೧೨.೫ ಕೋಟಿ ವೆಚ್ಚದ ಕೋಲ್ಡ್ ಸ್ಟೋರೇಜ್ ನಿರ್ಮಾಣ

| Published : Apr 22 2025, 01:45 AM IST

ಸಾರಾಂಶ

ರೈತರ ಅನುಕೂಲಕ್ಕಾಗಿ ಶಿರಾ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ೧೨.೫ ಕೋಟಿ ರುಪಾಯಿ ವೆಚ್ಚದ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ರೈತರು ಬೆಳೆದಂತಹ ತರಕಾರಿ ಮತ್ತು ಇತರೆ ಬೆಳೆಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಶೇಖರಣೆ ಮಾಡಿ ಸೂಕ್ತ ಬೆಲೆ ಸಿಕ್ಕ ಸಂದರ್ಭದಲ್ಲಿ ಮಾರಾಟ ಮಾಡಲು ಅನುಕೂಲವಾಗಲಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ರೈತರ ಅನುಕೂಲಕ್ಕಾಗಿ ಶಿರಾ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ೧೨.೫ ಕೋಟಿ ರುಪಾಯಿ ವೆಚ್ಚದ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ರೈತರು ಬೆಳೆದಂತಹ ತರಕಾರಿ ಮತ್ತು ಇತರೆ ಬೆಳೆಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಶೇಖರಣೆ ಮಾಡಿ ಸೂಕ್ತ ಬೆಲೆ ಸಿಕ್ಕ ಸಂದರ್ಭದಲ್ಲಿ ಮಾರಾಟ ಮಾಡಲು ಅನುಕೂಲವಾಗಲಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ತಾಲೂಕಿನ ಹುಳಿಗೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಹೈನುಗಾರಿಕೆ ಬಡ ಕುಟುಂಬಗಳ ಪಾಲಿಗೆ ವರದಾನವಾಗಿದ್ದು ಹುಳಿಗೆರೆ ನೂತನ ಹಾಲು ಉತ್ಪಾದಕರ ಕಟ್ಟಡ ನಿರ್ಮಾಣ ಮಾಡಲು ೧೦ ಲಕ್ಷ ರುಪಾಯಿ ಅನುದಾನ ನೀಡಲಿದ್ದೇನೆ. ಬಡ ಕುಟುಂಬಗಳಿಗೆ ಆರ್ಥಿಕ ಸದೃಢತೆ ನೀಡುವ ಹೈನುಗಾರಿಕೆಯನ್ನು ಶಿರಾದಲ್ಲಿ ಪ್ರೋತ್ಸಾಹಿಸಿ ನಂದಿನಿ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಶಿರಾ ನಗರದ ವ್ಯಾಪ್ತಿಯಲ್ಲಿ ೪ ಎಕರೆ ಭೂಮಿ ನೀಡುವ ಗುರಿ ಹೊಂದಲಾಗಿದೆ ಎಂದರು. ಶಿರಾ ತಾಲೂಕು ಸೇರಿದಂತೆ ಸುತ್ತಮುತ್ತಲ ತಾಲೂಕುಗಳಲ್ಲಿ ಹುಣಸೆ ಬೆಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶಿರಾದಲ್ಲಿ ಹುಣಸೆ ಪಾರ್ಕ್ ಮಾಡುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಎಪಿಎಂಸಿ ಆವರಣದ ಪಕ್ಕದಲ್ಲಿಯೇ ೨೦ ಎಕರೆ ಭೂಮಿಯನ್ನು ಮೀಸಲಿಡಲಾಗಿದ್ದು, ಹುಣಸೆ ಸಂಸ್ಕರಣ ಘಟಕ ಶೀಘ್ರದಲ್ಲಿಯೇ ನಿರ್ಮಾಣವಾಗಲಿದೆ ಎಂದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಮಾತನಾಡಿ, ಹುಳಿಗೆರೆ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ಹಾಲು ಒಕ್ಕೂಟ ೧೦ ಲಕ್ಷ ರು. ನೀಡಲಿದೆ, ಅನುದಾನ ಸದ್ಭಳಕೆ ಮಾಡಿಕೊಂಡು ಹಾಲಿನ ಉತ್ಪಾದನೆಯನ್ನು ಹೆಚ್ಚಳ ಮಾಡಿಕೊಂಡು ಸಂಘ ಆರ್ಥಿಕ ಪ್ರಗತಿ ಸಾಧಿಸಬೇಕು. ಡೇರಿಗೆ ಗುಣಮಟ್ಟದ ಹಾಲನ್ನು ಹಾಕುವ ಮೂಲಕ ಯಶಸ್ವಿ ಹಾಲು ಉತ್ಪಾದಕರಾಗಬೇಕು. ನಂದಿನಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತುಮಕೂರು ಹಾಲು ಒಕ್ಕೂಟಕ್ಕೆ ಶಿರಾ ಭಾಗದಲ್ಲಿ ಎರಡು ಎಕರೆ ಭೂಮಿ ಕೇಳಿದ್ದೇವೆ ಇದಕ್ಕೆ ಪೂರಕವಾಗಿ ಶಾಸಕರು ನಾಲ್ಕು ಎಕರೆ ಭೂಮಿ ಕೊಡುತ್ತೇನೆ ಎಂದಿರುವುದು ಹೈನುಗಾರಿಕೆ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಿದೆ. ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟ ಉಪ ವ್ಯವಸ್ಥಾಪಕ ಗಿರೀಶ್, ರಮೇಶ್, ವಕೀಲ ಕೆ.ವಿ. ರಾಜು ಎಚ್.ಈ. ರಂಗನಾಥ್, ಈರಣ್ಣ, ಎಚ್. ಜೆ. ಕುಮಾರ್, ರಾಜಣ್ಣ, ಹೆಚ್.ಜಿ. ಈರಣ್ಣ, ಎಚ್. ಎಸ್. ಲಕ್ಷ್ಮೀಕಾಂತ್, ಗೀತಮ್ಮ, ಮಂಜುನಾಥ್, ಶಿವಮ್ಮ, ರಾಮಚಂದ್ರಪ್ಪ, ಬಿ.ಹೆಚ್. ಲಕ್ಷ್ಮೀದೇವಿ, ಕಾರ್ಯದರ್ಶಿ ರಾಮಕೃಷ್ಣಪ್ಪ, ಮುಖಂಡರಾದ ಹೆಚ್. ಟಿ. ರಾಜು, ಸೂರ್ಯ ಗೌಡ, ರವಿ ರಾಜು, ಉಪನ್ಯಾಸಕ ಗುಡ್ಡಣ್ಣ, ದಾಸರಹಳ್ಳಿ ಅಶೋಕ್ ,ಹನುಮಂತರಾಯ, ಪೂಜಾರ್ ವೆಂಕಟಪ್ಪ, ಕುಮಾರ್, ಎಚ್. ಎಂ. ನಾರಾಯಣಪ್ಪ, ಕೆಮಿಸ್ಟರ್ ಪಿ.ಎಂ.ಬಾಬಾ ಪಕ್ರುದ್ದೀನ್, ಇನಾಮ್ ಗೊಲ್ಲಹಳ್ಳಿ ಶಿವಣ್ಣ, ಶಿಕ್ಷಕ ರಂಗನಾಥ್ ಸೇರಿದಂತೆ ಹಲವರು ಹಾಜರಿದ್ದರು.