ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಎದುರು ಗ್ರಾಮಸ್ಥರು ರೈತ ಸಂಘದ ಬೆಂಬಲದೊಂದಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ 100ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಚಳವಳಿ ನಿರತರು ಕಪ್ಪು ಪಟ್ಟಿ ಧರಿಸಿ ಕಪ್ಪು ಬಾವುಟ ಹಿಡಿದು ಕರಾಳ ದಿನವನ್ನು ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಸೇರಿ ನಾಲ್ಕು ಗ್ರಾಪಂಗಳ ಸೇರ್ಡಪೆ ಕೈ ಬಿಡುವಂತೆ ಒತ್ತಾಯಿಸಿ ನಡೆಸುತ್ತಿರುವ ಚಳವಳಿಯನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ.ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಎದುರು ಗ್ರಾಮಸ್ಥರು ರೈತ ಸಂಘದ ಬೆಂಬಲದೊಂದಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ 100ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಚಳವಳಿ ನಿರತರು ಕಪ್ಪು ಪಟ್ಟಿ ಧರಿಸಿ ಕಪ್ಪು ಬಾವುಟ ಹಿಡಿದು ಕರಾಳ ದಿನವನ್ನು ಆಚರಿಸಿದರು.
ನಗರಸಭೆಗೆ ಗ್ರಾಪಂಗಳ ಸೇರ್ಪಡೆ ವಿವಾದ ರಾಜ್ಯ ನ್ಯಾಯಾಲಯದಲ್ಲಿದೆ. ಇದರಲ್ಲಿ ನಮ್ಮ ಹೋರಾಟದ ವಿರುದ್ಧವಾಗಿ ವ್ಯತಿರಿಕ್ತ ತೀರ್ಪು ಬಂದರೆ ಚಳವಳಿ ತೀವ್ರಗೊಳಿಸಲು ಗ್ರಾಮಸ್ಥರು ಗ್ರಾಮದ ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಪ್ರತಿಜ್ಞೆ ಸ್ವೀಕರಿಸಿದರು.ಈಗ ನಡೆಯುತ್ತಿರುವ ಚಳವಳಿ 100 ದಿನ ಅಲ್ಲ. ಸಾವಿರ ದಿನವಾದರೂ ಸಹ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತಪರ ಹೋರಾಟಗಾರ್ತಿ ಸುನಂದ ಜಯರಾಂ ತಿಳಿಸಿದರು.
ಚಳವಳಿ ಮೊದಲ ಹಂತವಾಗಿ ರಸ್ತೆ, ರೈಲು ತಡೆ ಸೇರಿದಂತೆ ಅನೇಕ ರೀತಿಯ ಚಳವಳಿ ನಡೆಸುವ ಮೂಲಕ ಗೆಜ್ಜಲಗೆರೆ ಗ್ರಾಮ ಹೋರಾಟದ ಗ್ರಾಮ ಎಂದು ಮತ್ತೊಮ್ಮೆ ಸಾಬೀತು ಪಡಿಸುವ ಮೂಲಕ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಸಿದರು.ಗ್ರಾಮದಲ್ಲಿ ಈ ಹಿಂದೆ ನಡೆದ ರೈತ ಚಳವಳಿಯಲ್ಲಿ ಇಬ್ಬರು ರೈತರು ಪ್ರಾಣ ಪ್ರಾಣಾರ್ಪಣೆ ಮೂಲಕ ಗ್ರಾಮ ಹೋರಾಟದ ಗ್ರಾಮ ಎಂದು ಸಾಬೀತು ಪಡಿಸಿದ್ದಾರೆ. ಇಂಥ ಪರಿಸ್ಥಿತಿ ಪುನರಾವರ್ತನೆ ಆಗಬಾರದು ಎಂಬ ಉದ್ದೇಶ ಸರ್ಕಾರ ಅಥವಾ ಜನಪ್ರತಿನಿಧಿಗಳಿಗೆ ಇದ್ದರೆ ತಕ್ಷಣ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ನಿರ್ಣಯ ಪ್ರತಿ ಸಿಎಂಗೆ ಸಲ್ಲಿಸಿದ ಧರಣಿ ನಿರತರು:ನಿಯಮ ಬಾಹಿರವಾಗಿ ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದು ಸೇರಿದಂತೆ ವಿವಿಧ ಬೇಡಿಕೆ ಒಳಗೊಂಡ ನಿರ್ಣಯದ ಪ್ರತಿಯನ್ನು ಧರಣಿನಿರತರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಿಸಿದರು.
ಗ್ರಾಪಂ ಎದುರು ಕರಾಳ ದಿನ ಆಚರಿಸಿ ನಿರ್ಣಯದ ಮನವಿಯನ್ನು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮೂಲಕ ಸಿಎಂಗೆ ಸಲ್ಲಿಸಿದರು. ಗ್ರಾಪಂಗೆ ನೀಡಿರುವ ನೀರು ಸೇರಿದಂತೆ ಸ್ಥಗಿತಗೊಳಿಸಿರುವ ಮೂಲ ಸೌಲಭ್ಯಗಳನ್ನು ಮುಂದುವರಿಸಬೇಕು. ನಗರಸಭೆ ಸೇರುವುದನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ನೇರ ಹೊಣೆಗಾರರು ಎಂದು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿದರು.ಈ ವೇಳೆ ಗ್ರಾಮದ ಮುಖಂಡರಾದ ಜಿ.ಟಿ.ಚಂದ್ರಶೇಖರ್, ವೀರಪ್ಪ, ಮೋಹನ್ ಕುಮಾರ್, ಚಂದ್ರಶೇಖರ್, ಜಿ.ಸಿ.ಮಹೇಂದ್ರ, ಜಿ.ಪಿ.ಯೋಗೇಶ್, ಮತ್ತಿತರರಿದ್ದರು.ಸರ್ಕಾರಕ್ಕೆ ಜನ ಬುದ್ಧಿ ಕಲಿಸುವ ದಿನಗಳು ಸನ್ನಿಹಿತ: ರೈತ ಮುಖಂಡರ ಎಚ್ಚರಿಕೆ
ಮದ್ದೂರು:ಪ್ರಜಾಪ್ರಭುತ್ವದ ವಿರೋಧ ಕಟ್ಟಿಕೊಂಡು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನ ಬುದ್ಧಿ ಕಲಿಸುವ ದಿನಗಳು ಸನ್ನಿಹಿತವಾಗುತ್ತಿದೆ ಎಂದು ರೈತ ಮುಖಂಡರು ಮಂಗಳವಾರ ಎಚ್ಚರಿಕೆ ನೀಡಿದರು.ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ನಡೆದ ಧರಣಿಯ ಕರಾಳ ದಿನ ಸಭೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡರಾದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕೆಂಪುಗೌಡ ಸೇರಿದಂತೆ ಮುಖಂಡರು ಗ್ರಾಮಸ್ಥರು ಹೋರಾಟಕ್ಕೆ ಬೆಂಬಲ ಸೂಚಿಸಿ ಸಭೆ ಮಾತನಾಡಿದರು.ಜನರು ಬೇಡ ಎನ್ನುವ ವಿಷಯವನ್ನು ಸ್ವೀಕರಿಸದಿರುವುದು ನಾಗರಿಕ ಸರ್ಕಾರದ ಕರ್ತವ್ಯ. ಒಂದು ವೇಳೆ ಜನರ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡರೆ ಅದು ಅನಾಗರಿಕ ಸರ್ಕಾರ. ಮಂಡ್ಯದ ಜನರು ಹೃದಯವಂತ ಉಳ್ಳವರು. ಈ ಜನಕ್ಕೆ ಹೋರಾಟವು ಗೊತ್ತು ಮತ್ತು ಹಸಿದವರಿಗೆ ಅನ್ನ ಹಾಕುವ ಜಾಯಮಾನ ಉಳ್ಳವರು. ಜಿಲ್ಲೆಯ ಜನರ ಇಚ್ಚೆಗೆ ವಿರುದ್ಧವಾಗಿ ಯಾವುದೇ ಸರ್ಕಾರ ನಡೆದುಕೊಂಡರು ಆ ಸರ್ಕಾರ ಸರ್ವನಾಶವಾಗುವುದು ಖಚಿತ ಎಂದು ಎಚ್ಚರಿಸಿದರು.
ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಡಾ.ರವೀಂದ್ರ, ಪ್ರೊ.ಲತಾ, ಯದುಶೈಲ ಸಂಪತ್, ಬೋರಯ್ಯ, ಗೋವಿಂದೇಗೌಡ, ಪ್ರೊ.ಜಿ.ಟಿ.ವೀರಪ್ಪ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಸೇರಿದಂತೆ ಹಲವುರೈತ ಮತ್ತು ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.