ಫೆ.26 ರವರೆಗೆ 100 ಉಚಿತ ಹೆರಿಗೆ ಸೇವೆ

| Published : Oct 17 2025, 01:04 AM IST

ಫೆ.26 ರವರೆಗೆ 100 ಉಚಿತ ಹೆರಿಗೆ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿಯ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್.ಜಿ.ವಿ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಎಸ್.ಜಿ.ವಿ.ಈಶಾ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ವತಿಯಿಂದ ಅ.14 ರಿಂದ 2026ರ ಫೆ.26 ರವರೆಗೆ ಒಟ್ಟು 100 ಉಚಿತ ಹೆರಿಗೆ ಸೇವೆಯನ್ನು ಮಾಡಲಾಗುವುದು ಎಂದು ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಇಲ್ಲಿಯ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್.ಜಿ.ವಿ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಎಸ್.ಜಿ.ವಿ.ಈಶಾ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ವತಿಯಿಂದ ಅ.14 ರಿಂದ 2026ರ ಫೆ.26 ರವರೆಗೆ ಒಟ್ಟು 100 ಉಚಿತ ಹೆರಿಗೆ ಸೇವೆಯನ್ನು ಮಾಡಲಾಗುವುದು ಎಂದು ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ನುಡಿದರು.

ಪಟ್ಟಣದ ಮೂರುಸಾವಿರ ಮಠದಲ್ಲಿ ನಡೆದ ಮಾತೃ ವಾತ್ಸಲ್ಯ ಕಾರ್ಯಕ್ರಮ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಶಿಕ್ಷಣ ಸಂಸ್ಥೆಯಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತದೆ. ಅವರೆಲ್ಲರೂ ಈ ಉಚಿತ ಹೆರಿಗೆ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಚಿತ್ರನಟ ಶಿವರಂಜನ್ ಬೋಳಣ್ಣವರ ಮಾತನಾಡಿ, ಪ್ರಭುನೀಲಕಂಠ ಮಹಾಸ್ವಾಮೀಜಿ ಅವರ 32ನೇ ಜನ್ಮದಿನ ನಿಮಿತ್ತ ಹಮ್ಮಿಕೊಂಡ ಉಚಿತ ಹೆರಿಗೆ ಸೇವೆ ಶ್ಲಾಘನೀಯವಾಗಿದೆ. ಹೊರಗಡೆ ಖಾಸಗಿ ಆಸ್ಪತ್ರೆಗಳಲ್ಲಿ ನಾರಮಲ್, ಸಿಜೆರಿಯನ್ ಹೆರಿಗೆ ಮಾಡಿಸಲು ಸಾವಿರಾರು ರುಪಾಯಿ ಖರ್ಚು ಮಾಡಬೇಕು. ಇದರಿಂದ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಇದನ್ನು ಅರಿತ ಪ್ರಭುನೀಲಕಂಠ ಶ್ರೀಗಳು ಇಂತಹ ಸೇವೆ ರೂಪಿಸಿದ್ದಾರೆ. ಪ್ರಭುನೀಲಕಂಠ ಶ್ರೀಗಳು ಶಿಕ್ಷಣ, ಆಧ್ಯಾತ್ಮಿಕ ಕ್ಷೇತ್ರಗಳಿಗೆ ಮಹತ್ವ ನೀಡಿದ್ದರು, ಪ್ರಸ್ತುತ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಬಣ್ಣಿಸಿದರು. ಪ್ರಾಂಶುಪಾಲ ಡಾ.ಸುಭಾಸ ಬಾಗಡೆ, ಮುಖ್ಯ ವೈದ್ಯಾಧಿಕಾರಿ ಡಾ.ನಾಗೇಂದ್ರ ಪಾಟೀಲ ಮಾತನಾಡಿ, 100 ಹಾಸಿಗೆಯುಳ್ಳ ಸುಸಜ್ಜಿತ ಐಸಿಯು, ಓಟಿ, ಹೆರಿಗೆ ಕೊಠಡಿ ಸೌಲಭ್ಯ ಹೊಂದಿರುವ ಹಾಗೂ ಪರಿಣಿತ ತಜ್ಞ ವೈದ್ಯರಿಂದ ಪಟ್ಟಣದ ಧಾರವಾಡ ಬೈಪಾಸ್ ರಸ್ತೆಯಲ್ಲಿರುವ ವೀರಭದ್ರೇಶ್ವರ ಕಲ್ಯಾಣ ಮಂಟಪ ಹಿಂದುಗಡೆ ಇರುವ ಎಸ್.ಜಿ.ವಿ.ಈಶಾ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯು ಮಾತೃ ವಾತ್ಸಲ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಲಾಭ ಪಡೆಯಲು ಇಚ್ಛೆಯುಳ್ಳ ಗರ್ಭಿಣಿಯರು ಮೊದಲು ನಮ್ಮ ಆಸ್ಪತ್ರೆಯಲ್ಲಿ ತಮ್ಮ ಹೆಸರು ನೋಂದಾಯಿಸಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಕೋರಿ ಹೆಚ್ಚಿನ ಮಾಹಿತಿಗಾಗಿ ಮೊ.8197504459, ದೂ.08288-200477 ಸಂಪರ್ಕಿಸಲು ತಿಳಿಸಿದರು.ಮುನವಳ್ಳಿಯ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗಣ್ಯರಾದ ವಿಶ್ವನಾಥ ಹಿರೇಮಠ (ಬಾಳೇಕುಂದರಗಿ), ಅನಿಲ ಮೆಟಗುಡ್ಡ, ಎಸ್ಎನ್‌ವಿ ವಿ.ಎಸ್.ಸಂಸ್ಥೆ ನಿರ್ದೇಶಕರಾದ ವಿರೂಪಾಕ್ಷ ಕೋರಿಮಠ, ವಿ.ಕೆ.ಬಡಿಗೇರ, ಬಿ.ಎಸ್.ಗುರಣ್ಣವರ, ಸಿ.ಎಸ್.ಕುಸಲಾಪೂರ, ಆರ್.ಜಿ.ಹಿರೇಮಠ, ಎಸ್.ವಿ.ಹುಲ್ಲೆಪ್ಪನವರಮಠ, ಬಿ.ಎಸ್.ಹೊಂಡೇದ, ಪಿ.ವಿ.ಪೂಜೇರ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಪ್ರಾಚಾರ್ಯ ಎನ್.ಎಸ್.ಚಿಲಮೂರ ನಿರೂಪಿಸಿದರು. ಶ್ರೀಗಳನ್ನು ಮೆಚ್ಚಿ ಸಂತ ವ್ಯಕ್ತಪಡಿಸಿದ ಜನತೆ

ಶಿಕ್ಷಣ ಹರಿಕಾರರಾಗಿದ್ದ ಲಿಂ.ಗಂಗಾಧರ ಮಹಾಸ್ವಾಮೀಜಿ ಅವರು ಶ್ರೀಮಠದ ಹಾಗೂ ಶಿಕ್ಷಣ ಸಂಸ್ಥೆಗಳ ಏಳ್ಗೆಗೆ ಹಗಲಿರುಳು ಶ್ರಮಿಸಿದ್ದರು. ಬೈಲಹೊಂಗಲ ನಾಡಿನ ಏಳ್ಗೆಯಲ್ಲಿ ಲಿಂ.ಗಂಗಾಧರ ಶ್ರೀಗಳ ಪಾತ್ರ ಹಿರಿದಾಗಿದೆ. ಆಧ್ಯಾತ್ಮಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದೇ ಸಂಪ್ರದಾಯವನ್ನು ಪ್ರಭುನೀಲಕಂಠ ಶ್ರೀಗಳು ಮುಂದುವರೆಸಿದ್ದಾರೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದರು.ಶುಭಾಶಯಗಳ ಮಹಾಪೂರ!

ಪ್ರಭುನೀಲಕಂಠ ಮಹಾಸ್ವಾಮೀಜಿ ಅವರ 32ನೇ ಜನ್ಮದಿನವನ್ನು ಸದ್ಭಕ್ತರು ಸಡಗರ, ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆಯಿಂದ ತಡರಾತ್ರಿಯವರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು, ನಾಗರಿಕರು, ವಿವಿಧ ಗಣ್ಯಮಾನ್ಯರು, ಮಠಾಧೀಶರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಾನಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶ್ರೀಮಠಕ್ಕೆ ಬಂದು ಪೂಜ್ಯರಿಗೆ ಜನ್ಮದಿನದ ಶುಭಾಶಯ ಕೋರಿದರು. ಶ್ರೀಮಠಕ್ಕೆ ಬಂದ ಪ್ರತಿಯೊಬ್ಬ ಭಕ್ತರನ್ನು ಪೂಜ್ಯರು ಆತ್ಮೀಯತೆಯಿಂದ ಬರಮಾಡಿಕೊಂಡು ಸಿಹಿ ನೀಡಿದರು. ಸಾಮಾಜಿಕ ಜಾಲತಾಣದಲ್ಲಿ ಶ್ರೀಗಳ ಗುಣಗಾನ:

ಶ್ರೀಮಠದ ಸದ್ಭಕ್ತರು, ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದರು. ಫೇಸಬುಕ್, ವಾಟ್ಸಪ್, ಸ್ಟೇಟಸ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ಶ್ರೀಗಳ ಫೊಟೋ ಅಪಲೋಡ್ ಮಾಡಿ, ಶುಭ ಕೋರಲಾಯಿತು. ನೂರಾರು ಜನರು, ಶ್ರೀಗಳ ಫೊಟೋವನ್ನು ಸ್ಟೇಟಸ್ ಇಟ್ಟಿದ್ದರು. ಸುರಕ್ಷಿತ ಹೆರಿಗೆ ಆರೋಗ್ಯಕರ ತಾಯಿ ಮತ್ತು ಮಗು ಎಂಬ ತತ್ವದಂತೆ ಕಾಳಜಿಪೂರ್ವಕವಾಗಿ ಹೆರಿಗೆ ಸೇವೆಯನ್ನು ನಮ್ಮ ವೈದ್ಯರ ತಂಡ ಮಾಡಲಿದೆ. ಈ ನಮ್ಮ ಆಸ್ಪತ್ರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಕರ್ನಾಟಕ ಹಾಗೂ ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗದಿಂದ ಮಾನ್ಯತೆ ಪಡೆದಿದೆ.

-ಪ್ರಭುನೀಲಕಂಠ ಸ್ವಾಮೀಜಿ,

ಮೂರುಸಾವಿರ ಮಠ.