ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು ಮತ್ತು ಯಾವುದೇ ಸವಾಲುಗಳಿಗೆ ಅಳುಕದೆ ಅದನ್ನು ಸಾಧಿಸಲು ಪ್ರಯತ್ನಿಸಬೇಕು ಮತ್ತು ದೇಶಾಭಿಮಾನ ಹೊಂದಬೇಕು ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ತಿಳಿಸಿದರು.ನಗರ ಹೊರವಲಯದ ಎಸ್ ಜೆಸಿಐಟಿ ಕ್ಯಾಂಪಸ್ ಆವರಣದ ಬಿಜಿಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಿಜಿಎಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಪ್ರತಿಬಾನ್ವೇಷಣ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪೋಷಕರೇ ರೋಲ್‌ ಮಾಡೆಲ್‌

ಎಲ್ಲರೂ ತಮ್ಮ ತಮ್ಮ ತಂದೇ ತಾಯಿಗಳನ್ನೇ ರೋಲ್ ಮಾಡೆಲ್‌ಗಳನ್ನಾಗಿಸಿ ಕೊಳ್ಳಬೇಕು. ವಿದ್ಯಾಬ್ಯಾಸ ಮುಗಿಸಿದ ನಂತರ ಕನಿಷ್ಟ ನಾಲ್ಕು ಜನರಿಗಾದರೂ ಸಹಾಯ ಮಾಡ ಬೇಕು.ಯುವಪೀಳಿಗೆ ಓದುವ ಕಾಲದಲ್ಲಿ ಪ್ರೀತಿ, ಪ್ರೇಮ, ದುಶ್ಚಟಗಳಿಂದ ದೂರವಿರಬೇಕು. ಉತ್ತಮ ಕೆಲಸಗಳಿಗೆ ಮಾತ್ರ ಮೋಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಬೇಕು ಎಂದು ಹೇಳಿದರು.

26 ಕಾಲೇಜುಗಳು ಭಾಗಿ


ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿ ಮೂರು ಜಿಲ್ಲೆಗಳಿಂದ 26 ಕಾಲೇಜುಗಳಿಂದ 750 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಬಂಧ ರಚನೆ, ಚರ್ಚಾಸ್ಪರ್ಧೆ, ಬಿಸಿನೆಸ್ ಕ್ವಿಜ್, ಪಿಕ್ಶನರಿ, ಡಿಕ್ಲೇಮೇಶನ್, ಬ್ರಾಂಡ್ ರಂಗೋಲಿ, ಬಿಸಿನೆಸ್ ಮಾಡೆಲ್ ಪ್ರೆಸೆಂಟೇಷನ್, ಮೊದಲಾದ‌ 12 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮಂಗಳನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್.ವೆಂಕಟೇಶಬಾಬು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.