ಸಾರಾಂಶ
ಹರಪನಹಳ್ಳಿ: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು (ಟಿಎಪಿಸಿಎಂಎಸ್) 2023-24ನೇ ಸಾಲಿನಲ್ಲಿ ₹11.64 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಎಚ್.ನೇತ್ರಾವತಿ ಪರಶುರಾಮ ತಿಳಿಸಿದರು.
ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಸಂಘದ 94ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತಮಾಡಿದರು.ಸಂಘವು ಕಳೆದ ಸಾಲಿನಲ್ಲಿ ರಸಗೊಬ್ಬರ ಮತ್ತು ಪೆಟ್ರೋಲ್ ಬಂಕ್ ಉತ್ಪನ್ನಗಳನ್ನು ಸೇರಿ ಒಟ್ಟು ₹12.38 ಕೋಟಿ ವ್ಯವಹಾರ ಮಾಡಿ ₹11.64 ಲಕ್ಷ .ಲಾಭ ಗಳಿಸಿದೆ. ಲಾಭ ಮತ್ತು ವ್ಯವಹಾರ ಹಾಗೂ ಬಾಡಿಗೆಗಳ ಆದಾಯ ಸೇರಿ ಬಿಡಿಪಿ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಘವು ₹3.8 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದಿಂದ ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸಂಘದ ಎಲ್ಲ ಸದಸ್ಯರು ರಸಗೊಬ್ಬರ ಖರೀದಿ ಮಾಡಬೇಕೆಂದು ಮನವಿ ಮಾಡಿದರು.ಸಂಘದಲ್ಲಿ ರೈತರಿಗೆ ಮತ್ತು ಸದಸ್ಯರಿಗೆ ಅನುಕೂಲಕ್ಕಾಗಿ ಬಂಗಾರದ ಆಭರಣದ ಮೇಲೆ ಸಾಲ ನೀಡಲು ಕ್ರಮ ವಹಿಸಿದ್ದು, ಜೊತೆಗೆ ಸಿಎನ್ಜಿ ಗ್ಯಾಸ್ ಬಂಕ್ನ್ನು ತೆರೆಯಲು ಸಂಘ ಪ್ರಯತ್ನಿಸಿದೆ ಎಂದು ಅವರು ತಿಳಿಸಿದರು.
ಸಂಘದ ನಿರ್ದೇಶಕ ಎಲ್.ಬಿ.ಹಾಲೇಶ 2023-24೪ನೇ ಸಾಲಿನ ಸಂಘದ ವಾರ್ಷಿಕ ವರದಿಯನ್ನು ಸಭೆಯಲ್ಲಿ ಓದಿ ಮಂಡಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ಕುಲಮಿ ಅಬ್ದುಲ್ಲಾ, ನಿರ್ದೇಶಕರಾದ ಬಿ.ಕೆ.ಪ್ರಕಾಶ, ಎಲ್.ಬಿ.ಹಾಲೇಶನಾಯ್ಕ್, ಪಿ.ಪ್ರೇಮಕುಮಾರ, ತಳವಾರ ಮಂಜಪ್ಪ, ಗಿಡ್ಡಳ್ಳಿ ನಾಗರಾಜ, ಬಿ.ರೇವಣಸಿದ್ದಪ್ಪ, ಎಂ.ವಿ.ಕೃಷ್ಣಕಾಂತ, ಕೆ.ವಿರುಪಾಕ್ಷಪ್ಪ, ಪ್ರಕಾಶಗೌಡ, ನಾಮನಿರ್ದೇಶಕ ಚಿಕ್ಕೇರಿ ಬಸಪ್ಪ, ಸಂಘದ ಕಾರ್ಯದರ್ಶಿ ಎಚ್.ತಿರುಪತಿ ಸೇರಿದಂತೆ ಸಂಘದ ಸರ್ವ ಸದಸ್ಯರು ಸಿಬ್ಬಂದಿ ಇದ್ದರು.
ಹರಪನಹಳ್ಳಿ ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ 94ನೇ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಹಿರಿಯ ಸದಸ್ಯರು ಉದ್ಘಾಟಿಸಿದರು.