ಯುವಜನತೆಗೆ ಕಾನೂನಿನ ಅರಿವು ಅಗತ್ಯ

| Published : Feb 22 2024, 01:46 AM IST

ಸಾರಾಂಶ

ಈ ಪ್ರದರ್ಶನದಲ್ಲಿ ಭಾರತದಲ್ಲಿ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್ ಪರಿಕಲ್ಪನೆಗಳನ್ನು ಚಿತ್ರವಾಗಿ ತಿಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಂದಿನ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ ಹಾಗೂ ಕಾನೂನಿನ ಅರಿವು ಮೂಡಿಸಬೇಕು. ಇಂದು ಪ್ರತಿ ಭಾರತೀಯನೂ ಕಾನೂನು ತಿಳಿಯುವುದು ಅಗತ್ಯ ಇದೆ ಎಂದು ಹಿರಿಯ ವಕೀಲ ಎಸ್.ಬಿ.ಶೇಖ್ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ ಬೆಲ್ಲದ ಕಾನೂನು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಿದ್ದ ಅಧಿನಿಯಮ ದರ್ಶನ - ನ್ಯಾಯ ಅನಾವರಣ: ಕಾನೂನು ಪರಿಶೋಧನೆ ಕಾನೂನು ಪ್ರದರ್ಶನ ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಪ್ರದರ್ಶನದಲ್ಲಿ ಭಾರತದಲ್ಲಿ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್ ಪರಿಕಲ್ಪನೆಗಳನ್ನು ಚಿತ್ರವಾಗಿ ತಿಳಿಸಲಾಗಿದೆ. ಸಂವಿಧಾನ ಹಲವಾರು ಅಧಿನಿಯಮಗಳು, ಮಹತ್ವದ ಐತಿಹಾಸಿಕ ತೀರ್ಪುಗಳು, ನ್ಯಾಯಾಧೀಶರ ಕುರಿತು ಸಮಗ್ರ ದರ್ಶನ ಬಿಂಬಿಸುವ ಕಾನೂನು ಪ್ರದರ್ಶನ ಆಕರ್ಷಕವಾಗಿದೆ. ಅಲ್ಲದೇ ಅರಿವು ಮೂಡಿಸುವ ನಿಟ್ಟಿನಲ್ಲಿ ಸಮಗ್ರ ಚಿತ್ರ ಹಾಗೂ ಬರಹದ ಮೂಲಕ ಭಾರತೀಯ ಕಾನೂನು ಶಾಸ್ತ್ರ ಕಟ್ಟಿಕೊಟ್ಟಿರುವ ಬಿ.ವ್ಹಿ.ಬೆಲ್ಲದ ಕಾನೂನು ವಿದ್ಯಾರ್ಥಿಗಳ ಈ ಕಾರ್ಯ ಮೌಲಿಕವೆನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಆರ್‌. ಬಿ. ಬೆಲ್ಲದ ಮಾತನಾಡಿ, ಭಾರತೀಯ ಕಾನೂನು ಶಾಸ್ತ್ರ ಬೆಳೆದು ಬಂದ ದಾರಿಯನ್ನು ಹಲವಾರು ನೆಲೆಗಳಲ್ಲಿ ಅತ್ಯಂತ ಆಕರ್ಷಕವಾಗಿ ಈ ಪ್ರದರ್ಶನದಲ್ಲಿ ಸಂಯೋಜಿಸಲಾಗಿದೆ. ಇದು ವಿದ್ಯಾರ್ಥಿಗಳ ರಚನಾತ್ಮಕ ಹಾಗೂ ಕ್ರಿಯಾತ್ಮಕ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ. ವಿದ್ಯಾರ್ಥಿಗಳು ಕಾನೂನು ಶಾಸ್ತ್ರ ಅರಿಯುವಲ್ಲಿ ಈ ಪ್ರದರ್ಶನ ಸಹಕಾರಿಯಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಬಿ.ಜಯಸಿಂಹ ಮಾತನಾಡಿ, ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವುದು ನಮ್ಮ ಗುರಿಯಾಗಿತ್ತು. ಅಂತೆಯೆ ಭಾರತೀಯ ಸಂವಿಧಾನದ ರಚನೆ, ಅದರ ವಿನ್ಯಾಸ, ದೇಶದ ಮಹತ್ವದ ಪ್ರಕರಣಗಳ ವಿವರಣೆ ಸಹಿತ ಮಾದರಿಗಳನ್ನು ಪ್ರಸ್ತುತ ಪಡಿಸಲಾಗಿದೆ. ಕಳೆದ ಆರು ತಿಂಗಳಿನಿಂದ ವಿದ್ಯಾರ್ಥಿಗಳು ದನಿವರಿಯದೆ ಶ್ರಮಿಸಿದ್ದಾರೆ. ನಗರದ ಯುವ ವಿದ್ಯಾರ್ಥಿಗಳು ಪ್ರದರ್ಶನದ ಲಾಭ ಪಡೆಯಬೇಕು ಎಂದು ತಿಳಿಸಿದರು. ಪ್ರದರ್ಶನದಲ್ಲಿ ಸುಪ್ರೀಂ ಕೋರ್ಟ್, ವಿವಿಧ ರಾಜ್ಯಗಳ ಹೈಕೋರ್ಟ್‌ಗಳ ಮಾದರಿಗಳು, ಭಾರತದ ಐತಿಹಾಸಿಕ ಪ್ರಕರಣಗಳು, ದೇಶದಲ್ಲಿ ಹಣದ ಮಸೂದೆಯನ್ನು ಅಂಗೀಕರಿಸುವ ಪ್ರಕ್ರಿಯೆಗಳು, ಮಹಿಳೆಯರ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಅಂಶಗಳು, ರಾಷ್ಟ್ರೀಯ ತುರ್ತುಪರಿಸ್ಥಿತ ಮಸೂದೆ 352, ರಾಮಜನ್ಮಭೂಮಿ ಪ್ರಕರಣ, ಕೇಶವಾನಂದ ಪ್ರಕರಣ, ಭಾರತ ಉಚ್ಛನ್ಯಾಯಾಲಯದ ವ್ಯಾಪ್ತಿ, ಸಂವಿಧಾನದ ಪೂರ್ವ ಪೀಠಿಕೆ ವಿಶ್ಲೇಷಣೆ, ಸ್ವಾತಂತ್ರ್ಯ ಭಾರತದ ಅನೇಕ ಪ್ರಖ್ಯಾತ ನ್ಯಾಯಾಧೀಶರು ಮತ್ತು ಮಹಿಳಾ ನ್ಯಾಯಾಧೀಶರ ಸಮಗ್ರ ವಿವರಗಳು, ಮಾಕ್ ಪಾರ್ಲಿಮೆಂಟ್, ಪ್ರಸ್ತುತ ಕಾನೂನು ಕ್ಷೇತ್ರದಲ್ಲಿನ ಬದಲಾವಣೆಗಳು ಕುರಿತು ಅತ್ಯಂತ ವ್ಯವಸ್ಥಿತವಾಗಿ ಪ್ರದರ್ಶಿಸಲಾಯಿತು.

ಸಹಾಯಕ ಪ್ರಾಧ್ಯಾಪಕಿ ರಾಜಶ್ರೀ ಪಾಟೀಲ ಪ್ರದರ್ಶನ ಸಂಯೋಜಿಸಿದ್ದರು. ಡಾ.ಉಮಾ ಹಿರೇಮಠ, ಡಾ.ಜ್ಯೋತಿ ಹಿರೇಮಠ, ಪ್ರೊ.ಸವಿತಾ ಪಟ್ಟಣಶೆಟ್ಟಿ, ಪ್ರೊ.ಎಂ.ಎಸ್.ಆಲಪ್ಪನವರ, ಡಾ.ಎಸ್.ಸಿ.ಪಾಲ್ಕೊಂಡ್, ಡಾ.ಅಶ್ವಿನಿ ಹಿರೇಮಠ, ಡಾ. ಸುಪ್ರಿಯಾ ಸ್ವಾಮಿ, ಪ್ರೊ.ಸಂಜೀವ ಕೋಶಾವರ ಇದ್ದರು.

ಮಹಾವಿದ್ಯಾಲಯದ ಕಾನೂನು ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಭಾರತದ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ, ನ್ಯಾಯಶಾಸ್ತ್ರಜ್ಞ ಹಾಗೂ ಪದ್ಮವಿಭೂಷಣ ಪಾಲಿ ನಾರಿಮನ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೋಟ್..

ಭಾರತೀಯ ಕಾನೂನು ಶಾಸ್ತ್ರ ಬೆಳೆದು ಬಂದ ದಾರಿಯನ್ನು ಹಲವಾರು ನೆಲೆಗಳಲ್ಲಿ ಅತ್ಯಂತ ಆಕರ್ಷಕವಾಗಿ ಈ ಪ್ರದರ್ಶನದಲ್ಲಿ ಸಂಯೋಜಿಸಲಾಗಿದೆ. ಇದು ವಿದ್ಯಾರ್ಥಿಗಳ ರಚನಾತ್ಮಕ ಹಾಗೂ ಕ್ರಿಯಾತ್ಮಕ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ. ವಿದ್ಯಾರ್ಥಿಗಳು ಕಾನೂನು ಶಾಸ್ತ್ರ ಅರಿಯುವಲ್ಲಿ ಈ ಪ್ರದರ್ಶನ ಸಹಕಾರಿಯಾಗಿದೆ.

ಎಸ್.ಬಿ.ಶೇಖ್. ಹಿರಿಯ ವಕೀಲ