ಸಾರಾಂಶ
ಅಂಶಿ ಪ್ರಸನ್ನಕುಮಾರ್
ಮೈಸೂರು : ಟಿ. ನರಸೀಪುರ ತಾಲೂಕು ಕೊಣಗಳ್ಳಿಯ ನಾಗೇಂದ್ರ ಅವರು ಕನಕಾಂಬರ ಹೂವು ಬೆಳೆಯುವ ಮೂಲಕ ವಾರ್ಷಿಕ ಒಂದು ಲಕ್ಷ ರು. ಸಂಪಾದಿಸುತ್ತಿದ್ದಾರೆ. ಇದಲ್ಲದೇ ಇತರೆ ಬೆಳೆಗಳಿಂದ ಸೇರಿ 10 ಲಕ್ಷ ರು. ನಿವ್ವಳ ಆದಾಯ ಗಳಿಸುತ್ತಿದ್ದಾರೆ.ಅವರಿಗೆ 20 ಎಕರೆ ಜಮೀನಿದೆ. ಸ್ವಂತದಲ್ಲದೇ ಬೇರೆಯವರ ಜಮೀನನ್ನು ಕೂಡ ಗುತ್ತಿಗೆ ಪಡೆದು ವ್ಯವಸಾಯ ಮಾಡಿಸುತ್ತಾರೆ.
ನಾಲ್ಕು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ.ಒಂದು ಎಕರೆಯಲ್ಲಿ ಅರಿಶಿನ ಬೆಳೆದಿದ್ದಾರೆ. ಕಳೆದ ವರ್ಷ ಎರಡು ಎಕರೆಯಲ್ಲಿ ಬೆಳೆದಿದ್ದರು. 8 ಲಕ್ಷ ರು. ಸಿಕ್ಕಿತ್ತು. 20 ಗುಂಟೆಯಲ್ಲಿ ಕನಕಾಂಬರ ಹೂವು ಬೆಳೆಯುತ್ತಿದ್ದಾರೆ.
ಟಿ. ನರಸೀಪುರ, ಮೈಸೂರಿನಲ್ಲಿ ಮಾರಾಟ ಮಾಡುತ್ತಾರೆ. ಪ್ರತಿಕೆಜಿ 200- 300 ರು.ಗೆ ಮಾರಾಟವಾಗುತ್ತಿತ್ತು. ಈ ಬಾರಿ 600 ರು.ಗೆ ಮಾರಾಟವಾಗುತ್ತಿದೆ. ವರ್ಷಕ್ಕೆ ಕನಕಾಂಬರದಿಂದಲೇ ಒಂದು ಲಕ್ಷ ರು. ಸಂಪಾದಿಸುತ್ತಾರೆ. ನಾಲ್ಕು ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ನಂಜನಗೂಡಿನ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಪೂರೈಸುತ್ತಾರೆ.
ಇದರಿಂದ 3.50 ಉತ್ತಮ ಆದಾಯ ಸಿಗುತ್ತದೆ. 30 ಗುಂಟೆಯಲ್ಲಿ ಶುಂಠಿ ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ದರ ಕುಸಿತದಿಂದ ತೊಂದರೆಯಾಗಿದೆ.ಎರಡು ಎಕರೆಯಲ್ಲಿ ಮುಸುಕಿನ ಜೋಳ ಬೆಳೆದಿದ್ದಾರೆ. ಇದರಿಂದ 1 ಲಕ್ಷ ರು. ಆದಾಯವಿದೆ. 100 ತೆಂಗಿನ ಮರಗಳಿವೆ. ಎರಡು ಹಸುಗಳಿದ್ದು, ಡೇರಿಗೆ ಪ್ರತಿನಿತ್ಯ 10 ಲೀಟರ್ ಹಾಲು ಪೂರೈಸುತ್ತಾರೆ. ಕೃಷಿ ಹೊಂಡಾ ಇದೆ. ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಪರೀಕ್ಷೆ ಮಾಡಿಸುತ್ತಾರೆ.
ಮುಂದೆ ಕುರಿ ಹಾಗೂ ಮೀನು ಸಾಕಾಣಿಕೆಯ ಉದ್ದೇಶವಿದೆ. ಜಮೀನನ್ನು ರಾಸಾಯನಿಕ ಮುಕ್ತ ಮಾಡಬೇಕು. ಕೊಟ್ಟಿಗೆ ಗೊಬ್ಬರ ಹೆಚ್ಚಾಗಿ ಬಳಸಬೇಕು ಎಂಬ ಕಡೆ ಗಮನಹರಿಸಿದ್ದಾರೆ. ಕೃಷಿ ಯಂತ್ರೋಪಕರಣ ಬಳಸುತ್ತಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.
ಸಂಪರ್ಕ ವಿಳಾಸ
ಎಂ. ನಾಗೇಂದ್ರ ಬಿನ್ ಮಹದೇವಯ್ಯ
ಕೊಣಗಹಳ್ಳಿ
ಸೋಸಲೆ ಹೋಬಳಿ
ಟಿ, ನರಸೀಪುರ ತಾಲೂಕು
ಮೈಸೂರು ಜಿಲ್ಲೆ
ಮೊ.98805 78396
ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಕೃಷಿಯಲ್ಲಿ ನಷ್ಟ ಆಗುವುದಿಲ್ಲ. ರಾಗಿ ಸೇರಿದಂತೆ ಮನೆಗೆ ಬೇಕಾದ ಆಹಾರ ಪದಾರ್ಥಗಳನ್ನು ನಾವೇ ಬೆಳೆದುಕೊಳ್ಳಬೇಕು. ಒಂದು ಇಲಾತಿ ಹಸು ಸಾಕೋದು ಒಂದೇ. ಹತ್ತು ಕುಂಟೆಯಲ್ಲಿ ಕಸಕಾಪುರ ಬೆಳೆಯೋದು ಒಂದೇ. ಕನಕಾಂಬರಕ್ಕೆ ಬಂಪರ್ ಬೆಲೆ ಸಿಗುವುದರಿಂದ ರೈತರು ಉತ್ತಮ ಆದಾಯ ಗಳಿಸಬಹುದು. ಆದ್ದರಿಂದ ಕನಕಾಂಬರ ಬೆಳೆಯುವ ಕಡೆ ಗಮನ ನೀಡಬೇಕು.
-ಎಂ. ನಾಗೇಂದ್ರ, ಕೊಣಗಹಳ್ಳಿ