ಪುಟ್ಟರಾಜ ಗವಾಯಿಗಳ 111ನೇ ಜಯಂತ್ಯುತ್ಸವ; ಸಾವಿರಾರು ಮಂದಿ ಭಾಗಿ

| Published : Mar 05 2025, 12:30 AM IST

ಸಾರಾಂಶ

ಪಂ. ಪುಟ್ಟರಾಜ ಗವಾಯಿಗಳ 111ನೇ ಜಯಂತ್ಯುತ್ಸವವನ್ನು ಭಕ್ತರು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಗದಗ: ಪಂ. ಪುಟ್ಟರಾಜ ಗವಾಯಿಗಳ 111ನೇ ಜಯಂತ್ಯುತ್ಸವವನ್ನು ಭಕ್ತರು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಭಕ್ತರು ಪುಟ್ಟರಾಜರ ಸ್ಮರಣೆ ಮಾಡಿದರು. ಜಯಂತ್ಯುತ್ಸವದ ಅಂಗವಾಗಿ ಅವಳಿ ನಗರದ ಪ್ರಮುಖ ಸ್ಥಳಗಳು ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಗಳಲ್ಲಿಯೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವೀರೇಶ್ವರ ಪುಣ್ಯಾಶ್ರಮದಲ್ಲಿರುವ ಹಾನಗಲ್ ಕುಮಾರಸ್ವಾಮಿ ಗದ್ದುಗೆ, ಪಂ.ಪಂಚಾಕ್ಷರ ಗವಾಯಿಗಳು ಹಾಗೂ ಪಂ.ಪುಟ್ಟರಾಜ ಗವಾಯಿಗಳ ಕೃರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದರು. ವೀರೇಶ್ವರ ಪುಣ್ಯಾಶ್ರಮದಲ್ಲಿ ಇಡೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಲಿಂ.ಪಂ. ಪುಟ್ಟರಾಜ ಕವಿ ಗವಾಯಿಗಳ 111ನೇ ಜನ್ಮದಿನದ ಅಂಗವಾಗಿ 111 ಪೂರ್ಣ ಕುಂಭದೊಂದಿಗೆ ಪಂ.ಪುಟ್ಟರಾಜಕವಿ ಗವಾಯಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವೀರೇಶ್ವರ ಪುಣ್ಯಾಶ್ರಮದಿಂದ ಆರಂಭಗೊಂಡ ಬೃಹತ್ ಕುಂಭ ಮೆರವಣಿಗೆ ಭೂಮರೆಡ್ಡಿ ಸರ್ಕಲ್, ಕೆ.ಎಚ್. ಪಾಟೀಲ್ ಸರ್ಕಲ್, ಹತ್ತಿಕಾಳ ಕೂಟ, ಟಾಂಗಾಕೂಟ್, ಗಾಂಧಿ ಸರ್ಕಲ್, ಕೆ.ಸಿ. ರಾಣಿ ರಸ್ತೆ ಮಾರ್ಗವಾಗಿ ಮತ್ತೆ ಪುಣ್ಯಾಶ್ರಮ ತಲುಪಿತು.

ನಗರದ ಭೂಮರಡ್ಡಿ ಸರ್ಕಲ್‌ನಲ್ಲಿರುವ ಪುಟ್ಟರಾಜರ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಇನ್ನೂ ನಗರದ ವಿವಿಧ ಬಡಾವಣೆಗಳು, ಓಣಿಗಳಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಪುಟ್ಟರಾಜರನ್ನು ಸ್ಮರಿಸುವುದರ ಜತೆಗೆ ಎಲ್ಲೆಡೆಯೂ ಅನ್ನಪ್ರಸಾದ ಹಮ್ಮಿಕೊಳ್ಳಲಾಗಿತ್ತು. ದಾರಿಹೋಕರಿಗೆ ಪ್ರಸಾದ ವ್ಯವಸ್ಥೆಯೊಂದಿಗೆ ತಂಪು ಪಾನೀಯ ವಿತರಿಸಲಾಯಿತು.

ಸಾಮೂಹಿಕ ವಿವಾಹ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂಗೈಕ್ಯ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 111ನೇ ಜಯಂತ್ಯುತ್ಸವದ ಅಂಗವಾಗಿ 37 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ವೀರೇಶ್ವರ ಪುಣ್ಯಾಶ್ರಮದ ಪೀಠಾಪತಿ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ಭಕ್ತರು ಹಾಗೂ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದವರಿಗೆ ಎಪಿಎಂಸಿ ಆವರಣದಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.