ಕಮಲನಗರ, ಸೊನಾಳ ಗ್ರಾಮಕ್ಕೆ 1.30 ಕೋಟಿ ಅನುದಾನ ಮಂಜೂರು

| Published : Oct 16 2024, 12:48 AM IST / Updated: Oct 16 2024, 12:49 AM IST

ಸಾರಾಂಶ

1.30 crore grant sanctioned to Kamalnagar, Sonala village

-ಮೂಲಭೂತ ಸೌಲಭ್ಯಕ್ಕಾಗಿ ನ್ಯಾಯಾಲಯಕ್ಕೆ ಮೊರೆ ಹೋಗಿ: ಸಮಾಜ ಸೇವಕ ಗುರುನಾಥ ವಡ್ಡೆ

----

ಕನ್ನಡಪ್ರಭ ವಾರ್ತೆ ಬೀದರ್: ಸಮಾಜ ಸೇವಕ ಗುರುನಾಥ ವಡ್ಡೆ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ, ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು ಆದೇಶದಿಂದ ಜಿಲ್ಲೆಯ ಕಮಲನಗರ ತಾಲೂಕಾ ಕೇಂದ್ರದಲ್ಲಿ ಕಮಲನಗರ ಗ್ರಾಮದ ಪ.ಜಾತಿ. ಮತ್ತು ಪ.ಪಂಗಡ ಕಾಲೋನಿಗಳಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ 98.65 ಲಕ್ಷ ರು. ಹಾಗೂ ಕಮಲನಗರ ತಾಲೂಕಿನ ಸೊನಾಳ ಗ್ರಾಮದ ಪರಿಶಿಷ್ಟ ಜಾತಿ (ಬಸವನಗರ) ಕಾಲೋನಿಗಳಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ 32 ಲಕ್ಷ ರು. ಒಟ್ಟು 1.30 ಕೋಟಿ ರು.ಅನುದಾನ ಮಂಜೂರಾಗಿದೆ.

ಈಗಾಗಲೇ ಈ ಎರಡು ಕಾಮಗಾರಿಗಳಿಗೆ ಪಂ.ರಾಜ್ ಇಂಜಿನೀಯರಿಂಗ್ ವಿಭಾಗ, ಬೀದರನಿಂದ ಅಕ್ಟೋಬರ್ 3ರಂದು ಟೆಂಡರ್ ಕರೆಯಲಾಗಿದೆ.

ಸಮಾಜ ಸೇವಕ ಗುರುನಾಥ ವಡ್ಡೆಯವರು ಕಮಲನಗರ ಹಾಗೂ ಸೊನಾಳ ಗ್ರಾಮದ ಬಸವನಗರದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿಗಾಗಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆದು, ಡಿಸೆಂಬರ್ 5, 2022 ರಂದು ಆದೇಶವಾಗಿತ್ತು. ಈ ಆದೇಶದ ಅನುಸಾರ ಸರ್ಕಾರದಿಂದ ಫೆಬ್ರುವರಿ 20, 2024 ರಂದು 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯಡಿ ಜಿಲ್ಲೆಯ ಕಮಲನಗರ ತಾಲೂಕಿನ, ಕಮಲನಗರ ಗ್ರಾಮ ಹಾಗೂ ಕಮಲನಗರ ತಾಲೂಕಿನ ಸೊನಾಳ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಒಟ್ಟು ರು. 1.30 ಕೋಟಿ ರು. ಅನುದಾನ ಮಂಜೂರು ಆಗಿದೆ.

ಮೂಲಭೂತ ಸೌಲಭ್ಯಕ್ಕಾಗಿ ನ್ಯಾಯಾಲಯಕ್ಕೆ ಮೊರೆ ಹೋಗಿ, ಜನ ಸಾಮಾನ್ಯರು ಕೂಡ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತಂದು, ಮೂಲಭೂತ ಸೌಲಭ್ಯ ಪಡೆಯಬಹುದು ಎಂಬುದನ್ನು ಸಮಾಜ ಸೇವಕ ಗುರುನಾಥ ವಡ್ಡೆ ತಿಳಿಸಿದ್ದಾರೆ.

--

ಚಿತ್ರ 14ಬಿಡಿಆರ್59

ಗುರುನಾಥ ವಡ್ಡೆ