ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಗದಗ- ಬೆಟಗೇರಿ ಹೃದಯ ಭಾಗದಲ್ಲಿರುವ ನಗರಸಭೆ ಒಡೆತನದ ನೂರಾರು ಕೋಟಿ ಬೆಲೆ ಬಾಳುವ 43 ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಭಾರೀ ಹಗರಣವೊಂದು ನಡೆದಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಸ್ಥರು, ಪ್ರತಿಷ್ಠಿತರು ಈ ಹಗರಣದಲ್ಲಿ ಭಾಗಿಯಾಗಿರುವ ಮಾತುಗಳು ಕೇಳಿ ಬರುತ್ತಿದೆ.ಕ್ಲಾಥ್ ಮಾರ್ಕೆಟ್ನಲ್ಲಿರು 40, ಗ್ರೇನ್ ಮತ್ತು ಗ್ರೋಸರಿ ಮಾರುಕಟ್ಟೆಯಲ್ಲಿರುವ 103 ಅಂಗಡಿಗಳು ಪ್ರತಿ ಚದರಡಿಗೆ ಸಾವಿರಾರು ರು. ಬೆಲೆ ಬಾಳುತ್ತವೆ. ಈ ಎಲ್ಲ ಅಂಗಡಿಗಳನ್ನು ಹಲವಾರು ದಶಕಗಳಿಂದ ಒಂದೇ ಸಮುದಾಯದವರಿಗೆ ವ್ಯಾಪಾರಕ್ಕಾಗಿ ನೀಡಲಾಗಿದೆ. ಅಂಗಡಿಗಳ ಹಂಚಿಕೆ ಮಾಡುವ ಸಂದರ್ಭದಲ್ಲಿ ಇದ್ದ ಬಾಡಿಗೆಯೇ ಇಂದಿಗೂ ಮುಂದುವರಿದಿದೆ.
ಇದೀಗ ಬಾಡಿಗೆ ಮೊತ್ತ ಪ್ರಸಕ್ತ ಮಾರುಕಟ್ಟೆ ದರಕ್ಕೆ ಏರಿಸಬೇಕು ಎನ್ನುವ ಕೂಗಿನ ಮಧ್ಯೆಯೇ ಅಂಗಡಿಗಳ ಬಾಡಿಗೆದಾರರು ನಗರಸಭೆ ಗಮನಕ್ಕೂ ತರದೇ ಅಧಿಕಾರಿಗಳನ್ನೂ ಕೇಳದೆ ಮುಂದಿನ 5 ವರ್ಷದ ಮುಂಗಡ ಬಾಡಿಗೆ ಹಣವನ್ನು ನಗಸಭೆ ಖಾತೆಗೆ ಭರಿಸಿದ್ದು, ಇದರ ಹಿಂದೆ ದೊಡ್ಡವರ ಕೈವಾಡದ ಶಂಕೆ ವ್ಯಕ್ತವಾಗಿದೆ.ಎನಿದು ಹಗರಣ?: ಮಳಿಗೆ ಬಾಡಿಗೆದಾರರ ಅವಧಿ ಮುಗಿದು ದಶಕಗಳೇ ಕಳೆದಿವೆ. ನಗರಸಭೆ ಅಧಿಕಾರದಲ್ಲಿ ಇರುವವರಿಗೆ ಇದು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಪ್ರತಿ ಬಾರಿಯೂ ಬಾಡಿಗೆ ನೀಡಿದವರು ಅವಧಿ ವಿಸ್ತರಿಸಿಕೊಂಡು ಬರುತ್ತಲೇ ಇದ್ದಾರೆ. ಆದರೆ ಇದನ್ನು ಹಲವಾರು ಜನ ಗಟ್ಟಿಧ್ವನಿಯಿಂದ ಪ್ರಶ್ನೆ ಮಾಡಿದಾಗ ನಗರಸಭೆಯ ಆಡಳಿತ ಮಂಡಳಿ ತೆರವಿಗೆ ನೊಟೀಸ್ ನೀಡಿ ಹೊಸ ಬಾಡಿಗೆ ದರ ನಿಯುಕ್ತಿ ಮಾಡಿ ರೋಸ್ಟರ್ ಪ್ರಕಾರ ಹಂಚಿಕೆ ಮಾಡಲು ನಿರ್ಧರಿಸಿತ್ತು.
ಆದರೆ ಅಂಗಡಿಗಳಲ್ಲಿ ಬಾಡಿಗೆ ಇರುವವರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಯಥಾಸ್ಥಿತಿ (ಸ್ಟೇಟಸ್ಕೋ) ಕಾಯ್ದಕೊಳ್ಳುವಂತೆ ತಿಳಿಸಿದೆ. ಇದೀಗ ಮತ್ತೆ ಅದೇ ಅಂಗಡಿಗಳ ಮಾಲೀಕರೇ ಈಗ ಮುಂಗಡ ಬಾಡಿಗೆ ಭರ್ತಿ ಮಾಡಿದ್ದು ಸಂಶಯಕ್ಕೆ ಕಾರಣವಾಗಿದೆ.₹25 ಲಕ್ಷಕ್ಕೂ ಅಧಿಕ ಬಾಡಿಗೆ: ಕ್ಲಾಥ್ ಮಾರುಕಟ್ಟೆಯ 40 ಮಳಿಗೆಗಳಿಗೆ (ಪ್ರತಿ ಅಂಗಡಿಗೆ) ₹ 30420ನಂತೆ, 1155960 ಹಾಗೂ ಗ್ರೇನ್ ಗ್ರೋಸರಿ ಮಾರುಕಟ್ಟೆಯ 103 ಅಂಗಡಿಗೆ ₹13965ನಂತೆ 1437262 ಸೇರಿ ಒಟ್ಟು ₹ 2593222 ಲಕ್ಷ. 2024-25 ನೇ ಸಾಲಿನಿಂದ 2028-29 ನೇ ಸಾಲಿನ ವರೆಗೆ ಮುಂಗಡ ಬಾಡಿಗೆ ಹಣವಾಗಿ ಭರಣಾ ಮಾಡಿದ್ದಾರೆ. ಈ ಬಗ್ಗೆ ನಗರಸಭೆಯ ಕಂದಾಯ, ಲೆಕ್ಕಪತ್ರ ಹೀಗೆ ಯಾವುದೇ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ಇಲ್ಲ.
ಅಕ್ರಮದಲ್ಲಿ ಪ್ರಭಾವಿಗಳು: ಈ ಪ್ರಕರಣ ನ್ಯಾಯಾಲಯದಲ್ಲಿದೆ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಯಾವುದೇ ರೀತಿಯ ಠರಾವು ಆಗಿಲ್ಲ. ಆದರೂ ಕಡಿಮೆ ಬಾಡಿಗೆ ತುಂಬಿ ಅಂಗಡಿ ಉಳಿಸಿಕೊಳ್ಳುವ ಈ ಹುನ್ನಾರದಲ್ಲಿ ಹಿಂದೆ ಅಧಿಕಾರದಲ್ಲಿರುವ ಸಾಕಷ್ಟು ಕಾಣದ ಕೈಗಳು ಕೆಲಸ ಮಾಡಿವೆ. ನಗರಸಭೆಯ ಯಾವೊಬ್ಬ ಅಧಿಕಾರಿಗೂ ಮಾಹಿತಿ ಇಲ್ಲದಂತೆ ಸಿಟಿಜನ್ ಲಾಗಿನ್ ಮೂಲಕ ಚೆಲನ್ ಜನರೇಟ್ ಮಾಡಿಕೊಂಡು ನಗರಸಭೆಯ ಬ್ಯಾಂಕ್ ಖಾತೆಗೆ ಬಾಡಿಗೆ ಹಣ ಭರಣಾ ಮಾಡಿದ್ದಾರೆ. ಇದೊಂದು ಬೃಹತ್ ಹಗರಣವಾಗಿದ್ದು, ನಗರಸಭೆಗೆ ಬಾಡಿಗೆ ಹಣ ಕೇವಲ ₹25 ಲಕ್ಷ ಸಂದಾಯವಾಗಿದೆ ಅಷ್ಟೇ, ಆದರೆ ಹಳೆಯ ಬಾಡಿಗೆ ದರ ಹಾಗೂ ಅದೇ ಹಳೆಯ ಮಾಲೀಕರಿಗೆ ಅಂಗಡಿ ಮುಂದುವರಿಸಲು ಪ್ರಭಾವಿಗಳಿಗೆ ಕೋಟ್ಯಂತರ ಹಣ ಸಂದಾಯವಾಗಿದೆ ಎನ್ನುವ ಚರ್ಚೆ ಬಲು ಜೋರಾಗಿ ಕೇಳಿ ಬರುತ್ತಿದೆ.ಲೋಕಾಯುಕ್ತಕ್ಕೆ ದೂರು: ಇದೊಂದು ಬೃಹತ್ ಹಗರಣವಾಗಿದೆ. ನಾವು ಸುಮ್ಮನ್ನೇ ಕುಳಿತರೆ ಆಡಳಿತ ಪಕ್ಷದ ಎಲ್ಲ ಸದಸ್ಯರಿಗೂ ಕೆಟ್ಟ ಹೆಸರು ಬರುತ್ತದೆ ಮತ್ತು ಬಡವರಿಗೆ ಅನ್ಯಾಯವಾಗುತ್ತದೆ ಎನ್ನುವ ಕಾರಣಕ್ಕಾಗಿ ಆಡಳಿತಾರೂಢ ಬಿಜೆಪಿ ಸದಸ್ಯರೇ 3-7-2024 ರಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಗದಗ ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಉಪಲೋಕಾಯುಕ್ತರಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದು, ಈ ಅಕ್ರಮದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ಇದೆಲ್ಲ ಗೊತ್ತಿದ್ದರೂ ಅಂಗಡಿಗಳ ಮಾಲೀಕರು 5 ವರ್ಷದ ಮುಂಗಡ ಬಾಡಿಗೆಯನ್ನು ಯಾರ ಭರವಸೆಯ ಮೇಲೆ ಭರಣಾ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಬೇಕಿದೆ.
ಗದಗ ನಗರದ 40 ಕ್ಲಾಥ್ ಮಾರ್ಕೆಟ್ ಹಾಗೂ 80 ಗ್ರೇನ್ ಗ್ರೋಸರಿ ಅಂಗಡಿಗಳ ಬಾಡಿಗೆಯನ್ನು ನಿಯಮ ಬಾಹಿರವಾಗಿ ಭರಣಾ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಾಮಾನ್ಯ ಸಭೆಯ ಗಮನಕ್ಕೆ ತಂದಿಲ್ಲ. ಈ ಅಂಗಡಿಗಳ ಲೀಜ್ ಅಥವಾ ತೆರಿಗೆ ತುಂಬಿಸಿಕೊಳ್ಳದಿರಲು ಈಗಾಗಲೇ ನ್ಯಾಯಾಲಯ ಸೂಚಿಸಿದೆ ಹಾಗಾಗಿ ಭೂ ಬಾಡಿಗೆ ತುಂಬಿಸಿಕೊಳ್ಳಲು ಬರುವುದಿಲ್ಲ. ಆದರೆ ಅಂಗಡಿಗಳ ಮಾಲೀಕರು ನಿಯಮ ಬಾಹಿರವಾಗಿ 2028-29 ರವರೆಗ ಭೂ ಬಾಡಿಗೆ ತುಂಬಿದ್ದಾರೆ. ಹಿರಿಯ ಅಧಿಕಾರಿಗಳು ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ವಿರೋಧ ಪಕ್ಷದ (ಕಾಂಗ್ರೆಸ್) ಸದಸ್ಯ ಬರ್ಕತ್ ಅಲಿ ಮುಲ್ಲಾ ತಿಳಿಸಿದ್ದಾರೆ.