್ಯ ಅವರ ಆಶಯವಾಗಿತ್ತು. ಜತೆಗೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯ ಅವರ ರಚನೆಗಳಲ್ಲಿ ಕಾಣುತ್ತೇವೆ ಎಂದು ಅವರು ತಿಳಿಸಿದರು.
ಸಾಂಸಾರಿಯಾಗಿ ದೈವ ಕೃಪೆಗೆ ಪಾತ್ರರಾಗಿ ಎಂಬ ಸಂದೇಶ ಕನಕದಾಸರದ್ದು, ಕುಲಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ಎಂದು ಹೇಳುತ್ತಾ ಕುಲದ ನೆಲೆಯಲ್ಲಿ ಜನರನ್ನು ಅಳೆಯಬಾರದು ಎಂಬ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದು ಅವರು ಹೇಳಿದರು.ಪ್ರಾಂಶುಪಾಲ ಡಾ.ಎಂ. ಅಬ್ದುಲ್ ರಹಿಮಾನ್ ಮಾತನಾಡಿ, ಭಕ್ತಿ ಮಾರ್ಗದ ಮೂಲಕ ಜಾತಿರಹಿತ ಸಮಾಜ ನಿರ್ಮಾಣಕ್ಕೆ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.
ಸಾಂಸ್ಕೃತಿಕ ಸಮಿತಿ ಖಜಾಂಚಿ ಡಾ.ಜಿ.ಎಲ್. ಬಸವರಾಜು, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ ಎಚ್.ಜೆ. ಭೀಮೇಶ್, ಪ್ರೊ. ಶಿವಲಿಂಗಸ್ವಾಮಿ, ಮಂಜುನಾಥ ಕೆ.ಎಸ್, ಡಾ.ತೋಯಜಾಕ್ಷ, ಪಿ.ಆರ್. ವನಿತಾ, ವಿಂದುವಾಹಿನಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರರು, ಕಚೇರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.