ಬ್ಯಾಂಕ್ ನಿಂದ ಹೈನುಗಾರಿಕೆಗೆ ಸಬ್ಸಿಡಿಯಲ್ಲಿ ೪೦-೫೦ ಲಕ್ಷ ಸಾಲ ಕೊಡಿಸುತ್ತೇನೆಂದು ಹೇಳಿ ರೈತರಿಗೆ 1.5 ಕೋಟಿ ರು. ಮೋಸ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕಾಡೇನಹಳ್ಳಿ ಶಂಕ್ರಪ್ಪನ ಬಂಧನ

ಕನ್ನಡಪ್ರಭವಾರ್ತೆ, ಹಳೇಬೀಡು

ಹಸು, ಕುರಿ ಹಾಗೂ ಕೋಳಿ ಸಾಕಣೆ ಹಾಗೂ ಶೆಡ್‌ ನಿರ್ಮಾಣಕ್ಕೆ ಲಕ್ಷಾಂತರ ರು. ಸಾಲ ಕೊಡಿಸುವುದಾಗಿ ನಂಬಿಸಿ ಹಲವಾರು ರೈತರಿಗೆ ಮೋಸ ಮಾಡಿದ್ದ ವ್ಯಕ್ತಿಯನ್ನು ಕೋಲಾರದ ಮುಳಬಾಗಿಲಿನಲ್ಲಿ ಬಂಧಿಸಲಾಗಿದೆ.

ಹಳೇಬೀಡು ಹೋಬಳಿ ರೈತರು ಹಾಗೂ ವರ್ತಕರನ್ನು ಭೇಟಿ ಮಾಡಿ ತಾನು ಪ್ರಧಾನಮಂತ್ರಿ ರೋಜಗಾರ್‌ ಯೋಜನೆ ಏಜೆಂಟ್. ಬ್ಯಾಂಕ್ ನಿಂದ ಹೈನುಗಾರಿಕೆಗೆ ಸಬ್ಸಿಡಿಯಲ್ಲಿ ೪೦-೫೦ ಲಕ್ಷ ಸಾಲ ಕೊಡಿಸುತ್ತೇನೆಂದು ಹೇಳಿ ರೈತರಿಗೆ 1.5 ಕೋಟಿ ರು. ಮೋಸ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಭೈರಕೂರು ಹೋಬಳಿ ಕಾಡೇನಹಳ್ಳಿಯ ಗಂಗಪ್ಪನ ಮಗ ಶಂಕ್ರಪ್ಪ ಎಂಬಾತನೇ ಬಂಧಿತ ವ್ಯಕ್ತಿ. ಈತ ಮೂಲತಃ ಬೈಕ್ ಮೆಕಾನಿಕ್. ೨ ವರ್ಷ ಹಿಂದೆ ಹಳೇಬಿಡು ಹೋಬಳಿಯಾದ್ಯಂತ ಜನರನ್ನು ಪರಿಚಯ ಮಾಡಿಕೊಂಡು ಕುರಿ, ಕೋಳಿ, ಹಂದಿ, ಹಸು, ಗುಡಿಗಾರಿಕೆ ಸಾಲವನ್ನು ರಿಯಾಯಿತಿ ದರದಲ್ಲಿ ಕೊಡಿಸುತ್ತೇನೆಂದು ಹೇಳಿದ್ದಾನೆ. ಇದನ್ನು ನಂಬಿದ ಜನರು ಸುಮಾರು ಹಣ ನೀಡಿದ್ದಾರೆಂದು ತಿಳಿದು ಬಂದಿದೆ.

ಹಳೇಬೀಡು ಗ್ರಾಪಂ ಮಾಜಿ ಸದಸ್ಯ ಸುರೇಶ್ ಮಾತನಾಡಿ, ಹಣ ಕೇಳಲು ಹುಡುಕಿಕೊಂಡು ಅವರ ಊರಿಗೆ ಹೋದಾಗ ನಮ್ಮ ಮೇಲೆ ಸಹ ಕೇಸ್ ಹಾಕಲು ಮುಳಬಾಗಿಲು ತಾಲೂಕಿನ ನಂದಲಿ ಪೊಲೀಸ್ ಸ್ಟೇಷನ್ ಗೆ ಹೋದರು. ಅಲ್ಲಿನ ಪಿ.ಎಸ್.ಐ ವಿದ್ಯಾಶ್ರೀ ವಿಚಾರಣೆ ನಡೆಸಿ ಕ್ರಿಮಿನಲ್ ಕೃತ್ಯಗಳನ್ನು ತಿಳಿದು ಹಳೇಬೀಡು ಪೊಲೀಸ್ ಸ್ಟೇಷನ್‌ಗೆ ಕರೆ ತಂದಿದ್ದಾರೆ ಎಂದರು. ಹಳೇಬೀಡು ಪೊಲೀಸ್ ಠಾಣೆ ಪಿಎಸ್‌ಐ ಯೋಗಬರಂ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.