ಸಾರಾಂಶ
ತೆಂಗು ಪ್ರಮುಖ ವಾಣಿಜ್ಯ ಬೆಳೆ ಹಾಗೂ ರೈತರ ಜೀವನೋಪಾಯ ಬೆಳೆಯಾಗಿದ್ದು ತೆಂಗನ್ನು ನಂಬಿ ಜೀವನ ಕಟ್ಟಿಕೊಂಡಿದ್ದು ಕೇಂದ್ರ ಸರ್ಕಾರವು ಪ್ರತಿ ಕೆ.ಜಿ ಉಂಡೆ ಕೊಬ್ಬರಿಗೆ ಕೇವಲ ಒಂದು ರೂಪಾಯಿ ಬೆಂಬಲ ಬೆಲೆಯನ್ನು ಮಾತ್ರ ಹೆಚ್ಚಿಸಿ ಕೊಬ್ಬರಿ ಬೆಳೆಯುವ ರೈತರಿಗೆ ದ್ರೋಹವೆಸಗಿದೆ ಎಂದು ಸದೃಢ ಫೌಂಡೆಶನ್ ಅಧ್ಯಕ್ಷರಾದ ಭೋಜರಾಜ ಬಳ್ಳೇಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತಿಪಟೂರು
ತೆಂಗು ಪ್ರಮುಖ ವಾಣಿಜ್ಯ ಬೆಳೆ ಹಾಗೂ ರೈತರ ಜೀವನೋಪಾಯ ಬೆಳೆಯಾಗಿದ್ದು ತೆಂಗನ್ನು ನಂಬಿ ಜೀವನ ಕಟ್ಟಿಕೊಂಡಿದ್ದು ಕೇಂದ್ರ ಸರ್ಕಾರವು ಪ್ರತಿ ಕೆ.ಜಿ ಉಂಡೆ ಕೊಬ್ಬರಿಗೆ ಕೇವಲ ಒಂದು ರೂಪಾಯಿ ಬೆಂಬಲ ಬೆಲೆಯನ್ನು ಮಾತ್ರ ಹೆಚ್ಚಿಸಿ ಕೊಬ್ಬರಿ ಬೆಳೆಯುವ ರೈತರಿಗೆ ದ್ರೋಹವೆಸಗಿದೆ ಎಂದು ಸದೃಢ ಫೌಂಡೆಶನ್ ಅಧ್ಯಕ್ಷರಾದ ಭೋಜರಾಜ ಬಳ್ಳೇಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ನಿಯಮಗಳ ಪ್ರಕಾರ ಬೆಂಬಲ ಬೆಲೆಯನ್ನು ನಿಧರಿಸಲು ಉತ್ಪಾದನಾ ವೆಚ್ಚವೇ ಪ್ರಮುಖ ಅಂಶವಾಗಿದೆ. ದೇಶೀಯ-ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳೆಗಳು ಹಾಗೂ ಉತ್ಪಾದನಾ ವೆಚ್ಚಕಿಂತ ಕನಿಷ್ಟ ೫೦ರಷ್ಟು ಹೆಚ್ಚಿನ ಬೆಲೆಯನ್ನು ನಿಗದಿಪಡಿಸಬೇಕಾಗಿದೆ. ಆದರೆ ಕೃಷಿ ಬೆಲೆ ಆಯೋಗ ಮತ್ತು ತೋಟಗಾರಿಕಾ ಇಲಾಖೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವ ಉತ್ಪಾದನಾ ವೆಚ್ಚ ೧೮೩೬೮ ರೂಗಳಿದ್ದು ಇದನ್ನು ಪರಿಗಣಿಸದೆ ಕಳೆದ ವಾರ ಕೇಂದ್ರ ಸರ್ಕಾರ ಕೇವಲ ಒಂದು ಕ್ವಿಂಟಾಲ್ ಉಂಡೆ ಕೊಬ್ಬರಿಗೆ ೧೦೦ ರೂ ಗಳನ್ನು ಹೆಚ್ಚಿಸಿರುವುದು ಅವೈಜ್ಞಾನಿಕ. ದೇಶಕ್ಕೆ ಅನ್ನ ಕೊಡುವ ರೈತನಿಗೆ ಕೇವಲ ೧ ರೂ ಹೆಚ್ಚಳ ಮಾಡುತ್ತಾರೆ ಎಂದರೆ ನಾಚಿಕೆಗೇಡಿನ ಸಂಗತಿ ಎಂದು ತೆಂಗು ಬೆಳೆಗಾರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆಯೆ ಕೇಂದ್ರ ಸಚಿವ ವಿ ಸೋಮಣ್ಣರನ್ನು ಭೇಟಿ ಮಾಡಿ ಕೇಂದ್ರ ಕೃಷಿ ಸಚಿವರು ಹಾಗೂ ಪ್ರಧಾನ ಮಂತ್ರಿಗಳಿಗೆ ಪತ್ರ ಮೂಲಕ ಮನವಿ ಮಾಡಿ ಇಂದಿನ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕೊಬ್ಬರಿಯ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಕೇಳಿದ್ದೆವು. ಆದರೂ ಕೂಡ ಕೇವಲ ೧ ರೂ ಹೆಚ್ಚಿಸಿರುವುದು ರೈತರ ಬಗೆಗಿನ ಕೇಂದ್ರ ಸರ್ಕಾರದ ನಿಲುವನ್ನು ತೋರಿಸುತ್ತದೆ ಎಂದು ದೂರಿದ್ದಾರೆ.