ಸಾರಾಂಶ
ಮುಂಡ್ರಿಗಿ ಬಳಿಯ ವಸತಿ ಸಮುಚ್ಛಯಕ್ಕೆ ಶಾಸಕ ಭೇಟಿ
ಕನ್ನಡಪ್ರಭ ವಾರ್ತೆ ಬಳ್ಳಾರಿಬಳ್ಳಾರಿ ನಗರದ ಮುಂಡ್ರಿಗಿ ಬಳಿಯ ಬಹು ನಿರೀಕ್ಷಿತ ರಾಜೀವ್ ಗಾಂಧಿ ಟೌನ್ಶಿಪ್ ಯೋಜನೆ ಅಡಿ ಈಗಾಗಲೇ ಪೂರ್ಣಗೊಳ್ಳಲಿರುವ 1 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಬಳ್ಳಾರಿ ಹೊರ ವಲಯದ ಮುಂಡ್ರಿಗಿ ಗ್ರಾಮದ ಬಳಿಯ ವಸತಿ ಸಮುಚ್ಛಯಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಬಳಿಕ ಪೂರ್ಣಗೊಂಡಿರುವ ಮನೆಗಳ ವ್ಯವಸ್ಥೆಯನ್ನು ಪರಿಶೀಲಿಸಿದರು.ಮನೆ ಪಡೆಯಲು ಈಗಾಗಲೇ ಹಲವು ಫಲಾನುಭವಿಗಳು ಸರ್ಕಾರ ನಿಗದಿ ಮಾಡಿರುವ ಹಣ ಸಂದಾಯ ಮಾಡಿದ್ದಾರೆ. ಆದರೆ ಮನೆಗಳನ್ನು ಉಚಿತವಾಗಿ ನೀಡಲು ಈಗಾಗಲೇ ವಸತಿ ಸಚಿವ ಜಮೀರ್ ಅಹಮದ್ ಅವರೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರವೇ ಫಲಾನುಭವಿಗಳ ಹಣವನ್ನು ಕಟ್ಟಿ, ಶೇ. 100ರಷ್ಟು ಉಚಿತವಾಗಿ ಮನೆ ಹಂಚುವ ಉದ್ದೇಶ ಇದೆ. ಅಪೂರ್ಣ ಇರುವ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಪ್ರಾಥಮಿಕ ಹಂತದಲ್ಲಿ 1000 ಮನೆಗಳನ್ನು ಏಕಕಾಲಕ್ಕೆ ಹಂಚಿಕೆ ಮಾಡುವ ಯೋಚನೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಾರಥ್ಯದಲ್ಲಿ ಮನೆಗಳ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಶೀಘ್ರವೇ ದಿನಾಂಕ ನಿಗದಿ ಪಡಿಸಲಾಗುವುದು ಎಂದು ತಿಳಿಸಿದರು. ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್. ಮಂಜುನಾಥ ಹಾಗೂ ಹಲವು ಅಧಿಕಾರಿಗಳು ಹಾಜರಿದ್ದು, ಮನೆಗಳ ನಿರ್ಮಾಣ, ಹಂಚಿಕೆ ಕುರಿತು ಶಾಸಕರಿಗೆ ಮಾಹಿತಿ ನೀಡಿದರು. ಕಾಂಗ್ರೆಸ್ ಮುಖಂಡ ಚಾನಾಳ್ ಶೇಖರ ಮತ್ತಿತರರಿದ್ದರು.