ಸಾರಾಂಶ
ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊಡಮಾಡುವ ''''ಮುಖ್ಯಮಂತ್ರಿ ಪದಕ'''' ಗೌರವಕ್ಕೆ ದಾವಣಗೆರೆ ಜಿಲ್ಲೆಯಿಂದ 12 ಪೊಲೀಸರು ಆಯ್ಕೆಯಾಗಿದ್ದಾರೆ.
2024-25ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ರಾಜ್ಯದ 197 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ. ಜಿಲ್ಲೆಯಿಂದ 8 ಹಿರಿಯ ಪೋಲಿಸ್ ಅಧಿಕಾರಿಗಳು ಹಾಗೂ 4 ಹಿರಿಯ ಪೊಲೀಸ್ ಸಿಬ್ಬಂದಿಗೆ ಸಿಎಂ ಪದಕ ಗೌರವ ಲಭಿಸಿದೆ. ಏಪ್ರಿಲ್ 2ರಂದು ನಡೆಯುವ ಕಾರ್ಯಕ್ರಮದಲ್ಲಿ ಪದಕ ಪ್ರದಾನ ಮಾಡಲಾಗುವುದು.
ನ್ಯಾಮತಿಯ ಎಸ್ಬಿಐ ದರೋಡೆಕೋರರ ಪ್ರಕರಣ ಆರು ತಿಂಗಳಲ್ಲಿ ಪ್ರಕರಣ ಭೇದಿಸಿ, ಸುಮಾರು ₹15.30 ಕೋಟಿ ಮೌಲ್ಯದ 17.7 ಕೆಜಿ ಚಿನ್ನಾಭರಣ ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ತಂಡದ 10 ಪೊಲೀಸರು ಮುಖ್ಯಮಂತ್ರಿ ಪದಕ ಗೌರವಕ್ಕೆ ಭಾಜನರಾಗಿದ್ದಾ. ಅಲ್ಲದೇ, ಉತ್ತಮ ಕಾರ್ಯನಿರ್ವಹಿಸಿದ್ದ ಉಳಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸಹ ಸಿಎಂ ಪದಕಕ್ಕೆ ಅರ್ಹರಾಗಿದ್ದಾರೆ.
ಸಿಎಂ ಪದಕ ಪಡೆದ ಜಿಲ್ಲೆಯ ಪೊಲೀಸರ ವಿವರ:
ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್, ನ್ಯಾಮತಿ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಎನ್.ಎಸ್.ರವಿ, ಕೆಟಿಜೆ ನಗರ ಪೊಲೀಸ್ ಠಾಣೆ ಪಿಎಸ್ಐ ಸಾಗರ್ ಅತ್ತರವಾಲ್, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಮಂಜಪ್ಪ ಕುಪ್ಪೇಲೂರು, ಹೊನ್ನಾಳಿ ಪೊಲೀಸ್ ಠಾಣೆ ಪಿಎಸ್ಐ ಸಂಜೀವ್ ಕುಮಾರ್, ಪೂರ್ವ ವಲಯ ಕಚೇರಿಯ ಹೆಡ್ ಕಾನ್ಸ್ಟೇಬಲ್ ಎಂ.ಪಿ.ರಮೇಶ್, ನ್ಯಾಮತಿ ಪೊಲೀಸ್ ಠಾಣೆ ಶಿವರಾಜ್, ಡಿಸಿಆರ್ಬಿ ಘಟಕದ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ, ಕೆ.ಟಿ.ಆಂಜನೇಯ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಇ.ವೈ. ಕಿರಣ್ ಕುಮಾರ್, ಡಿಎಆರ್ ಡಿವೈಎಸ್ಪಿ ಪಿ.ಬಿ.ಪ್ರಕಾಶ್ ಮುಖ್ಯಮಂತ್ರಿ ಪದಕ ಗೌರವಕ್ಕೆ ಭಾಜನರಾಗಿದ್ದಾರೆ.