ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರುಕ್ಷೇತ್ರದ ನೀರಾವರಿ ಯೋಜನೆಗಳಿಗೆ ನಮ್ಮ ಕ್ಷೇತ್ರಕ್ಕೆ ಅನುಕೂಲವಾಗುವ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ₹೧೨೦ ಕೋಟಿ ಅನುದಾನ ಲಭಿಸಿದ್ದು ಇದರಿಂದ ತಾಲೂಕಿನ ಎಲ್ಲ ಕರೆಗಳಿಗೆ ನೀರು ತುಂಬಿಸುವುದು ಸುಲಭವಾಗಲಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.ಸೋಮವಾರ ತಾಲೂಕಿನ ಮದ್ದೂರು, ಯರಿಯೂರು, ಕೆಸ್ತೂರು ಗ್ರಾಮಗಳಲ್ಲಿ ಉಪ್ಪಾರ ಸಮುದಾಯ ಭವನ, ಹಾಗೂ ದುಗ್ಗಹಟ್ಟಿ ಗ್ರಾಪಂನ ಕಟ್ಟಡ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರವು ನಮ್ಮ ಜಿಲ್ಲೆಗೆ ನೂರಾರು ಕೋಟಿ ಅನುದಾನವನ್ನು ನೀಡಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ನಡೆದ ಮೇಲೆ ಇಲ್ಲಿಗೆ ಮತ್ತಷ್ಟು ಅನುದಾನ ನೀಡಲಾಗಿದೆ. ಮುಖ್ಯ ಕಾಲುವೆ, ಉಪ ಕಾಲುವೆಗಳ ಅಭಿವೃದ್ಧಿಗೆ ₹೭೦ ಕೋಟಿ ಅನುದಾನ ಸೇರಿದಂತೆ ಹಿರೀಕೆರೆ ಅಭಿವೃದ್ಧಿಗೆ ₹೧೪.೫ ಕೋಟಿ ರು. ಮುಡಿಗುಂಡ ಸೇತುವೆ ಅಭಿವೃದ್ಧಿಗೆ ₹೧೫ ಕೋಟಿ ಅನುದಾನ ನೀಡಿದೆ.
ಯಳಂದೂರು ಪಟ್ಟಣದಲ್ಲಿ ೧೦೦ ಹಾಸಿಗೆಗಳ ಆಸ್ಪತ್ರೆ ಕಟ್ಟಡಕ್ಕೆ ಈಗಾಗಲೇ ಚಾಲನೆ ನೀಡಿದ್ದು ಕಾಮಗಾರಿ ನಡೆಯುತ್ತಿದೆ. ಚಾಮರಾಜನಗರದ ಸಿಮ್ಸ್ ಆಸ್ಪತ್ರೆ ಮಾದರಿಯಲ್ಲಿ ಕೊಳ್ಳೇಗಾಲದಲ್ಲಿ ಮತ್ತೊಂದು ಆಸ್ಪತ್ರೆ ನಿರ್ಮಾಣವಾಗಲಿದ್ದು ಈಗಾಗಲೇ ಇದಕ್ಕೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ₹೫ ಕೋಟಿ ಅನುದಾನ ಬಿಡುಗಡೆಯಾಗಿದ್ದು ಇದರಲ್ಲಿ ₹೨.೫ ಕೋಟಿಯನ್ನು ಸಮುದಾಯ ಭವನಗಳ ನಿರ್ಮಾಣ, ಮುಂದುವರೆದ ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಜನರು ವಾಸಿಸುವ ಬಡಾವಣೆಗಳ ರಸ್ತೆ ಚರಂಡಿ ಕಾಮಗಾರಿಗೆ ₹೨.೫ ಕೋಟಿ ಮೀಸಲಿಡಲಾಗಿದೆ. ಇದರೊಂದಿಗೆ ನಮ್ಮ ಕ್ಷೇತ್ರಕ್ಕೆ ಗೂಳೀಪುರ, ಕುದೇರು ಹಾಗೂ ಗೌಡಹಳ್ಳಿ ಗ್ರಾಮಗಳಲ್ಲಿ ಪಶು ವೈದ್ಯಕೀಯ ಆಸ್ಪತ್ರೆಗಳು ಮಂಜೂರಾಗಿವೆ.ರೀಲರ್ಗಳಿಗೆ ₹೧೫ ಕೋಟಿ ಸಹಾಯಧನ ನೀಡಲು ಅನುದಾನ ಇಡಲಾಗಿದೆ. ಸಂತೆಮರಹಳ್ಳಿ ರೇಷ್ಮೆ ಮಾರುಕಟ್ಟೆ ಅಭಿವೃದ್ಧಿಗೆ ₹೫ ಕೋಟಿ ಅನುದಾನ ಬಿಡುಗಡೆಯಾಗಿದ್ದು ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೇರಿದಂತೆ ಎಲ್ಲ ಇಲಾಖೆಗಳ ಸಚಿವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ನಿರ್ಮಿತಿ ಕೇಂದ್ರದ ಜೆಇ ನಂದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಯರಿಯೂರು ಗ್ರಾಪಂ ಅಧ್ಯಕ್ಷೆ ಲಾವಣ್ಯಕುಮಾರ್ ಈರಣ್ಣ, ಜಯಣ್ಣ, ಕೆಸ್ತೂರು ಸಿದ್ದರಾಜು, ಮಧು, ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು ಗ್ರಾಪಂ ಸದಸ್ಯರಾದ ಕಪ್ಪಣ್ಣ, ಮಹದೇವಶೆಟ್ಟಿ, ನಾರಾಯಣ, ಭೀಮಪ್ಪ, ನಂಜುಂಡಸ್ವಾಮಿ, ಪ್ರವೀಣ್, ರಮೇಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಯರಿಯೂರು ಕುಮಾರ, ನಾಗರಾಜು, ಸಿದ್ದರಾಜು, ನಂಜುಂಡಶೆಟ್ಟಿ ಇತರರು ಇದ್ದರು.