ಸಾರಾಂಶ
ಕೊಟ್ಟೂರು: ನಾವಿಂದು ಅಂತರ್ಜಲ ಸಂರಕ್ಷಣೆಗೆ ಪ್ರಯತ್ನಿಸುತ್ತಿದ್ದೇವೆ. ಆದರೆ, 12ನೇ ಶತಮಾನದಲ್ಲೇ ಸಿದ್ದರಾಮೇಶ್ವರರು ಪಶು, ಪ್ರಾಣಿಗಳಿಗೆ, ಜನರಿಗೆ ಕುಡಿಯುವ ನೀರು ದೊರಕಿಸಬೇಕು ಎನ್ನುವ ಕನಸು ಕಂಡು ಕೆರೆ-ಕುಂಟೆಗಳನ್ನು ನಿರ್ಮಿಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ತಹಸೀಲ್ದಾರ್ ಅಮರೇಶ ಜಿ.ಕೆ. ಹೇಳಿದರು.
ಕೊಟ್ಟೂರು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸಿದ್ದರಾಮೇಶ್ಬರ ಜಯಂತಿಯಲ್ಲಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರುಬಸವಣ್ಣನವರ ಮುಂದಾಳತ್ವದಲ್ಲಿ ಕಲ್ಯಾಣದಲ್ಲಿ ನಡೆದ ಸಾಮಾಜಿಕ ಕ್ರಾಂತಿಯಲ್ಲಿ ಭಾಗವಹಿಸಿದ್ದ ಸಿದ್ದರಾಮೇಶ್ವರರು ಅನೇಕ ವಚನಗಳನ್ನು ರಚಿಸಿ ಸಮಾಜದ ಡೊಂಕುಗಳನ್ನು ತಿದ್ದಲು ಶ್ರಮಿಸಿದರು. ಅನುಭವ ಮಂಟಪದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಸಿದ್ದರಾಮೇಶ್ವರರು ಮುನುಕುಲದ ಒಳಿತಿಗೆ ನೀಡಿದ ಸಂದೇಶಗಳನ್ನು ಅರಿತು ನಡೆಯಬೇಕಿದೆ ಎಂದರು
ಕಾಂಗ್ರೆಸ್ ಮುಖಂಡ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ವಿ.ಟಿ.ಎಸ್. ಮಾತನಾಡಿ, ಶ್ರಮಿಕರಾದ ಭೋವಿ ಸಮುದಾಯದವರೆಲ್ಲರೂ ಸಂಘಟಿತರಾಗಬೇಕು. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುನ್ನೆಲೆಗೆ ಬರಬೇಕು. ಸಿದ್ದರಾಮೇಶ್ವರರು ಅಂದು ನೀಡಿದ ಸಂದೇಶ ಹಾಗೂ ಮಾರ್ಗದರ್ಶನದಂತೆ ನಾವೆಲ್ಲ ನಡೆಯಬೇಕು ಎಂದರು. ಪಿ.ಕೆ. ಇಂದ್ರಜಿತ್, ವಿಜಯನಗರ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರತಿಭಾ ಎಂ. ಗ್ರೇಡ್-2 ತಹಸೀಲ್ದಾರ್, ಉಪತಹಸೀಲ್ದಾರ್ ಅನ್ನದಾನೇಶ ಬಿ. ಪತ್ತಾರ್, ತಾಲೂಕು ಭೋವಿ ಸಮಾಜದ ಅಧ್ಯಕ್ಷ ಹುಲುಗಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಡಿ. ನಾಗೇಶ್, ಹ್ಯಾಳ್ಯಾ ಗ್ರಾಪಂ ಮಾಜಿ ಅಧ್ಯಕ್ಷ ಪಿ.ಎಚ್. ರಾಘವೇಂದ್ರ, ಮಾಜಿ ಉಪಾಧ್ಯಕ್ಷ ಪಿ.ಎಚ್. ಅಂಜಿನಪ್ಪ, ಪಿ.ಕೆ. ರವಿಕುಮಾರ್, ಕಾಳಾಪುರ ಗ್ರಾಪಂ ಸದಸ್ಯ ಮಂಜುನಾಥ, ಮುಖಂಡರಾದ ಕೊಟ್ರೇಶ್ ಎ, ಪರಮೇಶಿ ಪಿ.ಎಚ್., ಅಂಜಿನಪ್ಪ ಎ.ಡಿ., ಅಂಜಿನಪ್ಪ ಚಿನ್ನೇನಹಳ್ಳಿ, ಸೊಲ್ಲಪ್ಪ ಮುಂತಾದವರು ಇದ್ದರು. ಸಿ.ಮ. ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.