ಸ್ವಾತಂತ್ರ್ಯ ಶತಮಾನೋತ್ಸವಕ್ಕೆ ಶೇ.100ರಷ್ಟು ಸಾಕ್ಷರತೆ ಗುರಿ

| Published : Aug 13 2024, 12:45 AM IST

ಸಾರಾಂಶ

ಅಸಂಖ್ಯಾತ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆದು 2047ಕ್ಕೆ ಶತಮಾನೋತ್ಸವ ಅಚರಿಸಲಿದ್ದು, ಈ ಹೊತ್ತಿಗೆ ದೇಶ ಸಾಕ್ಷರತೆ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸಬೇಕಿದೆ ಎಂದು ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಸಂಖ್ಯಾತ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆದು 2047ಕ್ಕೆ ಶತಮಾನೋತ್ಸವ ಅಚರಿಸಲಿದ್ದು, ಈ ಹೊತ್ತಿಗೆ ದೇಶ ಸಾಕ್ಷರತೆ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸಬೇಕಿದೆ ಎಂದು ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಕರೆ ನೀಡಿದರು.

ಗುಲ್ಗರ್ಗ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಜರುಗಿದ ವಿ.ವಿ.ಯ 42ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ದೇಶದಲ್ಲಿ ಪುರುಷರು ಶೇ.75ರಷ್ಟು ಸಾಕ್ಷರತೆ ಹೊಂದಿದ್ದರೆ, ಮಹಿಳೆಯರಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಇದೆ. ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯವಿದ್ದು, ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

ನಳಂದಾ, ತಕ್ಷಶಿಲಾದಂತಹ ಉನ್ನತ ಶಿಕ್ಷಣ ಸಂಸ್ಥೆಗಳ ಇತಿಹಾಸ ನಾವು ಹೊಂದಿದ್ದೇವೆ. ಹಿಂದೆ ದೇಶವನ್ನು ಸೋನೆ ಕೀ ಚಿಡಿಯಾ ಎಂದು ಕರೆಯಲಾಗಿತ್ತು. ಇದೀಗ ಮತ್ತೆ ಭಾರತವನ್ನು ವಿಶ್ವಗುರು ಮಾಡಬೇಕಿದೆ. ಸಮಾನತೆ, ವಸುದೈವ ಕುಟುಂಬಕಂ ಪರಿಕಲ್ಪನೆ ನಮ್ಮದಾಗಿದ್ದು, ಸರ್ವಜನರು ಸುಖದಿಂದ ಬಾಳುವಂತೆ ಮತ್ತು ಜನರು ನಿರುದ್ಯೋಗಿಯಾಗಿ ಬದುಕುವ ನಮ್ಮ ಚಿಂತನೆ ಎಲ್ಲೆಡೆ ಪಸರಿಸಬೇಕಿದೆ ಎಂದರು.

ವಿಶ್ವದ ಅರ್ಥಿಕ ಪ್ರಗತಿಯಲ್ಲಿ ಭಾರತವು 5ನೇ ಸ್ಥಾನದಲ್ಲಿದ್ದು, ಇದನ್ನು ಮೂರನೇ ಸ್ಥಾನಕ್ಕೆ ತರಲು ಪ್ರಧಾನಮಂತ್ರಿಗಳು ಪಣ ತೊಟ್ಟಿದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಇದು ಸಾಧ್ಯವಾದಲ್ಲಿ ಮಾತ್ರ ದೇಶ ವಿಕಸಿತ್ ಭಾರತವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಏಕ್ ಪೇಡ್ ಮಾ ಕೇ ನಾಮ್ ಅಭಿಯಾನ ಆಯೋಜಿಸಿ: ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಏಕ್ ಪೇಡ್ ಮಾ ಕೇ ನಾಮ್ ಹೆಸರಿನಡಿ ಗಿಡ ನೆಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟಿದ್ದು, ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿ.ವಿ. ಗಳು ಮುಂದಿನ ವಾರದಲ್ಲಿ ತಮ್ಮ ವ್ಯಾಪ್ತಿಯ‌ಲ್ಲಿ ಹೆಚ್ಚು ಗಿಡ ನೆಡಬೇಕು. ತಾಯಿ ಮಕ್ಕಳನ್ನು ರಕ್ಷಿಸುವ ರೀತಿಯಲ್ಲಿ ಗಿಡಗಳನ್ನು ಸಂರಕ್ಷಿಸಬೇಕು ಎಂದು ವಿ.ವಿ.ಗಳಿಗೆ ಸಲಹೆ ನೀಡಿದರು.

ಹುದ್ದೆ ಭರ್ತಿಗೆ ಸಿಎಂ ಒಪ್ಪಿಗೆ: ಉನ್ನತ‌ ಶಿಕ್ಷಣ‌ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಗುಲಬರ್ಗಾ ವಿವಿ ಸೇರಿದಂತೆ ರಾಜ್ಯದ ವಿಶ್ವವಿದ್ಯಾಲಯದಲ್ಲಿನ ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಈಗಾಗಲೆ ರಾಜ್ಯಪಾಲರು ಅನುಮೋದನೆ ನೀಡಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಒಪ್ಪಿಗೆ ಸೂಚಿಸಿದ್ದು, ಕೂಡಲೆ ಪ್ರಸ್ತಾವನೆ ಸಲ್ಲಿಸುವಂತೆ ವಿ.ವಿ. ಕುಲಪತಿಗಳಿಗೆ ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ವಿಶ್ವವಿದ್ಯಾಲಯಗಳ ಸಮಗ್ರ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯು ಶೇ.10ರಷ್ಟು ಅನುದಾನ‌ ಮೀಸಲಿರಿಸಬೇಕೆಂದು ಆದೇಶಿಸಿದ್ದು ಸ್ವಾಗತಾರ್ಹ ಎಂದಿರುವ ಅವರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಸ್ಥಾಪನೆಗೆ 10 ಎಕರೆ ಮತ್ತು ಮಲ್ಟಿ ಡಿಸಿಪ್ಲನರಿ ಸೆಂಟರ್ ಸ್ಥಾಪನೆಗೆ 25 ಎಕರೆ ಜಮೀನು ಗುಲಬರ್ಗಾ ವಿ.ವಿ.ಯಿಂದ ನೀಡಲಾಗುತ್ತಿದೆ. ಇದರಿಂದ ವಿ.ವಿ. ವಿದ್ಯಾರ್ಥಿಗಳಿಗೆ ದೊಡ್ಡ ಪ್ರಯೋಜನವಾಗಲಿದೆ ಎಂದರು.ಇಷ್ಟದ ವೃತ್ತಿಯಲ್ಲಿ ಉತ್ಸಾಹದಿಂದ ಮುನ್ನುಗ್ಗಿ: ಪ್ರೊ.ಸುನೀಲಕುಮಾರ್‌ ಸಿಂಗ್‌

ಮೊದಲು ಓಟವನ್ನು ತಪ್ಪಿಸಿ. ಇತರರಿಗೆ ಕೆಲಸ ಮಾಡುವುದನ್ನು ಬಿಡಿ. ಪರರಿಗೆ ಜೀವಿಸುವುದನ್ನು ಬಿಟ್ಟು ನಿಮ್ಮಿಷ್ಟದ ವೃತ್ತಿಯಲ್ಲಿ ಉತ್ಸಾಹದಿಂದ ಮುನ್ನುಗ್ಗಿದಲ್ಲಿ ದೊಡ್ಡ ಸಾಧನೆ ಶತಸಿದ್ಧ ಎಂದು ಗೋವಾದ ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯಯ (ಸಿ.ಎಸ್.ಐ.ಆರ್) ನಿರ್ದೇಶಕ ಪ್ರೊ.ಸುನೀಲ ಕುಮಾರ್ ಸಿಂಗ್ ತಮ್ಮ‌ ಘಟಿಕೋತ್ಸವ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಾಧನೆಗೆ ನಂಬಿಕೆಯೇ ಕೀಲಿಕೈ. ನಿಮ್ಮ ಮೇಲಿನ ನಂಬಿಕೆಯನ್ನು ನೀವು ಯಾವಾಗಲು ಕಳೆದುಕೊಳ್ಳಬಾರದು. ಅದನ್ನು ಉಳಿಸಿಕೊಂಡು ಮುಂದೆ ಸಾಗಬೇಕು. ಕಲಿಕೆ‌ ನಿರಂತರ ಪ್ರಕ್ರಿಯೆಯಾಗಿದ್ದು, ಅದು ಎಂದಿಗೂ ನಿಲ್ಲಬಾರದು. ಜ್ಞಾನವು ಎಂತಹ ಸಂಪತ್ತೆಂದರೆ ಅದನ್ನು ಕೌಶಲ್ಯಪೂರ್ಣ ಕಳ್ಳನು ಕದಿಯಲು ಸಾಧ್ಯವಿಲ್ಲ ಎಂದರು.

ಪದವಿ ಪಡೆದ ನೀವು ಇಂದು ಸಭಾಂಗಣದಿಂದ ಹೊರಗಡೆ ಕಾಲಿಟ್ಟರೆ ವಿಶಾಲವಾದ ಪ್ರಪಂಚದಲ್ಲಿ ನಿಮಗೆಲ್ಲರು ಶಿಕ್ಷಕರೆ ಎದುರಾಗುತ್ತಾರೆ ಎಂಬುದನ್ನು ಮರೆಯಬಾರದು.‌ ಇಂದಿನ ನಿಮ್ಮ ಈ ಸಾಧನೆಗೆ ಹಲವು ರಾತ್ರಿಗಳು ನಿದ್ದೆಗೆಟ್ಟ ಹೆತ್ತವರ ನಿಸ್ವಾರ್ಥ ಪರಿಶ್ರಮ ಮತ್ತು ಶಿಲ್ಪಿಯಂತೆ ನಿಮ್ಮ ಜೀವನ ರೂಪಿಸಿದ ಗುರುಗಳನ್ನು ನೆನೆಯುವ ದಿನವಾಗಿದೆ ಎಂದರು.

ಮೂವರು ಸಾಧಕರಿಗೆ ಗೌಡಾ ಪ್ರದಾನ: ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ನ್ಯಾಯವಾದಿ ಅರ್ಚನಾ ಪ್ರದೀಪ ತಿವಾರಿ, ಹೋರಾಟಗಾರ ಲಕ್ಷ್ಮಣ ದಸ್ತಿ ಹಾಗೂ ಕೃಷಿ ತಜ್ಞ ಮತ್ತು ಶಿಕ್ಷಣ ಉದ್ಯಮಿ ಲಿಂಗರಾಜ ಬಸವರಾಜಪ್ಪ ಅಪ್ಪ ಅವರಿಗೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಮ‌ ಕುಲಾಧಿಪತಿಗಳಾಗಿರುವ ಡಾ.ಎಂ.ಸಿ.ಸುಧಾಕರ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

74 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ: ಘಟಿಕೋತ್ಸವದಲ್ಲಿ ವಿವಿಧ ವಿಭಾಗದಲ್ಕಿ ಹೆಚ್ಚಿನ ಅಂಕ ಗಳಿಸಿದ 74 ಅಭ್ಯರ್ಥಿಗಳಿಗೆ 168 ಚಿನ್ನದ ಪದಕ ಪ್ರದಾನ ಮಾಡಲಾಯಿತು. 9 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕನ್ನಡ ಅಧ್ಯಯನ‌ ಸಂಸ್ಥೆಯ ವಿದ್ಯಾರ್ಥಿನಿ ಆನಂದಮ್ಮ ಅವರು 13 ಚಿನ್ನದ ಪದಕ ಪಡೆದು ಘಟಿಕೋತ್ಸವದಲ್ಲಿ ಹೆಚ್ಚಿನ ಪದಕ ಪಡೆದ ವಿದ್ಯಾರ್ಥಿಯಾಗಿ ಹೊರಹೊಮ್ಮಿದರು.

113 ಅಭ್ಯರ್ಥಿಗಳಿಗೆ ಪಿ.ಎಚ್.ಡಿ ಪದವಿ: ಕಲಾ ನಿಕಾಯದ 38, ಸಮಾಜ ವಿಜ್ಞಾನ ನಿಕಾಯದ 29, ವಿಜ್ಞಾನ ಮತ್ತು ತಮತ್ರಜ್ಞಾನ ನಿಕಾಯದ 26, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ 11 ಹಾಗೂ ಶಿಕ್ಷಣ ನಿಕಾಯದ 9 ಜನ ಸೇರಿದಂತೆ 113 ಅಭ್ಯರ್ಥಿಗಳಿಗೆ ಗಣ್ಯರು ಪಿ.ಎಚ್.ಡಿ.ಪದವಿ ಪ್ರದಾನ ಮಾಡಿದರು. ಇದರಲ್ಲಿ 67 ಪುರುಷ ಮತ್ತು 46 ಮಹಿಳಾ‌ ಸಂಶೋಧನಾ ಅಭ್ಯರ್ಥಿಗಳಿದ್ದಾರೆ. ಘಟಿಕೋತ್ಸವ ಅಂಗವಾಗಿ ಒಟ್ಟಾರೆ 29,307 ಅಭ್ಯರ್ಥಿಗಳು ಪದವಿ ಹಾಗೂ ಸ್ನಾತಕ್ಕೋತ್ತರ ಪದವಿ ಪಡೆದರು.

ಗುಲಬರ್ಗಾ ವಿ.ವಿ.ಕುಲಪತಿ ಪ್ರೊ.ದಯಾನಂದ ಅಗಸರ್ ಅವರು ಸರ್ವರನ್ನು ಸ್ವಾಗತಿಸಿ ವಿಶ್ವವಿದ್ಯಾಲಯವು ಕಳೆದ ಒಂದು ವರ್ಷದಲ್ಲಿ ಸಾಧಿಸಿದ ಪ್ರಗತಿಯನ್ನು ಮಂಡಿಸುತ್ತಾ, ವಿ.ವಿ. ವ್ಯಾಪ್ತಿಯಲ್ಲಿ 175 ಕಾಲೇಜುಗಳಿದ್ದು, 45 ಸಾವಿರ ಯು.ಜಿ, 2500 ಪಿ.ಜಿ. ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿ.ವಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಶಿಕ್ಷಣ ನೀಡಲಾಗುತ್ತಿದೆ. ವಿ.ವಿ. ಸರ್ವಾಂಗೀಣ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ₹100 ಕೋಟಿ ವಿಶೇಷ ಅನುದಾನ ಮಂಜೂರು ಮಾಡಬೇಕೆಂದು ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿಕೊಂಡರು. ತೈತ್ತರೀಯ ಉಪನಿಷತ್ತಿನ ಅನುಶಾಸನದ ಸಾಲುಗಳನ್ನು ಹೇಳುತ್ತ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಹಾಜರುಪಡಿಸಿದರು.

ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಾಜನಾಳ್ಕರ ಲಕ್ಷ್ಮಣ, ವಿತ್ತಾಧಿಕಾರಿ ಗಾಯತ್ರಿ ಸೇರಿದಂತೆ ವಿದ್ಯಾ ವಿಷಯಕ್, ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯದ ಡೀನ್‌ಗಳು, ಬೋಧಕ-ಬೋಧಕೇತರ ವೃಂದ ಹಾಜರಾಗಿದ್ದರು.

ಮೂವರಿಗೆ ಗೌಡಾ ಪದವಿ ಪ್ರಧಾನ: ಗುವಿವಿ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ನ್ಯಾಯವಾದಿ ಅರ್ಚನಾ ಪ್ರದೀಪ ತಿವಾರಿ, ಹೋರಾಟಗಾರ ಲಕ್ಷ್ಮಣ ದಸ್ತಿ ಹಾಗೂ ಕೃಷಿ ತಜ್ಞ ಮತ್ತು ಶಿಕ್ಷಣ ಉದ್ಯಮಿ ಲಿಂಗರಾಜ ಬಸವರಾಜಪ್ಪ ಅಪ್ಪ ಅವರಿಗೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಮ‌ ಕುಲಾಧಿಪತಿಗಳಾಗಿರುವ ಡಾ.ಎಂ.ಸಿ.ಸುಧಾಕರ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.