ಸಾವಿರ ರುಪಾಯಿ ಕೊಟ್ಟು ಪಾಸ್‌ ಪಡೆದವರ ಹಿಡಿಶಾಪ

| Published : Oct 30 2024, 12:51 AM IST

ಸಾರಾಂಶ

ಹಾಸನಾಂಬೆ ದರ್ಶನಕ್ಕಾಗಿ ಸೋಮವಾರ ರಾತ್ರಿಯಿಂದ ಭಕ್ತ ಸಾಗರವಲ್ಲ ಭಕ್ತರ ಸುನಾಮಿಯೇ ಹರಿದುಬಂದಿದೆ. ಇದರ ಪರಿಣಾಮವಾಗಿ ವಿವಿಐಪಿ ಪಾಸ್‌ಗಳ ಕ್ಯೂಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ. ಇನ್ನು ಒಬ್ಬರಿಗೆ ಒಂದು ಸಾವಿರ ರುಪಾಯಿ ಕೊಟ್ಟು ಕ್ಯೂನಲ್ಲಿ ನಿಂತವರದ್ದೂ ಅದೇ ಸ್ಥಿತಿಯಾಯಿತು. ಸೋಮವಾರ ರಾತ್ರಿಯಿಂದಲೇ ಲಕ್ಷ ಲಕ್ಷ ಭಕ್ತರು ದರ್ಶನಕ್ಕಾಗಿ ಆಗಮಿಸಿದ್ದರಿಂದ ಸೋಮವಾರ ರಾತ್ರಿಯೇ ಧರ್ಮದರ್ಶನದ ಕ್ಯೂ ಹೊಸಲೈನ್‌ ರಸ್ತೆ ದಾಟಿ ಸಂತೇಪೇಟೆ ವೃತ್ತವನ್ನೂ ದಾಟಿ ವಲ್ಲಬಾಯಿ ರಸ್ತೆಯಲ್ಲಿತ್ತು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆ ದರ್ಶನಕ್ಕಾಗಿ ಸೋಮವಾರ ರಾತ್ರಿಯಿಂದ ಭಕ್ತ ಸಾಗರವಲ್ಲ ಭಕ್ತರ ಸುನಾಮಿಯೇ ಹರಿದುಬಂದಿದೆ. ಇದರ ಪರಿಣಾಮವಾಗಿ ವಿವಿಐಪಿ ಪಾಸ್‌ಗಳ ಕ್ಯೂಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ. ಇನ್ನು ಒಬ್ಬರಿಗೆ ಒಂದು ಸಾವಿರ ರುಪಾಯಿ ಕೊಟ್ಟು ಕ್ಯೂನಲ್ಲಿ ನಿಂತವರದ್ದೂ ಅದೇ ಸ್ಥಿತಿಯಾಯಿತು.

ಸೋಮವಾರ ರಾತ್ರಿಯಿಂದಲೇ ಲಕ್ಷ ಲಕ್ಷ ಭಕ್ತರು ದರ್ಶನಕ್ಕಾಗಿ ಆಗಮಿಸಿದ್ದರಿಂದ ಸೋಮವಾರ ರಾತ್ರಿಯೇ ಧರ್ಮದರ್ಶನದ ಕ್ಯೂ ಹೊಸಲೈನ್‌ ರಸ್ತೆ ದಾಟಿ ಸಂತೇಪೇಟೆ ವೃತ್ತವನ್ನೂ ದಾಟಿ ವಲ್ಲಬಾಯಿ ರಸ್ತೆಯಲ್ಲಿತ್ತು. ಇನ್ನು ಕೃಷಿ ಇಲಾಖೆ ಗೇಟಿನಿಂದ ಆರಂಭವಾಗುವ ವಿವಿಐಪಿ ಸಾಲು ಸಂತೇಪೇಟೆ ವೃತ್ತದಲ್ಲಿತ್ತು. ಮಂಗಳವಾರ ಬೆಳಗ್ಗೆಯಿಂದ ಸಾವಿರ ರು. ಪಾಸಿನ ಕ್ಯೂ ಕೂಡ ದೇವಸ್ಥಾನದ ಬಳಿಯಿಂದ ಬಿಂ ರಸ್ತೆ ದಾಟಿತ್ತು. ಹೀಗಾಗಿ ಒಬ್ಬೊಬ್ಬರಿಗೆ ಸಾವಿರ ರು. ಕೊಟ್ಟು ದರ್ಶನ್ಕಾಗಿ ನಿಂತವರು ಗಂಟೆಗಟ್ಟಲೆ ಕಾದು ಸುಸ್ತಾದರು. ಒಂದು ಸಾವಿರ ರುಪಾಯಿ ಕೊಟ್ಟರೂ ಬಿಸಿಲಲ್ಲಿ ಒಣಗುವುದು ತಪ್ಪಲಿಲ್ಲವಲ್ಲಾ ಎನ್ನುವ ಕೋಪ ಅವರ ತಾಳ್ಮೆಯನ್ನು ಕೆಡಿಸಿತ್ತು. ಹೀಗಾಗಿ ಇತ್ತ ಹಣವನ್ನೂ ತೆತ್ತು ಬಿಸಿಲಲ್ಲಿ ನೆತ್ತಿ ಕಾಯಿಸಿಕೊಂಡ ಹಲವರು ಕ್ಯೂನಲ್ಲಿ ನಿಂತು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಸರಣಿ ರಜೆಗಳಿರುವ ಕಾರಣ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗುವ ಯಾವ ಲಕ್ಷಣಗಳೂ ಇಲ್ಲ. ಹಾಗಾಗಿ ದಿನ ಕಳೆದಂತೆ ಬರುವವರ ಸಂಖ್ಯೆ ಹೆಚ್ಚುತ್ತದೆ. ಅದರಲ್ಲಿಯೂ ತುಮಕೂರು ಹಾಗೂ ಬೆಂಗಳೂರಿನಿಂದ ಬರುವವರ ಸಂಖ್ಯೆ ಭಾರೀ ಸಂಖ್ಯೆಯಲ್ಲಿದೆ. ಹೀಗೆ ಬರುವವರ ಕೈಗಳಲ್ಲೆಲ್ಲಾ ವಿವಿಐಪಿ ಪಾಸ್‌ಗಳಿದ್ದು, ವಿವಿಐಪಿ ಎನ್ನುವ ಪಾಸ್‌ ತನ್ನ ಅರ್ಥವನ್ನೇ ಕಳೆದುಕೊಂಡು ವಿವಿಐಪಿ ಸ್ವಾಗತ ಸಿಗಲಿದೆ ಎನ್ನುವ ಭ್ರಮೆಯಲ್ಲಿ ಬಂದವರು ನಿರಾಸೆಗೊಳ್ಳುವಂತಾಗಿದೆ.