ಮಹಿಳಾ ದಿನಾಚರಣೆ ಮತ್ತು ಮಹಿಳಾ ಬಳಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನ ನೀಡಲಾಗಿದೆ. ರಾಮಾಯಣ, ಮಹಾಭಾರತದಲ್ಲಿ ಹೆಣ್ಣಿನ ಮಾನರಕ್ಷಣೆಗಾಗಿ ಯುದ್ಧಗಳೆ ನಡೆದಿವೆ, ಕುಟುಂಬ ಸಮಾಜ ಎರಡನ್ನೂ ಸಮತೋಲನದಲ್ಲಿ ನಡೆಸುವ ಸಾಮರ್ಥ್ಯ ಮಹಿಳೆಯರಲ್ಲಿದೆ. ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಅನ್ಯಾಯಗಳನ್ನು ತಡೆಯಲು ಗಂಡು ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯರು ಇನ್ನಷ್ಟು ಜಾಗ್ರತೆ ವಹಿಸಬೇಕಿದೆ ಎಂದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಉನ್ನತ ಮಟ್ಟದ ಸಾಧನೆ ಮಾಡುತ್ತಿರುವ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲನ್ನಿಡುತ್ತಿದ್ದು ಇವರ ಸಾಧನೆಯನ್ನು ಸಮಾಜ ಗೌರವಿಸಬೇಕು ಎಂದು ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ದೇಶಕಿ ಶ್ವೇತಾ ತಿಳಿಸಿದರು. ಪಟ್ಟಣದ ಕೋಟೆ ಕೋದಂಡರಾಮ ಪ್ರವಚನ ಮಂದಿರಲ್ಲಿ ವಿಪ್ರ ಮಹಿಳಾ ಬಳಗ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ಮಹಿಳಾ ಬಳಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನ ನೀಡಲಾಗಿದೆ. ರಾಮಾಯಣ, ಮಹಾಭಾರತದಲ್ಲಿ ಹೆಣ್ಣಿನ ಮಾನರಕ್ಷಣೆಗಾಗಿ ಯುದ್ಧಗಳೆ ನಡೆದಿವೆ, ಕುಟುಂಬ ಸಮಾಜ ಎರಡನ್ನೂ ಸಮತೋಲನದಲ್ಲಿ ನಡೆಸುವ ಸಾಮರ್ಥ್ಯ ಮಹಿಳೆಯರಲ್ಲಿದೆ. ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಅನ್ಯಾಯಗಳನ್ನು ತಡೆಯಲು ಗಂಡು ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯರು ಇನ್ನಷ್ಟು ಜಾಗ್ರತೆ ವಹಿಸಬೇಕಿದೆ ಎಂದರು. ಬೆಳಕು ವೃದ್ಧಾಶ್ರಮದ ಸಂಸ್ಥಾಪಕಿ ಕೆ. ಗೀತಾ, ಮಹಿಳೆಯರ ಸಾಧನೆ ಉನ್ನತವಾಗಿದ್ದರೂ ಹಲವು ಅಡೆತಡೆಗಳು ಅಡ್ಡಿಯನ್ನುಂಟು ಮಾಡುತ್ತಿವೆ. ಸಮಾಜ ಹಾಗೂ ಕುಟುಂಬದವರ ಬೆಂಬಲ ದೊರೆತಲ್ಲಿ ಇನ್ನೂ ಹೆಚ್ಚಿನ ಸಾಧನೆ ಸಾಧ್ಯವಾಗಲಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜೀವ ವಿಮಾ ಸಂಸ್ಥೆ ಪ್ರತಿನಿಧಿ ಅನುರಾಧ, ವಿಪ್ರಮಹಿಳಾ ಬಳಗ ಸಾಮಾಜಿಕ ಹಾಗೂ ಧಾರ್ಮಿಕವಾಗಿ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳು ಪ್ರಶಂಸನೀಯವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಬಳಗದ ಅಧ್ಯಕ್ಷೆ ರುಕ್ಮಿಣಿ ಮಾತನಾಡಿದರು. ಸರ್ಕಾರಿ ಶಾಲೆ ಶಿಕ್ಷಕಿಯಾಗಿ ನಿವೃತ್ತರಾದ ಬಳಿಕ ತನ್ನ ಗಳಿಕೆಯಲ್ಲಿ ಬೆಳಕು ವೃದ್ಧಾಶ್ರಮ ತೆರೆದು ಅಸಹಾಯಕರಿಗೆ ಆಸರೆಯಾಗಿ ಕಾರ್ಯ ನಿವರ್ಹಿಸುತ್ತಿರುವ ಗೀತಾ ಅವರ ಸಾಮಾಜಿಕ ಸೇವೆಯನ್ನು ಪ್ರಶಂಸಿಸಿ ಗೌರವಿಸಲಾಯಿತು. ಮಕ್ಕಳು ಮತ್ತು ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಬಳಗದ ಕಾರ್ಯದರ್ಶಿ ಪಿ. ಎಸ್. ಸುಧಾ, ಖಜಾಂಚಿ ಡಿ.ಟಿ. ಸವಿತಾ, ಗೀತಾ, ನಾಗಮಣಿ, ವತ್ಸಲಾ, ಲೀಲಾ, ಪದ್ಮ, ಜಿ.ಕೆ.ಉಮಾ, ಪದ್ಮಶ್ರೀ, ಪವಿತ್ರ, ಮಧುಶ್ರೀ, ಸರಸ್ವತಿ ಉಪಸ್ಥಿತರಿದ್ದರು.