ಕಳೆದ ಐದು ದಶಕಗಳಲ್ಲಿ ದಾವಣಗೆರೆ ವಿದ್ಯಾ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ರಾಜ್ಯವೇ ಹೆಮ್ಮೆ ಪಡುವಂತಹ ಶಿಕ್ಷಣ ಸಂಸ್ಥೆಗಳು ಇಲ್ಲಿದ್ದು, ವಿದ್ಯಾರ್ಥಿಗಳನ್ನು ನಾಡಿನ ಎಲ್ಲೆಡೆಯಿಂದ ಆಕರ್ಷಿಸುತ್ತಿವೆ. ಇಂತಹ ನಗರದ ಹೆಮ್ಮಯ ಶಿಕ್ಷಣ ಸಂಸ್ಥೆಗಳಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ ವಿಶೇಷವಾಗಿ ಉಲ್ಲೇಖಿಸುವಂತಹುದಾಗಿದೆ ಎಂದು ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ತಿಳಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಳೆದ ಐದು ದಶಕಗಳಲ್ಲಿ ದಾವಣಗೆರೆ ವಿದ್ಯಾ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ರಾಜ್ಯವೇ ಹೆಮ್ಮೆ ಪಡುವಂತಹ ಶಿಕ್ಷಣ ಸಂಸ್ಥೆಗಳು ಇಲ್ಲಿದ್ದು, ವಿದ್ಯಾರ್ಥಿಗಳನ್ನು ನಾಡಿನ ಎಲ್ಲೆಡೆಯಿಂದ ಆಕರ್ಷಿಸುತ್ತಿವೆ. ಇಂತಹ ನಗರದ ಹೆಮ್ಮಯ ಶಿಕ್ಷಣ ಸಂಸ್ಥೆಗಳಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ ವಿಶೇಷವಾಗಿ ಉಲ್ಲೇಖಿಸುವಂತಹುದಾಗಿದೆ ಎಂದು ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ತಿಳಿಸಿದರು.ಇಲ್ಲಿನ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸೆಲ್ಫ್ ಅಸೆಸ್ಮೆಂಟ್ ಟೆಸ್ಟ್ಗೆ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದರು.
ಈ ಸಂಸ್ಥೆ 1970ರಲ್ಲಿ ಸ್ಥಾಪನೆಯಾಗಿ, ಈವರೆಗೆ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ ದಾಖಲೆ ಈ ಸಂಸ್ಥೆಯದು. ತುಮಕೂರಿನ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರ ಆರ್ಶೀವಾದದಿಂದ ಅರಳಿದ ಈ ಸಂಸ್ಥೆಯ ಸ್ಥಾಪಕ ಎಂ.ಎಸ್. ಶಿವಣ್ಣನವರ ಸದಾಶಯಗಳನ್ನು, ಕನಸುಗಳನ್ನು ನನಸಾಗಿಸುವಲ್ಲಿ ಸಫಲತೆಯನ್ನು ಕಂಡಿರುವುದು ಸತ್ಯವಾಗಿದೆ ಎಂದರು.ಈ ಶಿಕ್ಷಣ ಸಂಸ್ಥೆ ಇಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಸೆಲ್ಫ್ ಅಸೆಸ್ಮೆಂಟ್ ಟೆಸ್ಟ್ ಆಯೋಜಿಸಿ ನಗರದ ಹಾಗು ಸುತ್ತಲಿನ ಗ್ರಾಮೀಣ ಭಾಗಗಳ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಈ ಟೆಸ್ಟ್ ನಲ್ಲಿ ಭಾಗವಹಿಸುವಂತೆ ಮಾಡಿ, ಅವರಲ್ಲಿ ಹೊಸ ಉತ್ಸಾಹವನ್ನು ಹುಟ್ಟು ಹಾಕಿರುವುದು ನಿಜ. ಪಿಯುಸಿ ಅತ್ಯಂತ ಮುಖ್ಯ ಹಾಗು ತಿರುವಿನ ಶೈಕ್ಷಣಿಕ ಘಟ್ಟವೆಂದು ವಿವರಿಸಿ, ಹೆಚ್ಚಿನ ಅಂಕಗಳಿಸುವತ್ತ ವಿದ್ಯಾರ್ಥಿಗಳ ಮನವೊಲಿಸಿದರು.
ತಮ್ಮ ಶಿಕ್ಷಣ ಸಂಸ್ಥೆಯ ಎಂಎಸ್ಎಸ್ ಕ್ವಿಜ್ ಮತ್ತು ಎಂಎಸ್ಎಸ್ ವಿದ್ಯಾರ್ಥಿವೇತನದ ಬಗ್ಗೆ ಮಾತನಾಡಿ, ಅದರಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಥೆ ನೀಡುವ ವಿದ್ಯಾರ್ಥಿವೇತನ ಹಾಗೂ ಅರ್ಹರಿಗೆ ನೀಡುವ ಉಚಿತ ವಿದ್ಯಾಭ್ಯಾಸದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.50 ಅಂಕಗಳ 1 ಗಂಟೆ ಅವಧಿಯ ಈ ಟೆಸ್ಟ್ನ ಫಲಿತಾಂಶವನ್ನು ಒಂದು ವಾರದ ಒಳಗೆ ವಿದ್ಯಾರ್ಥಿಗಳಿಗೆ ಅವರ ಮೊಬೈಲ್ ಸಂಖ್ಯೆಗೆ ನೇರವಾಗಿ ಕಳಿಸಲಾಗುವುದು ಎಂದು ತಿಳಿಸಿದರು.
ಈ ಟೆಸ್ಟ್ನ ಕಾರ್ಯಕ್ರಮಕ್ಕೆ ಈಗ ಇಲ್ಲಿ ಅಧ್ಯಯನ ನಡೆಸುತ್ತಿರುವ ಪಿಯುಸಿ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ತಮ್ಮ ಸೌಜನ್ಯದ ನಡೆಯಿಂದ ಪೋಷಕರ ಮನಗೆದ್ದರು.ಎಲ್ಲಾ ದೃಷ್ಟಿಯಿಂದ ಇದೊಂದು ವಿನೂತನವಾದ ಕಾರ್ಯಕ್ರಮವಲ್ಲದೆ, ಮಾದರಿಯಾದ ಕಾರ್ಯಕ್ರಮವೂ ಹೌದು. ಮಾದರಿ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿದ್ದು ಇನ್ನೊಂದು ವಿಶೇಷ. ಈ ಪ್ರಶ್ನೆಪತ್ರಿಕೆಯ ಪ್ರಯೋಜನವನ್ನು ನೀವೂ ಪಡೆಯಿರಿ. ನಿಮ್ಮ ಸ್ನೇಹಿತರನ್ನು ಪಡೆಯಲು ಪ್ರೋತ್ಸಾಹಿಸಿ ಎಂದು ಹಾರೈಸಿದ್ದು ಮನನೀಯ ಎಂದು ಪೋಷಕರು ತಮ್ಮ ಅನಿಸಿಕೆ ತಿಳಿಸಿದರು.