ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕ ಚಂದ್ರಶೇಖರ ಕೆ. ಕೇಸರಿ ಅವರು ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಯ ಹೆಸರಿನಲ್ಲಿ ₹೧ ಸಾವಿರ ಠೇವಣಿ ಇಡಲು ಮುಂದಾಗುವ ಮೂಲಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.
ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗುವ ಪಾಲಕರು ಶಾಲಾ ವಾಹನ ಸೇರಿ ಸರಿಸುಮಾರ ₹೧೦ರಿಂದ ₹೨೫ ಸಾವಿರ ನೀಡಿ ಮಕ್ಕಳ ಪ್ರವೇಶ ಪಡೆಯಲು ಪರದಾಡುವುದು ಸಾಮಾನ್ಯವಾಗಿದೆ. ಆದರೆ ಸರ್ಕಾರಿ ಶಾಲೆಯಲ್ಲಿ ಉಚಿತ ಪ್ರವೇಶದ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ಶಿಕ್ಷಕರ ಬಳಗ ಇದ್ದರೂ ಭಾಗಶಃ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡುವುದು ಸಾಮಾನ್ಯ ಸಂಗತಿ. ಹೀಗಾಗಿ ಪ್ರಸಕ್ತ ವರ್ಷ ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮುಂದಾಗಲಿ ಎನ್ನುವ ಆಶಯದಿಂದ ಈ ವಿನೂತನ ಕಾರ್ಯಕ್ರಮಕ್ಕೆ ಶಿಕ್ಷಕ ಕೇಸರಿ ಅವರು ಅಣಿಯಾಗಿದ್ದಾರೆ.ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿತ್ಯವೂ ವಿದ್ಯಾರ್ಥಿಗಳಿಗೆ ಬಿಸಿಯೂಟ, ಹಾಲು, ಮೊಟ್ಟೆ ನೀಡಲಾಗುತ್ತಿದೆ. ಕಳೆದ ವರ್ಷ ಒಂದನೇ ತರಗತಿಗೆ ೯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಹೀಗಾಗಿ ಪ್ರಸಕ್ತ ವರ್ಷ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಲಿ ಎಂದು ಶಿಕ್ಷಕ ಚಂದ್ರಶೇಖರ ಕೆ. ಕೇಸರಿ ಅವರು ಪ್ರತಿ ವಿದ್ಯಾರ್ಥಿ ಹೆಸರಿನಲ್ಲಿ ₹೧೦೦೦ ಸಾವಿರ ಠೇವಣಿ ಇಡಲು ಕೈಗೊಂಡಿರುವ ನಿರ್ಧಾರ ಅನುಕರಣೀಯ ಎಂದು ಶಾಲೆಯ ಮುಖ್ಯ ಶಿಕ್ಷಕ ಎಲ್.ಡಿ. ಅವಟಿ ಎಂದರೆ, ಗೋಗೇರಿ ಗ್ರಾಮದ ಉರ್ದು ಶಾಲೆಯ ಶಿಕ್ಷಕರ ಕಾರ್ಯ ತಾಲೂಕಿನ ಇತರ ಶಿಕ್ಷಕರಿಗೂ ಸಹ ಮಾದರಿಯಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಆರ್.ಐ. ಭಾಗವಾನ ತಿಳಿಸಿದರು.ದಾಖಲಾತಿ ಹೆಚ್ಚಲಿ: ಪಾಲಕರು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ದಾಖಲಾತಿಗೆ ಮುಂದಾಗಬೇಕು ಎಂಬ ಸುದುದ್ದೇಶದಿಂದ ಗೋಗೇರಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಹೆಸರಿನಲ್ಲಿ ಠೇವಣಿ ಇಡಲು ನಿರ್ಧರಿಸಿದ್ದೇನೆ ಎಂದು ಶಿಕ್ಷಕ ಚಂದ್ರಶೇಖರ ಕೆ. ಕೇಸರಿ ತಿಳಿಸಿದರು.