ಯುವಕರಿಗೆ ವಿವೇಕಾನಂದರ ತತ್ವಗಳನ್ನು ತಿಳಿಸಬೇಕು

| Published : Jan 13 2024, 01:30 AM IST

ಸಾರಾಂಶ

ಯುವಕರು ದುಶ್ಚಟಕ್ಕೆ ಬಲಿಯಾಗದೇ ವಿವೇಕಾನಂದರ ಶುದ್ಧ ಮತ್ತು ಬದ್ದತೆಯ ಸಾಧನೆ ಮಾಡಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರವೀರ ಸನ್ಯಾಸಿ ವಿವೇಕಾನಂದರ ಆದರ್ಶ ವಿಶ್ವದ ಯುವಕರಿಗೆ ಮಾದರಿ ಎಂದು ಹಿರಿಯ ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಸರಸ್ವತಿ ಚಿಮ್ಮಲಗಿ ಹೇಳಿದರು.

ಅವರು ಭೃಂಗಿಮಠ ಕ್ರಿಯಾತ್ಮಕ ವೇದಿಕೆ ಹಾಗೂ ಯುಗದರ್ಶಿನಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ವಿವೇಕಾನಂದರ ಜಯಂತಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವಿಶ್ವದ ಇಂದಿನ ಆಧುನಿಕ ಯುವಕರಿಗೆ ವಿವೇಕಾನಂದರ ಭಾಷಣಗಳು, ತತ್ವಗಳು ಹೇಳಿಕೊಡಬೇಕಾದ ಅನಿವಾರ್ಯತೆಯೂ ಇದೆ ಎಂದು ತಿಳಿಸಿದರು.ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ, ವಿವೇಕಾನಂದರು ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿ ಪ್ರತಿಪಾದಿಸಿ ಅದರ ಘನತೆ ಎತ್ತಿ ತೋರಿಸಿ, ಉಳಿಸಿ ಬೆಳಸಿದ ಮಹಾಜ್ಞಾನಿಯಾಗಿದ್ದರು. ಸದಾ ಉತ್ಸಾಹ ಮತ್ತು ಘಟ್ಟಿತನದ ಧೈರ್ಯ ಸಾಹಸ ಮೈಗೂಡಿಸಿಕೊಂಡು ನುಡಿದಂತೆ ನಡೆದ ಸಾಂಸ್ಕೃತಿಕ ಜ್ಞಾನಯೋಗಿ ಅವರಾಗಿದ್ದರು. ಇಂತಹ ಮಹಾನ್ ಶಕ್ತಿಶಾಲಿಗಳಾದ ಇವರ ಪ್ರೇರಣೆ ಯುವಕರ ಸಾಧನೆಗೆ ಸ್ಪೂರ್ಥಿಯಾಗುತ್ತದೆ. ವಿವೇಕಾನಂದರ ಆದರ್ಶದ ಕುರಿತು ಪ್ರತಿ ಮನೆಗೂ ಪುಸ್ತಕ ಹಂಚಿ ಯುವ ಶಕ್ತಿಗೆ ಅವರ ಆದರ್ಶ ಬದುಕಿನ ಪ್ರೇರಣೆ ನೀಡಬೇಕಿದೆ ಎಂದರು.

ಯುವ ನ್ಯಾಯವಾದಿ ತ್ರಿವೇಣಿ ಸಿ.ಬಜಂತ್ರಿ ಮಾತನಾಡಿ ಯುವಜನಾಂಗಕ್ಕೆ ವಿವೇಕಾನಂದರು ಆತ್ಮವಿಶ್ವಾಸ, ಧೈರ್ಯ ತುಂಬುವ ಕೇಂದ್ರಬಿಂದು ಆಗಿದ್ದಾರೆ. ಅವರ ಚಿಂತನೆಗಳು ಸದಾ ಅಮರವಾಗಿರುತ್ತವೆ. ಆದ್ದರಿಂದ ಯುವಶಕ್ತಿಯು ಅವರ ಆದರ್ಶದಲ್ಲಿ ಸಾಗಿದರೆ ಜೀವನ ಯಶಸ್ವಿಯಾಗುತ್ತದೆ ಎಂದರು.ಪ್ರಶಾಂತ ಹಿರೇಮಠ ಮಾತನಾಡಿ, ವಿವೇಕಾನಂದರಲ್ಲಿದ್ದ ಭಾರತದ ಅಭಿಮಾನ ಎಲ್ಲ ಯುವಕರಲ್ಲಿ ಸದಾ ಇರಬೇಕಿದೆ. ಯುವಕರು ದುಶ್ಚಟಕ್ಕೆ ಬಲಿಯಾಗದೇ ವಿವೇಕಾನಂದರ ಶುದ್ಧ ಮತ್ತು ಬದ್ದತೆಯ ಸಾಧನೆ ಮಾಡಬೇಕು. ಅಂದಾಗ ನಮ್ಮದೇಶ ಇನ್ನು ಎತ್ತರಕ್ಕೆ ಬೆಳೆಯುತ್ತದೆ ಎಂದರು. ವಿವೇಕಾನಂದರ ಭಾವಚಿತ್ರಕ್ಕೆ ಪೂಜಿಸಿ ಪ್ರಾರ್ಥಿಸಲಾಯಿತು. ವಿಠಲ್ ಪುಜಾರ ಅವರು ಅಧ್ಯಕ್ಷತೆ ವಹಿಸಿದ್ದರು.